ಮೂಡಿರೆಗೆಯಲ್ಲಿ 6 ವರ್ಷಗಳಿಂದ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವ ಜೊತೆಗೆ ಪೊಲೀಸ್ ಇಲಾಖೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎಎಸ್ಐ ವೆಂಕಟೇಶ್ಮೂರ್ತಿ ದಂಪತಿಗಳನ್ನು ಮಂಗಳವಾರ ಜೇಸಿ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಸೋಮೇಗೌಡ ಮಾತನಾಡಿ ; ವೆಂಕಟೇಶ್ ಅವರು ತುಂಬಾ ಜವಾಬ್ದಾರಿಯಿಂದ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದರು, ಅವರು ಬಂದೋಬಸ್ತ್ ಕಾರ್ಯದಲ್ಲಿ ಇದ್ದರೆ ಬಹಳ ಸಮರ್ಥವಾಗಿ ನಿಭಾಯಿಸುತ್ತಿದ್ದರು. ಅವರು ಯುವ ಪೊಲೀಸರಿಗೆ ಮಾದರಿಯಾಗಿದ್ದರು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವೆಂಕಟೇಶ್ ; ಮೂಡಿಗೆರೆಯಲ್ಲಿ ಆರೂವರೆ ವರ್ಷ ಸೇವೆ ಸಲ್ಲಿಸಿದ್ದು ಇಲ್ಲಿನ ಜನರು ತುಂಬಾ ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.
ಜೇಸಿ ಸಂಸ್ಥೆ ಅಧ್ಯಕ್ಷ ಸುಪ್ರೀತ್, ಕಾರ್ಯದರ್ಶಿ ದೀಕ್ಷಿತ್ ಕಣಚೂರು, ಜೇಸಿ ಮತ್ತು ಜೇಸಿರೇಟ್ ಪದಾಧಿಕಾರಿಗಳು, ಪೂರ್ವಧ್ಯಕ್ಷರು ಹಾಗೂ ಹಾಗೂ ಸದಸ್ಯರು ಉಪಸ್ಥಿತರಿದ್ದರು.