ಗಾಡ್ಗಿಲ್ ವರದಿ ವಿರೋಧಿಸಿದ ಹಿನ್ನಲೆಯಲ್ಲಿ ಪಶ್ಚಿಮಘಟ್ಟ ಪ್ರದೇಶಗಳು ನಾಶವಾಗುವ ಸ್ಥಿತಿಗೆ ತಲುಪಿದೆ. ಇದಕ್ಕೆ ಕೇರಳ ರಾಜ್ಯದ ವಯನಾಡ್ನಲ್ಲಿ ನಡೆದ ಭೀಕರ ದುರಂತ ಸಾಕ್ಷಿಯಾಗಿದೆ. ವಯನಾಡನ್ನು ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಸರಕಾರ ಘೋಷಿಸಬೇಕೆಂದು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಒತ್ತಾಯಿಸಿದರು.
ಅವರು ಶುಕ್ರವಾರ ಮೂಡಿಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇರಳ, ಗೋವಾ, ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ಮತ್ತು ತಮಿಳುನಾಡು ರಾಜ್ಯಗಳು ಪಶ್ಚಿಮಘಟ್ಟ ಪ್ರದೇಶವನ್ನೊಳಗೊಂಡಿದೆ. 2010ರಲ್ಲಿ ಯುಪಿಎ ಸರಕಾರ ಪಶ್ಚಿಮಘಟ್ಟ ನಾಶವಾಗುತ್ತಿರುವ ಬಗ್ಗೆ ಮಾದವ ಗಾಡ್ಗಿಲ್ ಅವರಿಗೆ ಅಧ್ಯಯನ ಮಾಡಲು ಆದೇಶ ನೀಡಿತು. ನಂತರ ಅವರು 6 ರಾಜ್ಯಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಮರಳು, ಕಲ್ಲುಕೋರೆ, ಟಿಂಬರ್ ಮಾಫಿಯಾದಿಂದ ಪಶ್ಚಿಮಘಟ್ಟ ಪ್ರದೇಶ ಅಪಾಯಕ್ಕೆ ಸಿಲುಕಿರುವುದು ಬಯಲಿಗೆ ಬಂದಿದ್ದು, 510 ಪುಟದ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ ಕಾರ್ಪೋರೇಟ್, ವಿದೇಶಿ ಬಂಡವಾಳ ಶಾಹಿಗಳು ಈ ಮಾಫಿಯಾದಲ್ಲಿ ಬಾಗಿಯಾಗಿದ್ದರಿಂದ ಪಾರ್ಲಿಮೆಂಟ್ನಲ್ಲಿ ಮುಚ್ಚಿಹಾಕಲಾಗಿದೆ ಎಂದು ದೂರಿದರು.
ಈ ಹಿನ್ನಲೆಯಲ್ಲಿ ಅಲ್ಲದೇ ನಮ್ಮ ಪಾರ್ಟಿಯಿಂದ ಗಾಡ್ಗಿಲ್ ವರದಿಯ ಸಂಪೂರ್ಣ ಮಾಹಿತಿಯುಳ್ಳ 10 ಸಾವಿರ ಪುಸ್ತಕ ಮುದ್ರಿಸಿ ಪಶ್ಚಿಮಘಟ್ಟಕ್ಕೆ ಒಳಪಡುವ ಎಲ್ಲಾ ರಾಜ್ಯಗಳಿಗೆ ಹಂಚಿಕೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಯಿತು. ಅಲ್ಲದೇ 2012ರಲ್ಲಿ ಗಾಡ್ಗಿಲ್ ವರದಿ ಪುನರ್ ಪರಿಶೀಲಿಸಲು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಾಯಿತು. ಇದರಿಂದ ಸುಪ್ರಿಂ ಕೋರ್ಟ್ ಕೇಂದ್ರಕ್ಕೆ ನೋಟೀಸು ನೀಡಿತು. ನಂತರ ಕೇವಲ ಚರ್ಚೆ ನಡೆದಿದ್ದು ಬಿಟ್ಟರೆ ಯಾವುದೇ ಪ್ರಗತಿ ಕಾಣಲಿಲ್ಲ. ಈ ಬಗ್ಗೆ ಸೆಪ್ಟೆಂಬರ್ನಲ್ಲಿ ಚಿಕ್ಕಮಗಳೂರಿಗೆ ಪರಿಸರವಾದಿ ನಾಗೇಶ್ಹೆಗ್ಡೆ ಹಾಗೂ ಮಾದವ ಗಾಡ್ಗಿಲ್ ಆಗಮಿಸುತ್ತಿದ್ದು, ಎಲ್ಲಾ ಪರಿಸರವಾದಿಗಳು ಹಾಗೂ ಪ್ರಗತಿಪರ ಸಂಘಟನೆ ಮುಖಂಡರೊಂದಿಗೆ ಸಭೆ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ. ಪಶ್ಚಮ ಘಟ್ಟ ನಾಶವಾದರೆ ಮಾನವ ಹಾಗೂ ಜೀವರಾಶಿಗಳು ಸಂಪೂರ್ಣ ನಾಶವಾಗುತ್ತದೆ. ಹಾಗಾಗಿ ಪಶ್ವಿಮಘಟ್ಟ ಉಳಿಸಲು ಎಲ್ಲರೂ ಮುಂದಾಗಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಜಿಲ್ಲಾ ಸಮಿತಿ ಸದಸ್ಯ ಕೃಷ್ಣಪ್ಪ, ತಾಲೂಕು ಸಮಿತಿ ಸದಸ್ಯ ಶಿವಪ್ಪ ಉಪಸ್ಥಿತರಿದ್ದರು.