ಎರಡು ಜಿಂಕೆಗಳನ್ನು ಶಿಕಾರಿ ಮಾಡಿರುವ ಆರೋಪದ ಮೇಲೆ ನಾಲ್ವರ ಮೇಲೆ ಪ್ರಕರಣ ದಾಖಲಾಗಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದು, ಮೂವರ ಬಂಧನಕ್ಕೆ ಬಲೆ ಬೀಸಲಾಗಿದೆ.
ಎನ್.ಅರ್.ಪುರ ತಾಲ್ಲೂಕಿನ ರಬ್ಬರ್ ತೋಟವೊಂದರಲ್ಲಿ ಜಿಂಕೆಗಳನ್ನು ಶಿಕಾರಿ ಮಾಡಿ ತಲೆ ಕಾಲು ಮೂಳೆಗಳನ್ನು ಚೀಲದಲ್ಲಿ ಕಟ್ಟಿ ಪಕ್ಕದ ತೋಟದ ಬಾವಿಗೆ ಎಸೆದಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.
ಎನ್.ಆರ್.ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮದ ಕೊರಕಲಕೊಪ್ಪ ರಬ್ಬರ್ ತೋಟದಲ್ಲಿ ಜಿಂಕೆ ಶಿಕಾರಿ ಮಾಡಿದ್ದ ಆರೋಪಿಗಳು ಮಾಂಸವನ್ನು ಹದಮಾಡಿ ತಲೆ ಕಾಲು ಮತ್ತು ಚರ್ಮವನ್ನು ಚೀಲದಲ್ಲಿ ಕಟ್ಟಿ ಪಕ್ಕದ ತೋಟದ ಬಾವಿಯೊಳಗೆ ಎಸೆದಿದ್ದರು ಎನ್ನಲಾಗಿದೆ.
ಪಕ್ಕದ ತೋಟದ ಬಾವಿಯಲ್ಲಿ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಅರಣ್ಯ ಮತ್ತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದ ಮೇರೆಗೆ ಚೀಲವನ್ನು ತೆಗೆದು ನೋಡಿದಾಗ ಅದರಲ್ಲಿ ಜಿಂಕೆ ದೇಹದ ಪಳೆಯುಳಿಕೆಗಳು ಕಂಡುಬಂದಿವೆ.
ನಂತರ ಪ್ರಕರಣವನ್ನು ತನಿಖೆ ನಡೆಸಿದ ಅರಣ್ಯ ಅಧಿಕಾರಿಗಳು ನಾಲ್ವರು ಆರೋಪಿಗಳನ್ನು ಗುರುತಿಸಿದ್ದು, ಇವರಲ್ಲಿ ಮುಂಡಗೋಡು ಗ್ರಾಮದ ಸತ್ಯನಾರಾಯಣ ಎಂಬುವವರನ್ನು ಬಂಧಿಸಿದ್ದು, ಕೆ.ಕಣಬೂರು ಗ್ರಾಮದ ಕೆ. ನಾಗೇಂದ್ರ, ರಾಜೇಂದ್ರ ಮತ್ತು ಸಾತ್ವಿಕ್ ಇವರುಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಕೊಪ್ಪ ಡಿಎಫ್ಓ ಎಲ್. ನಂದೀಶ್ ಮಾರ್ಗದರ್ಶನದಲ್ಲಿ ಎನ್.ಆರ್.ಪುರ ಆರ್ ಎಫ್ ಓ ಪ್ರವೀಣ್ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿಗಳಾದ ಮಾರುತಿ ಮಾಳಿ, ಅರುಣಕುಮಾರ್ ಬಾರಂಗಿ, ಅಕ್ಷತಾ, ಅರಣ್ಯ ಪಾಲಕರಾದ ಸತೀಶ್, ಜಯಣ್ಣ, ಶ್ರೀಶೈಲ ನಾವಿ,ಬಲರಾಂಗೌಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.