ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಕಾಡಾನೆಯೊಂದು ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿರುವ ಧಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ತಾಲ್ಲೂಕಿನ ಭದ್ರಾ ಅಭಯಾರಣ್ಯಕ್ಕೆ ಹೊಂದಿಕೊಂಡಂತೆ ಇರುವ ಕೊಳಗಾಮೆ ಗ್ರಾಮದಲ್ಲಿ ಮಂಗಳವಾರ ಈ ದುರ್ಘಟನೆ ನಡೆದಿದೆ.
ಕೊಳಗಾಮೆ ಗ್ರಾಮದ ಆರಾಧನಾ ಎಸ್ಟೇಟ್ ನಲ್ಲಿ ಕಾಡಾನೆಯೊಂದು ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದೆ. ಸುಮಾರು 40 ವರ್ಷ ವಯಸ್ಸಿನ ಗಂಡಾನೆ ವಿದ್ಯುತ್ ಶಾಕ್ ನಿಂದ ಮೃತಪಟ್ಟಿದೆ.
ಆಹಾರ ಅರಸಿ ಕಾಡಂಚಿನ ತೋಟಕ್ಕೆ ಬಂದಿದ್ದ ಆನೆ ಅಡಿಕೆ ಮರವೊಂದನ್ನು ಉರುಳಿಸಿದ್ದು ಅದು ಪಕ್ಕದಲ್ಲಿಯೇ ಹಾದು ಹೋಗಿದ್ದ ವಿದ್ಯುತ್ ತಂತಿ ಮೇಲೆ ಬಿದ್ದು ತಂತಿ ಜೋತುಬಿದ್ದು ಆನೆಗೆ ತಾಗಿದ್ದು ಜೊತೆಗೆ ನೆಲವು ಒದ್ದೆಯಿದ್ದುದ್ದರಿಂದ ವಿದ್ಯುತ್ ಭೂಮಿಗೆಲ್ಲ ಹರಿದ ಪರಿಣಾಮ ತೀವ್ರ ವಿದ್ಯುತ್ ಶಾಕ್ ನಿಂದ ಆನೆ ಸ್ಥಳದಲ್ಲೇ ಪ್ರಾಣಬಿಟ್ಟಿದೆ.
ಈ ಆನೆ ಈ ಭಾಗದಲ್ಲಿ ಬಹುಕಾಲದಿಂದಲೂ ಸಂಚರಿಸುತ್ತಿತ್ತು ಎನ್ನಲಾಗಿದೆ. ಯಾವುದೇ ತೊಂದರೆ ನೀಡದೇ ತನ್ನಷ್ಟಕ್ಕೆ ಬಂದು ಹೋಗುತ್ತಿತ್ತು. ಹಾಗಾಗಿ ಜನರು ಇದರ ಬಗ್ಗೆ ಹೆಚ್ಚು ಆತಂಕ ಹೊಂದಿರಲಿಲ್ಲ. ಇಂತಹ ಸಾಧು ಸ್ವಭಾವದ ಆನೆ ವಿದ್ಯುತ್ ಶಾಕ್ ಗೆ ಬಲಿಯಾಗಿರುವುದಕ್ಕೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ವಿವಿಧ ಕಾರಣಗಳಿಂದ ಸತತವಾಗಿ ಕಾಡಾನೆಗಳು ಸಾವನ್ನಪ್ಪುತ್ತಿವೆ. ಈಗ್ಗೆ ಕೆಲ ತಿಂಗಳ ಹಿಂದಷ್ಟೇ ಆಲ್ದೂರು ಸಮೀಪದ ಕಂಚಿನಕಲ್ ದುರ್ಗದಲ್ಲಿ ಕಾಡಾನೆಯೊಂದು ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿತ್ತು.
ಈ ಆನೆ ಸಾವಿಗೆ ಮೆಸ್ಕಾಂ ಮತ್ತು ಅರಣ್ಯ ಇಲಾಖೆಯವರೇ ಹೊಣೆ ಹೊರಬೇಕು ಏಕೆಂದರೆ ಅಲ್ಲಿರುವ ಎಲೆಕ್ಟ್ರಿಕ್ ಕಂಬಗಳು ಸುಮಾರು 50 ವರ್ಷದ ಹಿಂದೆ ಹಾಕಿದ ಕಂಬಗಳು ಎಲೆಕ್ಟ್ರಿಕ್ ವೈರ್ ಗಳು ಜೋತಾಡುತ್ತಿವೆ ಸುಮಾರು 12ಡಿ ಎತ್ತರದಲ್ಲಿ ಜೊತೆಗೆ ಕಂಬಗಳ ಎತ್ತರ ಸುಮಾರು ಒಂದು 10 ಅಡಿ 15 ಅಡಿ ಎತ್ತರದ ಮಾತ್ರ ಇರುವುದು. ಆನೆಗಳ ಕಾರಿಡಾರ್ ಇರುವಲ್ಲಿ ಕಂಬಗಳ ಎತ್ತರವನ್ನು ಏರಿಸಿಲ್ಲದೇ ಇರುವುದು ಕಾಡಾನೆ ಸಾವಿಗೆ ಕಾರಣವಾಗಿದೆ.
ವಿಕ್ರಂಗೌಡ ಹುರುಡಿ