ಮರಗಿಡ ಮತ್ತು ಪರಿಸರ ಸಂರಕ್ಷಣೆಯಿಂದ ಅಂತರ್ಜಲ ವೃದ್ಧಿಸುತ್ತದೆ.ಗಿಡಗಳ ನೆಡುವಿಕೆಯಿಂದ ಉತ್ತಮ ಪರಿಸರ ದೊರೆಯುತ್ತದೆ. ಪರಿಸರ ಸಂರಕ್ಷಣೆಯಿಂದ ಪ್ರಕೃತಿ ವಿಕೋಪ ತಡೆಯಲು ಸಾಧ್ಯ. ಆದುದರಿಂದ ಎಲ್ಲರೂ ಹಣ್ಣು ಹಂಪಲು ಗಿಡಗಳನ್ನು ನೆಡಲು ಮುಂದಾಗಬೇಕೆಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಮೂಡಿಗೆರೆ ತಾಲ್ಲೂಕು ಯೋಜನೆಯಾಧಿಕಾರಿ ಪಿ.ಶಿವಾನಂದ ಅಭಿಪ್ರಾಯಪಟ್ಟರು.
ಅವರು ಸೋಮವಾರ ಬಣಕಲ್ ಸುಭಾಷನಗರದ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಮೂಡಿಗೆರೆ, ಅರಣ್ಯ ಇಲಾಖೆಯ ವತಿಯಿಂದ ಆಯೋಜಿಸಿದ್ದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿ ಹಣ್ಣು ಹಂಪಲು ಗಿಡಗಳ ವಿತರಣೆಯ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ದಶಲಕ್ಷ ಗಿಡಗಳ ನಾಟಿಯ ಯೋಜನೆಯಾಗಿದೆ. ಈಗಾಗಲೇ 5ಸಾವಿರ ಗಿಡಗಳನ್ನು ವಿತರಿಸಲಾಗಿದೆ. ಆಧುನಿಕತೆಯ ಪ್ರಭಾವದಿಂದ ಮರಗಿಡಗಳಿಂದ ಮತ್ತು ಹಸಿರು ಪರಿಸರದಿಂದ ಕಂಗೊಳಿಸುತ್ತಿದ್ದ ಗ್ರಾಮೀಣ ಪ್ರದೇಶಗಳು ಕೂಡ ಅಭಿವೃದ್ಧಿಯ ನೆಪದಲ್ಲಿ ಕಾಂಕ್ರಿಟ್ ಕಾಡುಗಳಾಗುತ್ತಿವೆ.ರಸ್ತೆ ಅಭಿವೃದ್ಧಿ,ಮನೆ ನಿರ್ಮಾಣ,ವಿದ್ಯುತ್ ಮಾರ್ಗಗಳ ಅನುಷ್ಠಾನ ಮುಂತಾದ ಅಭಿವೃದ್ದಿ ಕಾರ್ಯಗಳಿಗೆ ಮರಗಿಡಗಳನ್ನು ಕಡಿಯಲಾಗುತ್ತಿದೆ.ಇದರಿಂದ ಪರಿಸರ ವಿಕೋಪವಾಗುತ್ತಿದೆ.ಇದರಿಂದ ಅಂತರ್ಜಲ ಕ್ಷೀಣಿಸುತ್ತಿದೆ’ ಎಂದರು.
ಉಪವಲಯ ಅರಣ್ಯ ಅಧಿಕಾರಿ ಉಮೇಶ್ ಮಾತನಾಡಿ’ ಪರಿಸರ ವಿನಾಶವಾಗುತ್ತಿರುವ ಇಂದಿನ ದಿನಗಳಲ್ಲಿ ಪರಿಸರ ಸಂರಕ್ಷಿಸುವ ಜಾಗೃತಿ ಅಭಿಯಾನ ಧರ್ಮಸ್ಥಳ ಗ್ರಾಮಾಭಿವೃದ್ದಿ ವತಿಯಿಂದ ನಡೆಸುತ್ತಿರುವುದು ಶ್ಲಾಘನೀಯ.ಶಾಲೆಗಳ ಹಂತದಲ್ಲಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗಾಗಿ ಗಿಡಗಳನ್ನು ನೆಟ್ಟು ಪೋಷಿಸಬೇಕು.ವಿದ್ಯಾರ್ಥಿಗಳು ಇತರ ಜನರಿಗೂ ಜಾಗೃತಿ ಮೂಡಿಸಬೇಕು’ಎಂದರು.
ಬಣಕಲ್ ಜೆಸಿಐ ಸ್ಥಾಪಕ ಅಧ್ಯಕ್ಷ ಸುರೇಶ್ ಎಸ್.ಶೆಟ್ಟಿ ಮಾತನಾಡಿ’ ಪರಿಸರ ಪ್ರಜ್ಞೆ ಪ್ರತಿಯೊಬ್ಬ ನಾಗರಿಕರಲ್ಲೂ ಮೂಡಬೇಕು.ಕೇವಲ ಪರಿಸರ ದಿನಾಚರಣೆಗಷ್ಟೇ ಗಿಡ ನೆಡುವ ಕಾರ್ಯಕ್ರಮವಾಗಬಾರದು.ಊರಿಗೊಂದು ವನ, ಮನೆಗೊಂದು ಮರ ಎಂಬಂತೆ ನಾವೆಲ್ಲರೂ ಪರಿಸರದಲ್ಲಿ ಗಿಡಗಳನ್ನು ನೆಟ್ಟು ಪ್ರಕೃತಿಯನ್ನು ಆರಾಧಿಸಿದರೆ ವಿಕೋಪ ತಡೆಯಲು ಸಾಧ್ಯವಾಗುತ್ತದೆ’ಎಂದರು.
ಕಾರ್ಯಕ್ರಮದಲ್ಲಿ ಬಣಕಲ್ ಗ್ರಾ.ಪಂ.ಅಧ್ಯಕ್ಷೆ ಅತಿಕಾಭಾನು ಅಧ್ಯಕ್ಷತೆ ವಹಿಸಿದ್ದರು, ಹಣ್ಣು ಹಂಪಲು ಗಿಡಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.ಮೂಡಿಗೆರೆ ತಾಲ್ಲೂಕು ಕೃಷಿ ಅಧಿಕಾರಿ ಗೋವಿಂದ ನಾಯ್ಕ,ಬಣಕಲ್ ಎಎಸೈ ಎಂ.ಆರ್.ರವಿ,ಶೌರ್ಯ ವಿಪತ್ತು ನಿರ್ವಹಣ ಘಟಕದ ನಾಯಕ ಕೆ.ಎಲ್.ರವಿ,ಸಂಯೋಜಕ ಪ್ರವೀಣ್ ಪೂಜಾರಿ,ಬಣಕಲ್ ಎ’ಘಟಕದ ಅಧ್ಯಕ್ಷೆ ಭಾರತಿ, ಬಿ’ಒಕ್ಕೂಟದ ಅಧ್ಯಕ್ಷ ಚಂದ್ರಪ್ಪ, ವಲಯ ಮೇಲ್ವಿಚಾರಕ ಸಂದೀಪ್, ರವಿ ಪೂಜಾರಿ, ಸೇವಾ ಪ್ರತಿನಿಧಿ ಎಸ್.ಎನ್.ರವಿ ಮತ್ತಿತರರು ಇದ್ದರು.