ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿ ಅತ್ತಿಗೆರೆಯ ಅಂಗನವಾಡಿ ಕೇಂದ್ರವು ಶಿಥಿಲವಾಗಿದ್ದು ಮಳೆಗೆ ಕುಸಿಯುವ ಹಂತ ತಲುಪಿದ ಬಗ್ಗೆ ಮತ್ತು ಅಂಗನವಾಡಿಯಲ್ಲಿ ಪದೇ ಪದೇ ನಾಗರಹಾವು ಕಾಣಿಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ತಿಳಿದು ಸಿಡಿಪಿಒ ಅತ್ತಿಗೆರೆ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಕಟ್ಟಡ ಪರಿಶೀಲಿಸಿದರು. ಸದ್ಯಕ್ಕೆ ಪಕ್ಕದ ಸಮುದಾಯ ಭವನಕ್ಕೆ ಸ್ಥಳಾಂತರಿಸಲು ಅಂಗನವಾಡಿ ಕಾರ್ಯಕರ್ತೆಗೆ ಸೂಚನೆ ನೀಡಿದರು.
ಬಳಿಕ ಸಿಡಿಪಿಒ ಮಹೇಶ್ ಮಾತನಾಡಿ, ‘ಅಂಗನವಾಡಿ ಕಟ್ಟಡ ಸಂಪೂರ್ಣ ಮಣ್ಣಿನ ಗೋಡೆಯಾಗಿದ್ದು ಶಿಥಿಲಗೊಂಡಿದೆ. ಅಲ್ಲಲ್ಲಿ ಗೋಡೆಗೆ ಬಿಲಗಳಿವೆ. ಇದರಲ್ಲಿ ಶಾಲೆ ನಡೆಸಲು ಸಾಧ್ಯವಿಲ್ಲ.ಹಾವುಗಳ ಆಶ್ರಯ ನೀಡುವ ತಾಣವೂ ಆದಂತಿದೆ.ಮಕ್ಕಳ ಸುರಕ್ಷತೆಗೆ ಸದ್ಯಕ್ಕೆ ಅಂಗನವಾಡಿ ಸ್ಥಳಾಂತರ ಮಾಡಲು ಸೂಚಿಸಿದ್ದೇನೆ. ಈ ಬಗ್ಗೆ ತರುವೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರೊಂದಿಗೆ ಈ ಬಗ್ಗೆ ಮಾತನಾಡಿದ್ದೇನೆ. ವಿವಿಧ ಯೋಜನೆಯಡಿ ತಾ.ಪಂ. ಗೆ ನೂತನ ಕಟ್ಟಡದ ಬಗ್ಗೆ ಪ್ರಸ್ತಾವ ಸಲ್ಲಿಸಲಾಗುವುದು.ಅನುಮೋದನೆ ದೊರೆತ ಬಳಿಕ ನೂತನ ಕಟ್ಟಡ ಕಟ್ಟುವ ಬಗ್ಗೆ ಚಿಂತನೆ ನಡೆಸಲಾಗುವುದು’ಎಂದರು.
ಅಂಗನವಾಡಿ ಭೇಟಿಯ ಸಂದರ್ಭದಲ್ಲಿ ತರುವೆ ಗ್ರಾ.ಪಂ.ಸದಸ್ಯ ಎ.ಎನ್.ರಘು, ಅಂಗನವಾಡಿ ಕಾರ್ಯಕರ್ತೆ ಅರ್ಚನಾ, ಮುಖಂಡ ಪ್ರಭಾಕರ್ ಬಿನ್ನಡಿ, ಗ್ರಾಮಸ್ಥರಾದ ಮಹೇಶ್,ಕಿರಣ್,ರತನ್ ಮತ್ತಿತರರು ಇದ್ದರು.