ರಾಜ್ಯದಲ್ಲಿ ಮೆಸ್ಕಾಂ, ಚೆಸ್ಕಾಂ, ಬೆಸ್ಕಾಂ ಇಲಾಖೆಯಲ್ಲಿ ಸುಮಾರು 15 ವರ್ಷದಿಂದ 20 ವರ್ಷ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ ನೌಕರರನ್ನು ಖಾಯಂಗೊಳಿಸಸಲು ಅಧಿಕಾರಿಗಳು ಮುಂದಾಗಬೇಕೆಂದು ಕಾಂಗ್ರೆಸ್ ಮುಖಂಡ ಕೆ.ಭರತ್ ಒತ್ತಾಯಿಸಿದರು.
ಅವರು ಮಂಗಳವಾರ ಮೂಡಿಗೆರೆ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿಕ್ಕಮಗಳೂರು ಇಂದನ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಯಿಸುತ್ತಿದ್ದ ಸ್ಪೆಷಲ್ ಆಪರೇಟರ್, ಸ್ಟೇಷಲ್ ಹೆಲ್ಪರ್, ಗ್ಯಾಂಗ್ಮ್ಯಾನ್ ಮತ್ತು ಮೀಟರ್ ರೀಡರ್ ಇವರುಗಳನ್ನು ಗುತ್ತಿಗೆ ಪಡೆದಂತಹ ಕಂಪನಿ, ಕಂಪನಿಯ ಮಾಲೀಕರು, ಸುಮಾರು 15 ರಿಂದ 20 ವರ್ಷ ಹಗಲು-ಇರುಳೆನ್ನದೆ ಗುಡ್ಡಗಾಡು ಪ್ರದೇಶಗಳಲ್ಲಿ ದುಡಿಸಿಕೊಂಡಿರುತ್ತಾರೆ. ಕಳೆದ ಕೆಲ ತಿಂಗಳ ಹಿಂದೆ ಇವರುಗಳನ್ನು ಕ್ಷುಲ್ಲಕ ಕಾರಣಕ್ಕೆ ಕೆಲಸದಿಂದ ಕೈ ಬಿಡಲಾಗಿದೆ. ಇದು ಸರಿಯಲ್ಲ ಎಂದು ಹೇಳಿದರು.
ಈ ಬಗ್ಗೆ ರಾಜ್ಯ ಇಂಧನ ಮಂತ್ರಿ ಕೆ.ಜೆ.ಜಾರ್ಜ್ ಅವರಲ್ಲಿ ಉತ್ತರ ಕರ್ನಾಟಕ ಭಾಗದ ನೌಕರರು ತಮ್ಮ ಸಮಸ್ಯೆಗಳನ್ನು ಸಚಿವರಲ್ಲಿ ಮನವಿ ಮಾಡಿಕೊಂಡಾಗ, ಸಚಿವರು ರಾಜ್ಯದಲ್ಲಿ ಈ ತೊಂದರೆಗೆ ಒಳಪಟ್ಟಿರುವವರನ್ನು ಒಳಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡು ಸೇವಾ ಭದ್ರತೆ ಒದಗಿಸುವ ಭರವಸೆ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ, ಈ ಬಗ್ಗೆ ಮರುವಿಮರ್ಶೆ ಮಾಡಿ ಹಂತ ಹಂತವಾಗಿ ಒಳಗುತ್ತಿಗೆಗೆ ಒಳಪಡಿಸಲು ಅಗತ್ಯ ವರದಿಯನ್ನು ಇಂಧನ ಇಲಾಖೆಯಿಂದ ಪಡೆದುಕೊಳ್ಳಲು ಸೂಚಿಸಿರುತ್ತಾರೆ. ಅದರೆ ಅಧಿಕಾರಿಗಳು ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈ ಬಗ್ಗೆ 15 ದಿನದ ನಂತರ ಖುದ್ದು ಮುಖ್ಯಮಂತ್ರಿ ಭೇಟಿ ಮಾಡಿ ಹೊರ ಗುತ್ತಿಗೆ ನೌಕರರಿಗೆ ನ್ಯಾಯ ಸಿಗುವಂತೆ ಮನವಿ ಮಾಡಿಕೊಳ್ಳುವ ಜತೆಗೆ ಗುತ್ತಿಗೆ ಪಡೆಯುವ ಕಂಪನಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಇಂದ್ರೇಶ್, ರಂಜಿತ್, ಚಂದ್ರೇಶ್, ಚಂದ್ರು ಕಿರುಗುಂದ, ಶಶಿ, ಸವಿನಯ್, ಗೋಪಾಲ, ಕೃಷ್ಣ, ಮಹೇಶ ಮತ್ತಿತರರಿದ್ದರು.