ತಾಲೂಕಿನಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಮನೆಗಳು ಕುಸಿತ ಸೇರಿದಂತೆ ಅನೇಕ ರೀತಿಯ ಹಾನಿ ಸಂಭವಿಸಿದೆ. ಮನೆ ಕಳೆದುಕೊಂಡ ಸಂತ್ರಸ್ತರು ಹಾಗೂ ರೈತರು ಆತಂಕ ಪಡಬೇಕಾಗಿಲ್ಲ. ಕ್ಷೇತ್ರದ ಸಮಸ್ಯೆ ಬಗೆಹರಿಸಲು ಸರಕಾರ ಸಿದ್ದವಿದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಅವರು ಶನಿವಾರ ಗೋಣಿಬೀಡು, ಕಸಬಾ, ಬಣಕಲ್, ಆಲ್ದೂರು, ವಸ್ತಾರೆ ಹೋಬಳಿ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿ ಸಂಭವಿಸಿದ್ದ ಸ್ಥಳಕ್ಕೆ ಬೇಟಿ ನೀಡಿ, ಮನೆ ಕಳೆದುಕೊಂಡ ಸಂತ್ರಸ್ತರಿಗೆ ಧೈರ್ಯ ತುಂಬುವ ಮೂಲಕ ತರಕಾರಿ ಹಾಗೂ ಆಹಾರ ಪದಾರ್ಥಗಳ ಕಿಟ್ ವಿತರಿಸಿ ಮಾತನಾಡಿದರು. ತನ್ನ ಕ್ಷೇತ್ರದಲ್ಲಿ ಮಳೆಯಿಂದ ಸುಮಾರು 100ಕ್ಕೂ ಅಧಿಕ ಮನೆ ಕುಸಿತಗೊಂಡಿದೆ. ಅನೇಕ ರಸ್ತೆ, ಸೇತುವೆಗಳು ಹಾನಿಯಾಗಿವೆ. ಈ ಬಗ್ಗೆ ತಾನು ಸದನದಲ್ಲಿ ಗಮನ ಸೆಳೆದಿದ್ದೇನೆ. ಅಲ್ಲದೇ ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾಗಿರುವ ಬಗ್ಗೆ ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ ಚರ್ಚೆ ನಡೆಸಲು ಜುಲೈ 24ರಂದು ಜಿಲ್ಲಾ ಉಸ್ತುವಾರಿ ಸಚಿವರು ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆಂದು ಹೇಳಿದರು.
ಈಗಾಗಲೇ ಮಳೆಯಿಂದ ಕೆಲ ಸೇತುವೆ ತುಂಬಿ ರಸ್ತೆ ಸಂಪರ್ಕ ಕಡಿತಗೊಂಡಿರುವ ಪ್ರದೇಶಕ್ಕೆ ನಿಗ್ರಹ ಪಡೆ ನಿಯೋಜಿಸಲಾಗಿದೆ. ರಜಾ ದಿನದಲ್ಲೂ ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಸ್ತೆ ಹಾಗೂ ಸೇತುವೆ ಪುನರ್ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಮಳೆಯಿಂದ ನದಿ, ಹಳ್ಳಕೊಳ್ಳಗಳು ತುಂಬಿ ಗದ್ದೆ ತೋಟಗಳಲ್ಲಿ ಹರಿದು ಬೆಳೆನಾಶವಾಗಿರುವ ಬಗ್ಗೆ ಸಂಬಂಧಿಸಿದ ಕೃಷಿ ಅಧಿಕಾರಿಗಳಿಂದ ವರದಿ ನೀಡಲು ಸೂಚಿಸಿದ್ದೇನೆ. ಮಳೆಯಿಂದಾಗಿರುವ ಎಲ್ಲಾ ಹಾನಿ ಬಗ್ಗೆ ಸರಕಾರದ ಗಮನ ಸೆಳದು ಕ್ಷೇತ್ರದ ಸಮಸ್ಯೆ ಬಗೆಹರಿಸಲು ಶಕ್ತಿ ಮೀರಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.