ಪ್ರೇಯಸಿಗಾಗಿ ಬುರ್ಖಾ ಧರಿಸಿ ಬಂದಿದ್ದ ಯುವಕನೋರ್ವನನ್ನು ಸಾರ್ವಜನಿಕರು ಹಿಗ್ಗಾಮುಗ್ಗ ಥಳಿಸಿದ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
ಬುರ್ಖಾ ಹಾಕಿಕೊಂಡು ನಗರದ ಚೇತನ ನರ್ಸಿಂಗ್ ಹೋಂ ಬಳಿ ಕಾಯುತ್ತಾ ನಿಂತಿದ್ದ ಯುವಕನ ಚಲನ ವಲನಗಳಿಂದ ಸಂಶಯಗೊಂಡ ವ್ಯಕ್ತಿಯೊಬ್ಬರು ವಿಚಾರಣೆ ನಡೆಸಿದಾಗ ಬುರ್ಖಾದೊಳಗೆ ಇದ್ದದ್ದು ಮಹಿಳೆಯಲ್ಲ ಪುರುಷ ಎಂಬುದು ಪತ್ತೆಯಾಗಿದೆ. ನಂತರ ಸಾರ್ವಜನಿಕರು ಆತನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಂಗಳವಾರ ಸಂಜೆ ಈ ಘಟನೆ ನಡೆದಿದೆ. ಬೆರಳಿಗೆ ನೈಲ್ ಪಾಲಿಶ್ ಹಾಕಿ ಶೃಂಗಾರ ಮಾಡಿಕೊಂಡಿದ್ದ ಯುವಕ, ಕಣ್ಣಿಗೆ ಹೆಣ್ಣುಮಕ್ಕಳ ರೀತಿಯ ಕನ್ನಡಕವನ್ನು ಸಹ ಧರಿಸಿದ್ದ, ಆತನ ಚಲನವಲದಿಂದ ಮತ್ತು ಕೈ, ಬೆರಳು ಕಾಲು ನೋಡಿ ಅನುಮಾನಗೊಂಡ ಸ್ಥಳೀಯರು ವಿಚಾರಿಸುವಾಗ ನಿಜ ಬಣ್ಣ ಬಯಲಾಗಿದೆ.
ಬಾಳೆಹೊನ್ನೂರು ಮೂಲದ ಹರೀಶ್ ಎಂಬ ಯುವಕ ತನ್ನ ಪ್ರೇಯಸಿಗಾಗಿ ಈ ರೀತಿ ವೇಷ ಬದಲಿಸಿ ಬಂದು ಕಾಯುತ್ತಾ ನಿಂತಿದ್ದ ಎನ್ನಲಾಗಿದೆ. ಆತನ ಬಳಿ ಇದ್ದ ಕವರ್ ಒಂದರಲ್ಲಿ ಕತ್ತರಿಯೊಂದು ಪತ್ತೆಯಾಗಿದೆ. ಬಾಳೆಹೊನ್ನೂರಿನಲ್ಲಿ ಬುರ್ಖಾ ಖರೀದಿಸಿ ಅನ್ನು ಧರಿಸಿ ಚಿಕ್ಕಮಗಳೂರಿಗೆ ಬಂದಿದ್ದ ಎನ್ನಲಾಗಿದೆ. ಚಿಕ್ಕಮಗಳೂರು ಬಸವನಹಳ್ಳಿ ಪೊಲೀಸರಿಂದ ಯುವಕನ ವಿಚಾರಣೆ ನಡೆಸಿದ್ದಾರೆ.