ಅರಣ್ಯ ಒತ್ತುವರಿ ಹೆಸರಿನಲ್ಲಿ ರಾಜ್ಯ ಸರಕಾರ ಹಾಗೂ ಅರಣ್ಯ ಇಲಾಖೆ ಸಣ್ಣ ರೈತರ ಮೇಲೆ ದೌರ್ಜನ್ಯ ಎಸಗುತ್ತಿದ್ದು, ಇದನ್ನು ಸಹಿಸಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ, ಗ್ರೀನ್ ಆರ್ಮಿ ಇಂಡಿಯಾ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಸಿ.ದಯಾಕರ್ ದೂರಿದರು.
ಅವರು ಸೋಮವಾರ ಮೂಡಿಗೆರೆ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಕಳೆದ ವರ್ಷ ಬರಗಾಲ ಆವರಿಸಿತ್ತು. ಆದರೆ ರೈತರ ನೆರವಿಗೆ ರಾಜ್ಯ ಸರಕಾರ ಬರಲಿಲ್ಲ. ಈ ವರ್ಷ ಅಧಿಕ ಮಳೆಯಿಂದ ರೈತರು ಬೆಳೆದ ಬೆಳೆ ಸರ್ವ ನಾಶವಾಗಿದೆ. ರೈತರು ಸೇರಿದಂತೆ ಕೂಲಿ ಕಾರ್ಮಿಕರು ಬದುಕದ ಸ್ಥಿತಿ ನಿರ್ಮಾಣವಾಗಿದೆ. ಆದರೂ ರಾಜ್ಯ ಸರಕಾರ ರೈತರ ಹಾಗೂ ಕೂಲಿ ಕಾರ್ಮಿಕರ ನೆರವಿಗೆ ಬರಲಿಲ್ಲ. ಬದಲಾಗಿ ಈಗ ಅರಣ್ಯ ಒತ್ತುವರಿ ಹೆಸರಿನಲ್ಲಿ ಸಣ್ಣ ರೈತರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಈ ಹಿಂದೆ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆ ಗಿಡ ಮರಗಳನ್ನು ನೆಟ್ಟು ಪಹಣಿ ಬದಲಾಯಿಸಿ ನಮ್ಮದೇ ಭೂಮಿ ಎಂದು ರೈತರ ಭೂಮಿ ತೆರವಿಗೆ ಮುಂದಾಗಿದೆ. ಮೊದಲು ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿ ನಂತರ ಎಲ್ಲಾ ಜಿಲ್ಲಾಡಳಿತ ಜನಪ್ರತಿನಿಧಿಗಳು ಹಾಗೂ ರೈತರೊಂದಿಗೆ ಚರ್ಚೆ ನಡೆಸಿ ಭೂಮಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಕಂದಾಯ ಭೂಮಿಯನ್ನು ಬಿಡಿಸಿ ಮೊದಲು ನಿವೇಶನ ರಹಿತಿಗೆ ಹಂಚಿಕೆ ಮಾಡಿ ನಂತರ ಕೃಷಿ ಚಟುವಟಿಕೆಗೆ ಭೂಮಿ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಸಿ.ಟಿ.ತುಳಸೇಗೌಡ ಮಾತನಾಡಿ, ಸರ್ಫೇಸಿ ಕಾಯಿದೆ ಮೂಲಕ ಬ್ಯಾಂಕ್ಗಳು ಅನೇಕ ರೈತರ ಜಮೀನು ವಶಕ್ಕೆ ಪಡೆದು ಹರಾಜು ಮಾಡುತ್ತಿದೆ. ಇದರಿಂದ ರೈತರು ಆತ್ಮಹತ್ಯ ದಾರಿ ಹಿಡಿಯುವ ವಾತಾವರಣ ನಿರ್ಮಾಣವಾಗಿದೆ. ಸರ್ಫೇಸಿ ಕಾಯಿದೆಯನ್ನು ಕೂಡಲೇ ರದ್ದುಗೊಳಿಸಬೇಕು ಎಂದ ಅವರು ಅರಣ್ಯ ಇಲಾಖೆ ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಸೆಪ್ಟಂಬರ್ 11ರಂದು ಕಳಸ ಪಟ್ಟಣದಲ್ಲಿ ರೈತ ಸಂಘಟನೆಗಳು, ರಾಜಕೀಯ ಮುಖಂಡರು ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಪ್ರತಿಭಟನೆಗೆ ಎಲ್ಲಾ ರೈತರು ಆಗಮಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಸಂಚಾಲಕ ಡಿ.ಎಸ್.ರಮೇಶ್ ದಾರದಹಳ್ಳಿ ಉಪಸ್ಥಿತರಿದ್ದರು.