ಪರಿಸರ ಸೂಕ್ಷ್ಮ ವಲಯವೆಂದು ಗುರುತಿಸಲ್ಪಟ್ಟಿರುವ ಮೂಡಿಗೆರೆ ಹಾಗೂ ಸಕಲೇಶಪುರ ತಾಲೂಕುಗಳ ಪಶ್ಚಿಮಘಟ್ಟದ ಸಾಲಿನಲ್ಲಿ ನೂರಾರು ಜೀಪುಗಳೊಂದಿಗೆ ಶನಿವಾರ ಆಫ್ ರೋಡ್ ಈವೆಂಟ್ ನಡೆಸಿದ್ದು ಈ ಬಗ್ಗೆ ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗದಿಂದ ಆಗಮಿಸಿದ್ದ ನೂರಾರು ಜೀಪುಗಳು, ಜಿಪ್ಸಿಗಳು ಮೂಡಿಗೆರೆ ತಾಲೂಕಿನ ಹೇರಿಕೆ ಸಮೀಪದ ಲಕ್ಷ್ಮೀ ಸರಸ್ವತಿ ಎಸ್ಟೇಟ್ ಭಾಗದಲ್ಲಿ ಆಫ್ ರೋಡ್ ಈವೆಂಟ್ ನಡೆಸಿದ್ದು ಕೆಲವು ಕಡೆ ಮೀಸಲು ಅರಣ್ಯ ಭಾಗದಲ್ಲಿಯೂ ಜೀಪುಗಳು ಓಡಾಟ ಕಂಡು ಬಂದಿದೆ.
ಇದರ ಬಗ್ಗೆ ಸಾರ್ವಜನಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಈ ಪ್ರದೇಶವು ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು ಕಾಡಾನೆಗಳ ಆವಾಸಸ್ಥಾನವಾಗಿದೆ ಜೊತೆಗೆ ವಿವಿಧ ಕಾಡು ಪ್ರಾಣಿಗಳ ಆವಾಸಸ್ಥಾನವಾಗಿದೆ ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಏಕಕಾಲದಲ್ಲಿ ನೂರಾರು ವಾಹನಗಳು ಓಡಾಡುವುದರಿಂದ ಇಲ್ಲಿನ ಪರಿಸರದಲ್ಲಿ ಕಾಡಾನೆಗಳು ಭಯಭೀತರಾಗಿ ಗ್ರಾಮದ ಕಡೆ ಬರುವ ಸಾಧ್ಯತೆ ಹೆಚ್ಚಿದ್ದು ಜೊತೆಗೆ ಬೆಟ್ಟದ ಸವಕಳಿಯಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಇಂತಹ ಮೋಜು-ಮಸ್ತಿನ ಇವೆಂಟ್ ಗಳನ್ನು ನಡೆಸಲು ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ಅನುಮತಿ ನೀಡಿದೆಯೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಈ ಬಗ್ಗೆ ಚಿಕ್ಕಮಗಳೂರು ಡಿ ಎಫ್ ಓ ರಮೇಶ್ ಬಾಬು ಅವರನ್ನು ಪ್ರಶ್ನಿಸಿದಾಗ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿಲ್ಲ ಒಂದು ವೇಳೆ ಅರಣ್ಯ ಪ್ರದೇಶದಲ್ಲಿ ಇಂತಹ ಚಟುವಟಿಕೆಗಳು ನಡೆಸಿರುವುದು ಕಂಡು ಬಂದರೆ ಅಂತವರ ವಿರುದ್ಧ ಕ್ರಮ ಜರುಗಿಸಲಾಗುವುದು. ನಮ್ಮ ಅರಣ್ಯ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿದ್ದು ಅವರು ನೀಡುವ ವರದಿಯ ಮೇಲೆ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
ಕೆಲವೇ ಜನರ ಮೋಜುಮಸ್ತಿಗೆ ಕಾಡಾನೆಗಳ ಆವಾಸ ಸ್ಥಾನದಲ್ಲಿ ಇಂತಹ ರ್ಯಾಲಿಗಳನ್ನು ನಡೆಸುತ್ತಿರುವವರ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು, ಎಲ್ಲಿಂದಲೋ ಬಂದು ನಮ್ಮ ಪರಿಸರದಲ್ಲಿ ಏಕಕಾಲಕ್ಕೆ ನೂರಾರು ವಾಹನಗಳ ಜಾತ್ರೆ ನಡೆಸುತ್ತಿರುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಂತಹ ಈವೆಂಟ್ ಗಳನ್ನು ನಡೆಸಲು ಎಸ್ಟೇಟ್ ಒಳಗೆ ಅವಕಾಶ ಕೊಟ್ಟಿರುವ ಮಾಲೀಕರ ಮೇಲೂ ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.