ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ವಿಚಾರದಲ್ಲಿ ಯಾವ ಪಾದಯಾತ್ರೆ ಜನಾಂದೋಲನ ನಡೆಯಲಿಲ್ಲ, ಸಾಹಿತ್ಯ ಪರಿಷತ್ ಸೇರಿದಂತೆ ಯಾವೊಂದು ಸಂಘಟನೆಗಳು ಸಂಘಟಿತ ಪ್ರಯತ್ನ ನಡೆಸಲಿಲ್ಲ. ಇದು ನಮ್ಮ ನಾಡಿನ ದುರಂತ ಎಂದು ಬೇಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಹೆಚ್.ಎಂ. ಮಹೇಶ್ ಹೇಳಿದರು.
ಅವರು ಭಾನುವಾರ ಮೂಡಿಗೆರೆ ಜೇಸಿ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಸಾಹಿತ್ಯ ಪರಿಷತ್ತು ಕೇವಲ ಸಮ್ಮೇಳನ ಮಾಡುವ ಸಂಸ್ಥೆಯಾಗಬಾರದು. ಕನ್ನಡದ ವಿಚಾರ ಬಂದಾಗ ಮುಂದೆ ನಿಂತು ಹೋರಾಟಕ್ಕೆ ಇಳಿಯುವ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದರು. ಕನ್ನಡ ಉಳಿದರೆ ಕನ್ನಡ ಸಮುದಾಯ ಉಳಿಯುತ್ತೆ. ಕನ್ನಡಕ್ಕೆ ಮೀಸಲು ಎಂಬುದು ಇಂದು ಕನಸಾಗುತ್ತಿದೆ. ಪ್ರಭುತ್ವದ ವಿರುದ್ದ ಯಾರು ಧ್ವನಿ ಎತ್ತುತ್ತಿಲ್ಲ.
ಕನ್ನಡ ಸಾಹಿತ್ಯ ಪರಿಷತ್ತು ಲಾಭದ ಸಂಸ್ಥೆಯಾಗಬಾರದು. ನೆಲ ಜಲ ಬಾಷೆ ಕಟ್ಟುವ ಕೆಲಸವಾಗಬೇಕು. ಮನೆ ಮನೆಯಲ್ಲಿ ಕನ್ನಡದ ವಾತಾವರಣ ಬೆಳೆಸುವಂತಾಗಬೇಕು. ಹೊಗಳಿಕೆ ತೆಗಳಿಕೆ ಸಮಾಜಸಲ್ಲಿ ಸಹಜ ಅದನ್ನ ಮೀರಿ ನೂತನ ಪದಾಧಿಕಾರಿಗಳು ಕನ್ನಡ ಕಟ್ಟುವ ಕೆಲಸ ಮಾಡಿ. ಎಂದರು.
ಸಾಹಿತಿ ಹಳೇಕೋಟೆ ರಮೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿ ಎಸ್.ಎಸ್. ವೆಂಕಟೇಶ್ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞವಿಧಿ ಬೋಧಿಸಿದರು.
ನಿಕಟಪೂರ್ವ ಅಧ್ಯಕ್ಷ ಹೆಚ್.ಎಂ. ಶಾಂತಕುಮಾರ್ ನೂತನ ಅಧ್ಯಕ್ಷರಿಗೆ ಧ್ವಜ ಹಸ್ತಾಂತರ ಮಾಡಿ ತಮ್ಮ ಅವಧಿಯಲ್ಲಿ ಕೈಗೊಂಡ ಕಾರ್ಯಕ್ರಮಗಳ ವಿವರ ನೀಡಿದರು ಮತ್ತು ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು.
ನೂತನ ಅಧ್ಯಕ್ಷ ಡಿ.ಕೆ. ಲಕ್ಷ್ಮಣಗೌಡ ಮಾತನಾಡಿ ಕನ್ನಡ ಕೆಲಸಕ್ಕೆ ಎಲ್ಲರ ಸಹಕಾರ ಪ್ರಮುಖ. ಕನ್ನಡ ಕಟ್ಟುವುದು ದೇಶ ಕಟ್ಟಿದ್ದಂತೆ. ಭಾಷೆ ನೆಲ ಜಲ ಉಳಿಸಿ ಬೆಳಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸೋಣ. ಇಂದಿನ ಡಿಜಿಟಲ್ ತಂತ್ರಜ್ಞಾನ ಬಳಸಿ ಕನ್ನಡ ಸಾಹಿತ್ಯ ಉಳಿಯಲು ಎಲ್ಲರು ಪರಿಷತ್ ಸದಸ್ಯರಾಗೋಣ ಮತ್ತು ಮನೆ ಮನೆ ತಲುಪುವ ವ್ಯವಸ್ಥೆ ಮಾಡೋಣ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕ.ಸಾ.ಪ. ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಯಾವುತ್ತೂ ಕನ್ನಡ ಪರ ಕಾರ್ಯದಲ್ಲಿ ಮುಂಚೂಣಿಯಲ್ಲಿ ನಿಂತಿದೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡುತ್ತಿದ್ದು, ಅನೇಕ ಮಹಿಳೆಯರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮುಂದೆ ಬಂದು ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನಗಳು ಅನೇಕ ಪ್ರತಿಭೆಗಳ ಅನಾವರಣಕ್ಕೆ ಕಾರಣವಾಗುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಗಣೇಶ್ ಮಗ್ಗಲಮಕ್ಕಿ. ನಿರ್ಮಲ ಮಂಚೇಗೌಡ. ಅನೀತಾ ಜಗದೀಪ್. ಮಂಜುಬಕ್ಕಿ. ವಿಶಾಲನಾಗರಾಜ್ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಸುಚಿತ್ರ ಪ್ರಸನ್ನ ನಿರೂಪಿಸಿದರು, ಗೌರವ ಕಾರ್ಯದರ್ಶಿ ಪ್ರಕಾಶ್ ಬಕ್ಕಿ ಸ್ವಾಗತಿಸಿ, ಇಂಪಾ ಸವಿನ್ ವಂದಿಸಿದರು.