ಆಲ್ದೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯ ವಿಚಾರವಾಗಿ ಅಧ್ಯಕ್ಷರು ಪತ್ರಿಕಾ ಹೇಳಿಕೆ ನೀಡಿದ್ದು, ಈ ಪತ್ರಿಕಾ ಹೇಳಿಕೆಯು ದಾರಿ ತಪ್ಪಿಸುವಂತಹುದಾಗಿದೆ ಮತ್ತು ನ್ಯಾಯಾಲಯ ಆದೇಶಕ್ಕೆ ವಿರುದ್ಧವಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ವಿ.ಪಿ. ಪ್ರದೀಪ್ ತಿಳಿಸಿದ್ದಾರೆ.
ಈ ಸಂಬಂಧ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಅವರು ; ಗ್ರಾಮ ಪಂಚಾಯಿತಿ ಸದಸ್ಯರಾದ ಲಿಯಾಖತ್ ಅಲಿರವರು ನಿಧನರಾದ ನಂತರ 1 ಸಾಮಾನ್ಯ ಸಭೆ ಆಗಿರುತ್ತದೆ. ಯಾವುದೇ ಘನತ್ಯಾಜ್ಯ ವಿಚಾರಗಳು ಸಹ ಸಭೆಯ ಅಜೆಂಡಾದಲ್ಲಿ ಇರಲಿಲ್ಲ ಹಾಗೂ ಕುರಿಮಾಂಸದ ವಿಚಾರವಾಗಿ ತುಂಬಾ ಸದಸ್ಯರು ಮಾರ್ಚ್ ವರೆಗೆ ಯಾವುದೇ ಹೊಸ ಲೈಸೆನ್ಸ್ ನೀಡಬಾರದು, ಹೊಸ ಪರವಾನಿಗೆ ನೀಡಲು ಯಾವುದೇ ಮಳಿಗೆಗಳಿಲ್ಲ , ಹಾಗಾಗಿ ತೆರೆದ (ಓಪನ್) ಲೈಸನ್ಸ್ ನೀಡಿದರೆ ಪಂಚಾಯಿತಿಗೆ ತುಂಬಾ ನಷ್ಟ ಆಗುವ ಸಂಭವ ಇದೆ. ಉಳಿದ ಕೋಳಿ ಅಂಗಡಿಯವರೂ ಸಹ ಓಪನ್ ಲೈಸನ್ಸ್ ಕೇಳಿದರೆ ಪಂಚಾಯಿತಿಗೆ ಆಗುವ ನಷ್ಟ ತುಂಬುವವರು ಯಾರು ಎಂದು ಅನೇಕ ಸದಸ್ಯರು ವಿರೋಧ ವ್ಯಕ್ತಪಡಿಸಿರುತ್ತಾರೆ. ಆದರೆ ಅಧ್ಯಕ್ಷರು ಅವರ ವೈಯುಕ್ತಿಕ ಹಿತಾಸಕ್ತಿಗೋಸ್ಕರ ಹೊಸ ಲೈಸನ್ಸ್ ನೀಡಲೇಬೇಕು ಎಂದು ಪಿ.ಡಿ.ಓ. ರವರ ಮೇಲೆ ಒತ್ತಡ ಹೇರಿದ್ದಾರೆ.
ಯಾವುದೇ ಸರ್ವಾನುಮತದಿಂದ ತೀರ್ಮಾನ ಆಗಿಲ್ಲ ಹಾಗೂ ಕೋರ್ಟ್ ಆದೇಶದಲ್ಲಿ ಹೊಸ ಕುರಿಮಾಂಸ ಅಂಗಡಿ ನೀಡಬೇಕೆಂದು ಎಲ್ಲೂ ಸಹ ಉಲ್ಲೇಖ ಮಾಡಿರುವುದಿಲ್ಲ ಹಾಗೂ ಅರ್ಜಿದಾರ ಗಯಾಜ್ ರವರ ಪರ ನ್ಯಾಯಾಲಯದ ತೀರ್ಪು ಬಂದಿರುತ್ತದೆ ಹಾಗೂ ಅಧ್ಯಕ್ಷರು ನ್ಯಾಯಾಲಯ ಆದೇಶಕ್ಕೆ ವಿರುದ್ಧವಾಗಿ ಹೇಳಿಕೆ ನೀಡಿ ಸಂವಿಧಾನಕ್ಕೆ ಅಪಮಾನ ಮಾಡಿರುತ್ತಾರೆ. ಇದರ ವಿರುದ್ದ ಕಾನೂನು ಹೋರಾಟ ಮಾಡುವುದಾಗಿ ಸದಸ್ಯ ಪ್ರದೀಪ್ ತಿಳಿಸಿದ್ದಾರೆ.
26 ಸದಸ್ಯ ಬಲದ ಆಲ್ದೂರು ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ನಿಗದಿಯಾಗಿದ್ದ ಸಾಮಾನ್ಯ ಸಭೆಯಲ್ಲಿ 18 ಸದಸ್ಯರ ಗೈರು ಹಾಜರಿಯಿಂದಾಗಿ ಸಭೆಯನ್ನು ಮುಂದೂಡಲಾಗಿತ್ತು.