ಸರ್ಕಾರಿ ಭೂಮಿ ಸಾಗುವಳಿ ಖುಲ್ಲಾ ಮಾಡುವ ಅರಣ್ಯ ಇಲಾಖೆ ಪ್ರಯತ್ನದ ವಿರುದ್ಧ ಸೆಪ್ಟಂಬರ್ 11ರಂದು ಬೆಳೆಗಾರ ಸಂಘಟನೆಗಳು ಕಳಸ ಬಂದ್ ಮಾಡಿ ಪ್ರತಿಭಟನೆಗೆ ಮುಂದಾಗಿವೆ.
ಕಳಸ ಮತ್ತು ಬಾಳೂರು ಹೋಬಳಿ ಕಾಫಿ ಬೆಳೆಗಾರರ ಸಂಘ, ಕರ್ನಾಟಕ ಬೆಳೆಗಾರರ ಒಕ್ಕೂಟ ಮತ್ತು ಕಳಸ ತಾಲ್ಲೂಕು ಒತ್ತುವರಿ ಹೋರಾಟ ಸಮಿತಿ, ವಿವಿಧ ರಾಜಕೀಯ ಪಕ್ಷಗಳು ಮತ್ತು ಇತರೆ ಸಂಘಟನೆಗಳ ಸಹಯೋಗದಲ್ಲಿ ಈ ಚಳವಳಿ ಹಮ್ಮಿಕೊಳ್ಳಲಾಗಿದೆ.
ಸೆಪ್ಟಂಬರ್ 11 ರಂದು ಬುಧವಾರ ಕಳಸ ಪಟ್ಟಣ ಬಂದ್ ಮಾಡಿ ಬೆಳಿಗ್ಗೆ 10 ಗಂಟೆಗೆ ಕಳಸೇಶ್ವರ ದೇವಸ್ಥಾನ ಸಮೀಪದಿಂದ ತಾಲ್ಲೂಕು ಕಛೇರಿ ವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ನಂತರ ಮಂಜಿನ ಕಟ್ಟೆ ಸಮೀಪ ಬಹಿರಂಗ ಸಮಾವೇಶ ಏರ್ಪಡಿಸಲಾಗಿದೆ.
ರೈತರು ಜೀವನೋಪಾಯಕ್ಕಾಗಿ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡಿದ್ದಾರೆಯೇ ಹೊರತು ಇದು ಭೂಕಬಳಿಕೆಯಲ್ಲ. ರೈತರು ಭೂಕಬಳಿಕೆ ಮಾಡಿಲ್ಲ, ಭೂ ಸಾಗುವಳಿ ಮಾಡಿದ್ಧಾರೆ. ಅನುಪಯುಕ್ತ ಭೂಮಿಯಲ್ಲಿ ಬೆಳೆಗಳನ್ನು ಬೆಳೆದು ಭೂಮಿಯಲ್ಲಿ ಸಂಪತ್ತು ಸೃಷ್ಟಿಸುತ್ತಿದ್ಧಾನೆ. ಇದರಿಂದ ದೇಶದ ಆರ್ಥಿಕ ಚಟುವಟಿಕೆಗೆ ಕಾರಣವಾಗುತ್ತಿದೆ. ರೈತರನ್ನು ಅಪರಾಧಿಗಳನ್ನಾಗಿ ನೋಡದೇ ವಾಸ್ತವವನ್ನು ಅರ್ಥಮಾಡಿಕೊಂಡು ಸರ್ಕಾರ ಮುಂದುವರಿಯಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸಿವೆ.
15 ಲಕ್ಷ ಎಕರೆ ಸರ್ಕಾರಿ ಜಮೀನನ್ನು ಸಾಗುವಳಿದಾರರಿಗೆ ಮಂಜೂರು ಮಾಡಬೇಕು. ಕಸ್ತೂರಿರಂಗನ್ ವರದಿ ತಿರಸ್ಕರಿಸಬೇಕು.ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ತಂದು 25 ವರ್ಷ ಸಾಗುವಳಿ ಮಾಡಿದವರಿಗೂ ಹಕ್ಕು ನೀಡಬೇಕು.ವನ್ಯಜೀವಿಗಳ ಉಪಟಳ ತಡೆಯಬೇಕು ಎಂಬ ಬೇಡಿಕೆ ಇರಿಸಿ ಭಾರಿ ಹೋರಾಟ ಮಾಡಲಾಗುತ್ತದೆ.ಕಳಸ ತಾಲ್ಲೂಕಿನ ರಾಜಕೀಯ ಪಕ್ಷಗಳು, ಹಲವಾರು ಸಂಘಟನೆಗಳು ಚಳವಳಿಗೆ ಕರೆ ನೀಡಿವೆ
11ರಂದು ಕಳಸ ಪಟ್ಟಣ ಬಂದ್, ಪ್ರತಿಭಟನಾ ಸಭೆಗೆ ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಸಂಸದರಿಗೆ ಕೂಡ ಆಹ್ವಾನ ನೀಡಲಾಗಿದೆ. ಕಳಸ ಬಾಳೂರು ಹೋಬಳಿ ವ್ಯಾಪ್ತಿಯ ರೈತಾಪಿ ವರ್ಗದವರು ಮತ್ತು ಸಾರ್ವಜನಿಕರು ಈ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸರ್ಕಾರಕ್ಕೆ ನಮ್ಮ ಅಹವಾಲು ತಲುಪುವಂತೆ ಮಾಡಬೇಕು ಎಂದು ಪ್ರತಿಭಟನೆಯ ಸಂಘಟಕರಲ್ಲಿ ಪ್ರಮುಖರಾಗಿರುವ ಕಳಸ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ. ಮಂಜಪ್ಪಯ್ಯ ತಿಳಿಸಿದ್ದಾರೆ.