ಜಮೀನಿನಲ್ಲಿ ಸಿಕ್ಕ ಚಿನ್ನದ ನಾಣ್ಯಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ನಂಬಿಸಿ ತಮಿಳುನಾಡು ಮಧುರೈ ನಿವಾಸಿಯೊಬ್ಬರಿಗೆ ಕರೆ ಮಾಡಿ, 2 ಲಕ್ಷ ನಗದು ಪಡೆದು 200 ಗ್ರಾಂ ನಕಲಿ ಚಿನ್ನದ ನಾಣ್ಯಗಳನ್ನು ನೀಡಿದ್ದ ಪ್ರಕರಣದಲ್ಲಿ ಬೀರೂರು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿ 2 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.
ಸುಮಾರು 2 ಲಕ್ಷ ರೂ ಬೆಲೆ ಬಾಳುವ ನಕಲಿ ಚಿನ್ನದ ನಾಣ್ಯಗಳನ್ನು ನೀಡಿ ವಂಚಿಸಿದ್ದ ಆರೋಪಿಯನ್ನು ಬೀರೂರು ಪೊಲೀಸರು ಬಂದಿದ್ದಾರೆ.
ತಮಿಳುನಾಡು ರಾಜ್ಯದ ಮಧುರೈ ನಿವಾಸಿ ವೆಂಕಟೇಶನ್ ಎಂಬುವರಿಗೆ ರವಿ ಎಂಬಾತ ಫೋನ್ ಕರೆ ಮಾಡಿ ತಾನು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಚಿನ್ನದ ನಾಣ್ಯಗಳು ಸಿಕ್ಕಿವೆ ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇನೆಂದು ನಂಬಿಸಿದ್ದ ಎನ್ನಲಾಗಿದೆ ಜುಲೈ 7 ರಂದು ಬೀರೂರಿನ ಬಳಿ ವೆಂಕಟೇಶನರನ್ನು ಕರೆಸಿಕೊಂಡು ಒಂದು ಅಸಲಿ ಚಿನ್ನದ ನಾಣ್ಯವನ್ನು ಸ್ಯಾಂಪಲ್ ಗಾಗಿ ಕೊಟ್ಟು ಕಳುಹಿಸಿದ್ದ.
ವೆಂಕಟೇಶ್ ಇದನ್ನು ಪರಿಶೀಲಿಸಿ ಅಸಲಿ ಎಂದು ತಿಳಿದು ಆಗಸ್ಟ್ 29 ರಂದು 2 ಲಕ್ಷ ಹಣವನ್ನು ಅವರ ಸ್ನೇಹಿತರ ಬಳಿ ಸಾಲ ಮಾಡಿ ಹೊಂದಿಸಿಕೊಂಡು ಬೀರೂರಿಗೆ ಬಂದು ಹಣ ನೀಡಿ 200 ಗ್ರಾಂ( ನಕಲಿ )ಚಿನ್ನದ ನಾಣ್ಯಗಳನ್ನು ಪಡೆದಿದ್ದರು.
ನಂತರದಲ್ಲಿ ನಾಣ್ಯಗಳನ್ನು ಪರಿಶೀಲಿಸಿದಾಗ ಮೋಸ ಹೋಗಿರುವುದು ತಿಳಿದು ಆಗಸ್ಟ್ 30 ರಂದು ಬೀರೂರು ಪೊಲೀಸ್ ಠಾಣೆಗೆ ವೆಂಕಟೇಶನ ದೂರು ನೀಡಿದ್ದರು.
ಬೀರೂರು ಪೊಲೀಸ್ ಠಾಣೆಯ ಪಿ.ಎಸ್.ಐ ಸಜಿತ್ ಕುಮಾರ್ ನೇತೃತ್ವದಲ್ಲಿ ಹೆಡ್ ಕಾನ್ಸೆಬಲ್ ಡಿ.ವಿ.ಹೇಮಂತ್ ಕುಮಾರ್ ಹಾಗೂ ಕಾನ್ಸ್ ಟೆಬಲ್ ಬಿ.ಹೆಚ್. ರಾಜಪ್ಪ ಮತ್ತು ಕೆ.ದುರುಗಪ್ಪ ನೇತೃತ್ವದ ತಂಡವು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹಲಕನಹಾಳ್ನ ರಾಜಪ್ಪ ಎಂಬಾತನನ್ನು ಬಂಧಿಸಿ ಮನೆಯಲ್ಲಿ ಬಚ್ಚಿಟ್ಟಿದ್ದ 2 ಲಕ್ಷ ರೂ ವಶ ಪಡಿಸಿಕೊಂಡಿರುತ್ತಾರೆ.