ಕಳೆದ ಎರಡು ತಿಂಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಮಲೆನಾಡು ಭಾಗ ತತ್ತರಿಸಿ ಹೋಗಿದೆ.
ಒಂದು ಕಡೆ ಮಳೆಯಿಂದ ಅನೇಕ ಕಡೆ ಮನೆಗಳು ಕುಸಿದು ಬೀಳುತ್ತಿದ್ದು, ರಸ್ತೆ ಸೇತುವೆಗಳು ಮುಳುಗಡೆಯಾಗಿ ಜನಜೀವನಕ್ಕೆ ತೀವ್ರ ತೊಂದರೆಯಾಗಿದೆ.
ಮತ್ತೊಂದೆಡೆ ನಿರಂತರ ಮಳೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತೀಚಿನ ವರ್ಷಗಳಲ್ಲಿಯೇ ಇಂತಹ ಮಳೆಯನ್ನು ಮಲೆನಾಡು ಕಂಡಿರಲಿಲ್ಲ. ಒಂದೂ ದಿನವೂ ಬಿಡುವು ನೀಡದೇ ಮೇ ತಿಂಗಳಿನಿಂದಲೂ ಮಳೆ ಸುರಿಯುತ್ತಿದೆ. ಇದರಿಂದಾಗಿ ಭೂಮಿಯಲ್ಲಿ ತೀವ್ರ ಶೀತವಾಗಿದ್ದು, ಕಾಫಿ, ಅಡಿಕೆ ಸೇರಿದಂತೆ ಪ್ರಮುಖ ಬೆಳೆಗಳ ಫಸಲು ನೆಲಕಚ್ಚುತ್ತಿವೆ.
ಕಾಫಿ ಬೆಳೆಯುವ ಪ್ರದೇಶಗಳ ಎಲ್ಲಾ ಕಡೆ ಕಾಫಿಗೆ ಕೊಳೆರೋಗ ಬಂದಿದೆ. ಗಿಡದಲ್ಲಿ ಗೊಂಚಲು ಗೊಂಚಲು ಕಾಫಿ ಕಪ್ಪಾಗಿ ಕೊಳೆತು ನೆಲ ಸೇರುತ್ತಿದೆ. ಕಪ್ಪು ಕೊಳೆ ರೋಗ ವಿಶೇಷವಾಗಿ ಎಲ್ಲಾ ಕಡೆ ಕಾಡುತ್ತಿದೆ. ಅದಲ್ಲದೇ ಕಾಫಿ ತೊಟ್ಟುಕೊಳೆ ರೋಗವೂ ಉಲ್ಬಣಿಸಿದ್ದು ರಾಶಿ ರಾಶಿ ಕಾಫಿ ಗಿಡದಿಂದ ಉದುರಿ ನೆಲ ಸೇರುತ್ತಿದೆ.
ಇದರಿಂದಾಗಿ ಮುಂದಿನ ವರ್ಷದ ಕಾಫಿ ಫಸಲು ಮುಕ್ಕಾಲು ಭಾಗ ಕಳೆದುಕೊಳ್ಳುವ ಆತಂಕವನ್ನು ಬೆಳೆಗಾರ ಎದುರಿಸುತ್ತಿದ್ದಾನೆ.
ಇತ್ತ ಮಲೆನಾಡಿನ ಪ್ರಮುಖ ಬೆಳೆ ಅಡಿಕೆಗೂ ಅತಿವೃಷ್ಟಿ ಮಾರಕವಾಗಿ ಪರಿಣಮಿಸಿದೆ. ನಿರಂತರ ಮಳೆಯಿಂದಾಗಿ ಬಹುತೇಕ ರೈತರು ಅಡಿಕೆಗೆ ಬೋರ್ಡೋ ದ್ರಾವಣ ಸಿಂಪರಣೆ ಮಾಡಲು ಸಾಧ್ಯವಾಗಿಲ್ಲ. ಇಂತಹ ತೋಟದಲ್ಲಿ ಬಹುತೇಕ ಅಡಿಕೆಗಳು ನೆಲಕ್ಕುದುರುತ್ತಿವೆ. ಮತ್ತೆ ಕೆಲವು ರೈತರು ಔಷಧಿ ಸಿಂಪರಣೆ ಮಾಡಿದ್ದರೂ ಸಹ ಅತಿಯಾದ ಮಳೆಯಿಂದ ಅಡಿಕೆ ಕಾಯಿಗಳು ಉದುರಲು ಪ್ರಾರಂಭಿಸಿವೆ.
ನಿರಂತರ ಮಳೆಯಿಂದಾಗಿ ಯಾವುದೇ ಕೃಷಿ ಕಾರ್ಯಗಳನ್ನು ಮಾಡಲು, ಔಷದೋಪಚಾರ ಮಾಡಲು ಸಾಧ್ಯವಾಗದೇ ರೈತರು ಕಂಗಾಲಾಗಿದ್ದಾರೆ.
ಈ ಬಗ್ಗೆ ಸರ್ಕಾರಗಳು ರೈತರ ನೆರವಿಗೆ ಬರಬೇಕಾಗಿದ್ದು, ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಪ್ರದೇಶಗಳ ಸಮೀಕ್ಷೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಕಾಫಿ ಮಂಡಳಿಯು ಈ ಬಗ್ಗೆ ಮುತುವರ್ಜಿ ವಹಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.