ತಾನು ಕಂಡು ಹಿಡಿದ ಕಾರ್ಬನ್ ಫೈಬರ್ ದೋಟಿಯ ತದ್ರೂಪವಾಗಿ ತಯಾರಿಸಿ ಮಾರುಕಟ್ಟೆಗೆ ಬಿಡಲಾಗುತ್ತಿದೆ ಈ ಬಗ್ಗೆ ರೈತರು ಎಚ್ಚೆತ್ತುಕೊಳ್ಳಬೇಕೆಂದು ಇನೋಮೆಕ್ ಟೆಕ್ನಾಲಜಿ ಸಿಇಒ ಬಾಲಸುಬ್ರಮಣ್ಯ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಮಿಕರ ಕೊರತೆ ಹಾಗು ಬಿದಿರಿನ ಅಭಾವದಿಂದಾಗಿ ರೈತರು ಅಡಕೆ, ಕಾಳು ಮೆಣಸು ಸೇರಿದಂತೆ ಇತರೇ ಬೆಳಗಳಿಗೆ ಔಷಧಿ ಸ್ಪ್ರೇ ಮಾಡಲು ಕಷ್ಟವಾಗುತ್ತಿತ್ತು. ಅಲ್ಲದೇ ಎಷ್ಟೋ ಮಂದಿ ಮರದಿಂದ ಬಿದ್ದು, ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದ ರೈತರು ಮುಕ್ತಿ ಕಾಣಬೇಕೆಂದು ತಾನು 2016-17ರಲ್ಲಿ ಅಮೇರಿಕಾದಲ್ಲಿದ್ದಾಗಲೇ ಹತ್ತಾರು ಬಗೆಯ ಪರಿಕರಗಳನ್ನು ಬಳಿಸಿ ಕಾರ್ಬನ್ ಫೈಬರ್ ದೋಟಿ ಕಂಡು ಹಿಡಿದೆ. ಅದನ್ನು ರೈತರು ಸುಲಭವಾಗಿ ಬಳಸಿಕೊಳ್ಳಬೇಕು ಹಾಗೂ ಬಾಳ್ವಿಕೆ ಯಾವ ರೀತಿಯಲ್ಲಿ ಬರುತ್ತದೆ ಎಂಬುದರ ಬಗ್ಗೆ ಪ್ರಾರಂಭಿಕವಾಗಿ ಹಾಸನದ ತನ್ನ ತೋಟದಲ್ಲಿ ಸಂಶೋಧನೆ ನಡೆಸಿ, ಯಶಸ್ಸು ಕಂಡ ಬಳಿಕ ಸರಕಾರದಿಂದ ಮಾನ್ಯತೆ ಪಡೆದು ಕಳೆದ 8 ವರ್ಷದ ಹಿಂದೆ ನೀಲಿ ಬಣ್ಣದ ದೋಟಿಯನ್ನು ಮಾರುಕಟ್ಟೆಗೆ ಬಿಡಲಾಯಿತು. ಇದಕ್ಕೆ ಹೈಟೆಕ್ ಎಂಬ ಬ್ರಾಂಡ್ ಹೆಸರಿಡಲಾಗಿತ್ತು ಎಂದಿದ್ದಾರೆ.
ನಮ್ಮ ದೋಟಿ ಅತೀ ಕಡಿಮೆ ಬಳಕುವಿಕೆ ದೋಟಿ ಎಂದು ಹೆಸರುವಾಸಿಯಾಗಿದೆ. ನಾವು 8 ವರ್ಷದಲ್ಲಿ ಮಾರುಕಟ್ಟೆಗೆ ಬಿಟ್ಟಿರುವ ದೋಟಿಗಳು ಇಂದಿಗೂ ಬಳುಕುವಿಕೆ ಹೆಚ್ಚಾಗದೇ ಯತಾ ಸ್ಥಿತಿ ಕಾಪಾಡಿಕೊಂಡಿದೆ. ಯಾವ ದೂರು ಕೂಡ ಬಂದಿಲ್ಲ. ಅಲ್ಲದೇ ನಮ್ಮ ಪ್ರಾಡಕ್ಟ್ ಹೊರ ರಾಜ್ಯದಿಂದಲೂ ಖರೀದಿಸುತ್ತಿದ್ದಾರೆ. ಆದರೆ ಕಳೆದ 3 ವರ್ಷದ ಹಿಂದೆ ಯಾವುದೋ ಜಾಲ ನಕಲಿ ದೋಟಿ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ತಾನು ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಈಗ ನಮ್ಮ ಬ್ರಾಂಡ್ಗೆ ಬಳಸಿರುವ ನೀಲಿ ಬಣ್ಣ ಹಾಗೂ ಹೆಸರಿಗೆ ಹೋಲುವಂತೆ ತದ್ರೂಪವಾಗಿ ದೋಟಿ ತಯಾರಿಸಿ ಮಾರುಕಟ್ಟೆಗೆ ಬಿಡಲಾಗುತ್ತಿದೆ. ಇದರಿಂದ ರೈತರು ಗೊಂದಲ ಹಾಗೂ ದಿಕ್ಕು ತಪ್ಪುವ ಜತೆಗೆ ದುಬಾರಿ ಹಣ ಕಳೆದುಕೊಂಡು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಹಾಗಾಗಿ ತಾನು ರೈತರು ಮೋಸ ಹೋಗಬಾರದೆಂದು ಗ್ರಾಹಕರ ಕಾಳಜಿಗಾಗಿ ಕೋರ್ಟ್ ಮೊರೆ ಹೋಗಿ, ಎಲ್ಲಾ ರೀತಿಯ ದಾಖಲೆ ಕೊಟ್ಟಾಗ, ಕೋರ್ಟ್ ಎಲ್ಲವನ್ನು ಪರಿಶೀಲಿಸಿದ ಬಳಿಕ ರೈತರ ಹಿತ ದೃಷ್ಟಿಯಿಂದ ಸ್ಟೇ ಆರ್ಡರ್ ನೀಡುವ ಮೂಲಕ ನಕಲಿ ದೋಟಿಗಳನ್ನು ತಯಾರು ಹಾಗೂ ಮಾರಾಟ ಮಾಡಬಾರದೆಂದು 15 ಕಂಪನಿಗಳಿಗೆ ತಡೆಯಾಜ್ಞೆ ನೀಡಿದೆ ಎಂದಿದ್ದಾರೆ.
ಕೃಷಿ ಉಪಕರಣದ ಮಾರುಕಟ್ಟೆ ಹಾಗೂ ಗುಣಮಟ್ಟದಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು. ಯಾವುದೇ ಕೃಷಿ ಪರಿಕರಗಳು ಖರೀದಿಸುವಾಗ ರೈತರಿಗೆ ಅನುಕೂಲವಾಗಬೇಕು. ಗ್ರಾಹಕರಿಗೆ ಚಾಯ್ಸ್ ಇರಬೇಕು. ಯಾವುದೇ ಪ್ರೊಡೆಕ್ಟ್ ನ್ನು ಮುಕ್ತವಾಗಿ ಖರೀದಿಸುವಂತಾಗಬೇಕು. ಆಗ ಮಾತ್ರ ರೈತರು ಸ್ವಾವಲಂಬಿ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.