ಕಾರಿನ ಗ್ಲಾಸ್ ಮುಚ್ಚಿ ಮಲಗಿದ್ದ ಚಾಲಕರೊಬ್ಬರು ಉಸಿರು ಗಟ್ಟಿ ಮೃತಪಟ್ಟ ಘಟನೆ ಮಣಿಪಾಲದಲ್ಲಿ ಆಗಸ್ಟ್ 14ರಂದು ರಾತ್ರಿ ವೇಳೆ ಸಂಭವಿಸಿರುವುದು ವರದಿಯಾಗಿದೆ.
ಮೃತರನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಆನಂದ(37) ಎಂದು ಗುರುತಿಸಲಾಗಿದೆ. ಇವರು ತನ್ನ ಸ್ನೇಹಿತನ ತಂದೆಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗೆ ಕಾರಿನಲ್ಲಿ ಕರೆದು ಕೊಂಡು ಬಂದಿದ್ದರು ಎನ್ನಲಾಗಿದೆ, ರೋಗಿಯನ್ನು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಲಾಗಿತ್ತು. ರೋಗಿಯೊಂದಿಗೆ ಅವರ ಮಗ ಆಸ್ಪತ್ರೆಯಲ್ಲೇ ಉಳಿದುಕೊಂಡಿದ್ದರು.
ಮಣಿಪಾಲದಲ್ಲಿ ಉಳಿದುಕೊಳ್ಳಲು ಯಾವುದೇ ರೂಮ್ ಸಿಗದ ಕಾರಣ ಕಾರಿನ ಚಾಲಕ ಆನಂದ ಮಣಿಪಾಲ ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿದ ಕಾರಿನಲ್ಲಿಯೇ ರಾತ್ರಿ ಮಲಗಿದ್ದರು. ಕಾರಿನ ಗ್ಲಾಸನ್ನು ಮುಚ್ಚಿಕೊಂಡು ಮಲಗಿದ್ದ ಇವರು, ಒಳಗಡೆ ಉಸಿರುಗಟ್ಟಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. KA 18 P 1551 ನಂಬರಿನ ಕಾರಿನೊಳಗೆ ಚಾಲಕ ಮಲಗಿದ್ದಲ್ಲಿಯೇ ಉಸಿರುಚೆಲ್ಲಿದ್ದಾರೆ.
ಬೆಳಿಗ್ಗೆ ಅವರ ಸ್ನೇಹಿತ ಕಾರಿನ ಬಳಿ ಬಂದಾಗ ಇವರು ಮಲಗಿದ ಸ್ಥಿತಿಯಲ್ಲೇ ಇದ್ದರು, ನಿದ್ರೆ ಮಾಡಿರಬಹುದೆಂದು ಅವರು ವಾಪಾಸ್ಸು ಹೋಗಿ ಮತ್ತೊಮ್ಮೆ ಬಂದು ನೋಡಿದಾಗಲು ಇವರು ಅದೇ ಸ್ಥಿತಿಯಲ್ಲಿ ಮಲಗಿದ್ದನ್ನು ಗಮನಿಸಿ ಸಂಶಯಗೊಂಡು ಕಾರಿನ ಗ್ಲಾಸ್ ಒಡೆದಾಗ ಆನಂದ ಅವರು ಮೃತಪಟ್ಟಿರುವುದು ಗೊತ್ತಾಗಿದೆ. ನಂತರ ಮಣಿಪಾಲ ಠಾಣೆಗೆ ಮಾಹಿತಿನೀಡಿದ್ದು ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಕಾರಿನೊಳಗೆ ಮಲಗುವಾಗ ಅಥವಾ ಮಕ್ಕಳನ್ನು ಕಾರಿನಲ್ಲಿ ಬಿಟ್ಟು ಹೊರಗೆ ಬರುವಾಗ ಕಾರಿನ ಗ್ಲಾಸ್ ಸ್ವಲ್ಪವಾದರೂ ಇಳಿಸಿರಬೇಕು. ಇಲ್ಲದೇ ಇದ್ದರೆ ಇಂತಹ ಅನಾಹುತಗಳು ಸಂಭವಿಸುತ್ತವೆ. ಇದು ಕಾರು ಚಾಲನೆ ಮಾಡುವವರಿಗೆ ಒಂದು ಎಚ್ಚರಿಕೆಯಾಗಿದೆ.