ಕಾಫಿಬೆಳೆಗಾರರ ಮೇಲೆ ವಿಧಿಸಿರುವ ಸಾರ್ಫಾಸಿ ಕಾಯ್ದೆ ಸೇರಿದಂತೆ ಇತರೆ ಸಮಸ್ಯೆಗಳಿಂದ ಹೊರಬರಲು ಕಾಫಿಯನ್ನು ವಾಣಿಜ್ಯೋದ್ಯಮದಿಂದ ಕೃಷಿ ವ್ಯಾಪ್ತಿಗೆ ತರುವ ಬಗ್ಗೆ ಚಿಂತನೆ ನಡೆದಿದ್ದು, ರಾಜ್ಯಮಟ್ಟದ ಬೆಳೆಗಾರರ ಸಂಘಟನೆಗಳು ಮತ್ತು ಬೆಳೆಗಾರರ ಅಭಿಪ್ರಾಯ ಸಂಗ್ರಹಿಸಿ ಸಾಧಕ, ಬಾಧಕಗಳನ್ನು ಪರಿಶೀಲಿಸಿ ಕೃಷಿ ವ್ಯಾಪ್ತಿಗೆ ತರುವ ಚಿಂತನೆ ನಡೆದಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ತಿಳಿಸಿದರು.
ಚಿಕ್ಕಮಗಳೂರು ನಗರದ ಕಾಫಿಮಂಡಳಿ ಕಚೇರಿಯಲ್ಲಿ ನಡೆದ ಕಾಫಿಮಂಡಳಿಯಿಂದ ನೀಡುವ ಯಂತ್ರೋಪಕರಣ ಸೇರ್ಪಡೆ ಮತ್ತು ಕಂಪನಿ ಸೇರ್ಪಡೆ ಸಂಬಂಧ ಬೆಳೆಗಾರರು ಮತ್ತು ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ಕಾಫಿ ಬೆಳೆಗಾರರಿಗೆ ಗುಣಮಟ್ಟದ ಯಂತ್ರೋಪಕರಣ ಹಾಗೂ ನಿಖರ ಬೆಲೆಗೆ ಸಿಗುಂತಾಗಬೇಕು. ಮೊದಲ ಬಾರೀಗೆ ಕಾಫಿಮಂಡಳಿ ಯಿಂದ ಯಂತ್ರೋಪಕರಣಗಳನ್ನು ಬೆಳೆಗಾರರ ಬೇಡಿಕೆಗೆ ಅನುಗುಣವಾಗಿರಬೇಕು ಎಂಬ ಕಾರಣಕ್ಕೆ ಸಭೆ ನಡೆಸಲಾಗುತ್ತಿದೆ ಎಂದು ಹೇಳಿದರು.
2047ರ ಹೊತ್ತಿಗೆ ಕಾಫಿಯ ಚಿತ್ರಣ ಹೇಗಿರಬೇಕೆಂಬುದನ್ನು ಮುಂದಿಟ್ಟುಕೊಂಡು 17 ಅಂಶದ ಕ್ರೀಯಾಯೋಜನೆ ಸಿದ್ದಪಡಿಸಲಾ ಗಿದೆ. ಅದನ್ನು ಹಂತ ಹಂತವಾಗಿ ಕಾರ್ಯಗತಗೊಳಿಸಲಾಗುವುದು. ಕಾರ್ಮಿಕರ ಅಭಾವ ಎಂದುರಿಸುತ್ತಿರುವ ಕಾಫಿ ಉದ್ಯಮ ವನ್ನು ಸಂಕಷ್ಟದಿಂದ ಪಾರುಮಾಡಲು ಸಿದ್ಧತೆ ನೆಡೆಯುತ್ತಿದೆ. ಜಾಗತಿಕಮಟ್ಟದಲ್ಲಿ ಭಾರತ ಕಾಫಿ ಉತ್ಪಾದನೆಯಲ್ಲಿ 3.5 ಲಕ್ಷ ಮೆಟ್ರಿಕ್ ಟನ್ ಕಾಫಿ ಉತ್ಪಾದಾನೆಯಾಗುತ್ತಿದೆ. ಇದನ್ನು 2047 ಕ್ಕೆ 9 ಲಕ್ಷ ಮೆಟ್ರಿಕ್ ಟನ್ಗೆ ಏರಿಸುವ ಗುರಿ ಹೊಂದಲಾಗಿದೆ ಎಂದರು.
ಆವತಿ ಹೋಬಳಿ ಕಾಫಿ ಬೆಳೆಗಾರರ ಸಂಘದ ಕಾರ್ಯದರ್ಶಿ ಕೆರೆಮಕ್ಕಿ ಮಹೇಶ್ ಮಾತನಾಡಿ, ಕಾಫಿ ಕೂಡ ಭೂಮಿಯಲ್ಲಿ ಬಿತ್ತಿ ಬೆಳೆಯುವ ಬೆಳೆಯಾಗಿದ್ದು, ಕಾಫಿಯನ್ನು ಕೃಷಿ ವ್ಯಾಪ್ತಿಗೆ ತರುವುದರಿಂದ ರೈತರಿಗೆ ಸಿಗುವ ಸರ್ಕಾರಿ ಸೌಲಭ್ಯಗಳನ್ನು ಕಾಫಿ ಬೆಳೆ ಗಾರರು ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದರು.
ಕಾಫಿಮಂಡಳಿ ಉಪನಿರ್ದೇಶಕ ವೆಂಕಟ್ ರೆಡ್ಡಿ ಮಾತನಾಡಿ, ಕಾಫಿ ಬೆಳೆಗಾರರಿಗೆ ಈಗಿರುವ ಸಹಾಯಧನದ ಮಾಹಿತಿ ನೀಡಿ, ಈ ವರ್ಷದ ಕ್ರಿಯಾಯೋಜನೆ ಸಿದ್ದಪಡಿಸಲಾಗಿದ್ದು, ಸದ್ಯದಲ್ಲೇ ಅನುಮೋದನೆ ದೊರೆಯಲಿದೆ ಎಂದರು.
ಸಭೆಯಲ್ಲಿ ಕರ್ನಾಟಕ ಪ್ಲಾಂಟರ್ಸ್ ಅಸೊಷಿಯೆಷನ್ ಅಧ್ಯಕ್ಷ ಮಹೇಶ್ ಶ್ರೀಧರ್, ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ, ಕಾರ್ಯದರ್ಶಿ ಮನೋಹರ್, ವಸ್ತಾರೆ ಬೆಳೆಗಾರರ ಸಂಘದ ಅಧ್ಯಕ್ಷ ಟಿ.ಡಿ.ಮಲ್ಲೇಶ್, ಕಾರ್ಯದರ್ಶಿ ರತೀಶ್, ಆಲ್ದೂರು ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಎಸ್.ಸುರೇಶ್, ಆವತಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಮಹೇಂದ್ರ, ರೈತಸಂಘದ ದಯಾಕರ್, ಜಯಣ್ಣ, ತೌಫಿಕ್ ಅಹಮದ್ ಸೇರಿದಂತೆ ಕಾಫಿಮಂಡಳಿ ಅಧಿಕಾರಿಗಳು ಇದ್ದರು.