ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಶುಕ್ರವಾರ ಧಾರಾಕಾರ ಮಳೆ ಸುರಿದಿದೆ. ಇದರಿಂದಾಗಿ ಮರಗಳು ಧರೆಗುರುಳುತ್ತಿವೆ. ಚಲಿಸುತ್ತಿರುವ ವಾಹನಗಳ ಮೇಲೆಯೇ ಮರಗಳು ಬಿದ್ದಿವೆ.
ಜಿಲ್ಲೆಯ ಮಲೆನಾಡು ತಾಲೂಕುಗಳಲ್ಲಿ ಧಾರಾಕಾರ ಮಳೆಯಿಂದಾಗಿ ರಸ್ತೆ ಪಕ್ಕದಲ್ಲಿರುವ ಮರಗಳು ವಾಹನಗಳ ಮೇಲೆಯೇ ಬಿದ್ದಿವೆ. ಗುರುವಾರ ಹಾಗೂ ಶುಕ್ರವಾರ ಜಿಲ್ಲೆಯ ವಿವಿಧಡೆ ವಾಹನಗಳ ಮೇಲೆ ಮರಗಳು ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಆಲ್ದೂರು ಸಮೀಪ ಗುರುವಾರ ಸಂಜೆ ಚಲಿಸುತ್ತಿದ್ದ ಕಾರಿನ ಮೇಲೆಯೇ ಮರಬಿದ್ದಿದೆ. ಆದರೆ ಕೂದಲೆಳೆ ಅಂತರದಲ್ಲಿ ವಾಹನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರ ಬಿದ್ದರಭಸಕ್ಕೆ ಕಾರು ಜಖಂಗೊಂಡಿದೆ.
ಚಿಕ್ಕಮಗಳೂರು ನಗರದ ಹೊರವಲಯದ ಗವನಹಳ್ಳಿ ಬಳಿ ಕಡೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಗಾತ್ರದ ಮರ ಒಂದು ಎರಡು ಕಾರುಗಳ ಮೇಲೆ ಉರುಳಿ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಎರಡು ಕಾರುಗಳು ಜಖಂ ಆಗಿವೆ. ಜೊತೆಗೆ ಪಕ್ಕದಲ್ಲಿಯೇ ಇದ್ದ ಆಟೋ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇನ್ನು ಚಿಕ್ಕಮಗಳೂರಿನಿಂದ ತರೀಕೆರೆಗೆ ಸಾಗುವ ಮಾರ್ಗ, ಶೃಂಗೇರಿ, ಕೊಪ್ಪ, ಕಳಸ ಭಾಗದಲ್ಲಿಯೂ ನಿರಂತರವಾಗಿ ಮರಗಳು ಆರಂಭಿಸಿವೆ. ಭಾರಿ ಮಳೆಗೆ ಮರಗಳು ಧರೆಗೆ ಉರುಳುತ್ತಿರುವುದರಿಂದ ವಿದ್ಯುತ್ ಕಂಬಗಳಿಗೂ ಹಾನಿಯಾಗುತ್ತಿದೆ ಇದರಿಂದಾಗಿ ಮಲೆನಾಡಿನ ಹಳ್ಳಿಗಳು ಕತ್ತಲೆಗೆ ಜಾರಿವೆ.
ಶುಕ್ರವಾರ ರಾತ್ರಿ ಚಾರ್ಮಾಡಿ ಘಾಟ್ ನಲ್ಲಿ ರಸ್ತೆಗೆ ಗುಡ್ಡ ಕುಸಿತವಾಗಿ ಹಲವು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಕಿಲೋಮೀಟರ್ ಗಟ್ಟಲೇ ಟ್ರಾಫೀಕ್ ಜಾಮ್ ಉಂಟಾಗಿತ್ತು.
ಶನಿವಾರ ಬೆಳಿಗ್ಗೆಯ ಹೊತ್ತಿಗೆ ಮಳೆ ಕೊಂಚ ಬಿಡುವು ನೀಡಿದಂತೆ ತೋರುತ್ತಿದ್ದು, ತಿಂಗಳುಗಳ ನಂತರ ಬಿಸಿಲ ದರ್ಶನವಾಗಿದೆ. ಇಂದಿನಿಂದ ಮಳೆಯ ಪ್ರಮಾಣ ತಗ್ಗುವ ಮೂನ್ಸೂಚನೆ ಇದೆ.