ಮಳೆ ಅಬ್ಬರ ಕ್ಷೀಣಿಸಿದ್ದು, ಭಾರೀ ಪ್ರಮಾಣದ ಗಾಳಿಬೀಸತೊಡಗಿದೆ. ಮನೆಗೆ ಹಾನಿಯಾಗುವುದು, ವಿದ್ಯುತ್ ತಂತಿಯ ಮೇಲೆ ಮರಬೀಳುವುದು ಸೇರಿದಂತೆ ಹಾನಿಗಳು ಮುಂದುವರೆದಿವೆ.
ನಗರ ಹೊರವಲಯದ ಅಲ್ಲಂಪುರದಲ್ಲಿ ಮನೆಯ ಗೋಡೆ ಕುಸಿದಿದೆ. ಒಳಭಾಗಕ್ಕೆ ಬಿದ್ದಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಾಗೇಶ್ಶೆಟ್ಟಿ ಎಂಬುವರಿಗೆ ಸೇರಿದ ಮನೆ ಇದಾಗಿದೆ.ಮನೆಯ ಮುಂಭಾಗ ಸಂಪೂರ್ಣ ನಾಶವಾಗಿದ್ದು, ಮನೆ ಮುಂದೆ ನಿಲ್ಲಿಸಿದ್ದ ಆಟೋರಿಕ್ಷಾದ ಮೇಲೆ ಗೋಡೆ ಬಿದ್ದಿದ್ದರಿಂದ ವಾಹನಕ್ಕೆ ಸ್ವಲ್ಪ ಹಾನಿಯಾಗಿದೆ. ಅಲ್ಲಂಪುರ ಪಂಚಾಯಿತಿ ಅಧಿಕಾರಿಗಳು ಮತ್ತು ಸದಸ್ಯರು ಭೇಟಿನೀಡಿದ್ದಾರೆ.
ಎನ್.ಆರ್.ಪುರ ತಾಲೂಕಿನ ಹೊನ್ನೆಕೂಡಿಗೆಯ ಸಾಲೂರು ಬಳಿ ಭದ್ರಾ ನದಿ ಇಬ್ಬಾಗವಾಗಿ ಹರಿಯುತ್ತದೆ. ಅಲ್ಲಿ ನಡುಗಡ್ಡೆಯಂತಾಗಿರುವ ಸ್ಥಳಕ್ಕೆ 30 ಜಾನುವಾರುಗಳು ಮೇವಿಗಾಗಿ ತೆರಳಿದ್ದು, ಏಕಾಏಕಿ ನದಿನೀರಿನ ಹರಿವಿನಲ್ಲಿ ಏರಿಕೆಯಾಗಿದ್ದರಿಂದ ನದಿನೀಡಿನಲ್ಲಿ ಜಾನುವಾರುಗಳು ಸಿಲುಕಿಕೊಂಡಿದ್ದವು ಅವುಗಳನ್ನು ಗ್ರಾಮಸ್ಥರು ರಕ್ಷಣೆಮಾಡಿದ್ದಾರೆ.
ನಡುಗಡ್ಡೆಯಂತಾಗಿದ್ದ ಸ್ಥಳಕ್ಕೆ ದೋಣಿಯನ್ನು ತೆಗೆದುಕೊಂಡು ಹೋಗಿ ಅದರ ಮೂಲಕ ದನಗಳನ್ನು ದಡಕ್ಕೆ ಸೇರಿಸಿ ರಕ್ಷಣೆಮಾಡಲಾಗಿದೆ.ಬೋಟ್ನಲ್ಲಿ ಹೋಗಿ ಜಾನುವಾರುಗಳನ್ನು ಹೆಸರಿಸಿ ಅಧಿಕಾರಿಗಳು ಮತ್ತು ಸ್ಥಳೀಯರು ದಡಕ್ಕೆ ತಂದಿದ್ದಾರೆ.ಭದ್ರಾ ಹುಲಿ ಸಂರಕ್ಷತಾರಣ್ಯದ ಸಿಬ್ಬಂದಿ ಹಾಗೂ ಸ್ಥಳೀಯರಿಂದ ಕಾರ್ಯಚರಣೆ ನಡೆದಿತ್ತು.
ರೀಲ್ಸ್, ಪೋಟೋಸೆಲ್ಫಿ ಕ್ರೇಜಿಗೆ ಪ್ರವಾಸಿಗರ ಹುಚ್ಚಾಟ ಜಿಲ್ಲೆಯಲ್ಲಿ ಮುಂದುವರೆದಿದೆ.ಚಾರ್ಮಾಡಿ ಘಾಟಿಯಲ್ಲಿ ಬಂಡೆಯನ್ನಲ್ಲದೆ ಗುಡ್ಡವನ್ನೇ ಹತ್ತುತ್ತಿದ್ದಾರೆ ಇಷ್ಟು ದಿವಸ ಬಂಡೆಕಲ್ಲನ್ನುಹತ್ತಿ ಜಲಪಾತ ವೀಕ್ಷಿಸುತ್ತಿದ್ದವರು ಈಗ ಬಂಡೆ ಮೇಲಿನ ಗುಡ್ಡವನ್ನು ಹತ್ತುವ ಸಹಾಸಕ್ಕೆ ಕೈಹಾಕಿದ್ದಾರೆ. ಪೊಲೀಸರು ಇವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಾಲ್ಕು ಜನರಿಗೆ ತಲಾ 500 ರೂ.ದಂಡ ವಿಧಿಸಿ ಎಚ್ಚರಿಕೆ ಕೊಟ್ಟು ವಾಪಸ್ ಕಳುಹಿಸಿದ್ದಾರೆ.