ರಾಜ್ಯದಲ್ಲಿ 30 ಲಕ್ಷ ಜನಸಂಖ್ಯೆ ಹೊಂದಿರುವ ಬ್ಯಾರಿ ಸಮುದಾಯಕ್ಕೆ ರಾಜ್ಯ ಸರ್ಕಾರ ಪ್ರತ್ಯೇಕ ಅಭಿವೃದ್ಧಿ ನಿಗಮವೊಂದನ್ನು ಸ್ಥಾಪಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತವಾಗಿರುವ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಇತರ ಜಿಲ್ಲೆಗೂ ವಿಸ್ತರಿಸಬೇಕು ಎಂದು ಜಿಲ್ಲಾ ಬ್ಯಾರಿ ಒಕ್ಕೂಟದ ಉಪಾಧ್ಯಕ್ಷ ಕಿರುಗುಂದ ಅಬ್ಬಾಸ್ ಒತ್ತಾಯಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯನ್ನು ಕೇಂದ್ರ ಸ್ಥಾನವನ್ನಾಗಿಸಿರುವ ಬ್ಯಾರಿ ಸಮುದಾಯದವರು ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮೈಸೂರು, ಬೆಂಗಳೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ವಾಸವಾಗಿದ್ದಾರೆ. ಅಲ್ಲದೆ ವಿವಿಧ ದೇಶಗಳಲ್ಲಿ ಉದ್ಯೋಗದಲ್ಲಿರುವ ಬ್ಯಾರಿ ಸಮುದಾಯದ ಸುಮಾರು 8 ಲಕ್ಷ ಮಂದಿಯಿಂದ ಭಾರತಕ್ಕೆ ಅತಿ ಹೆಚ್ಚು ವಿದೇಶಿ ವಿನಿಮಯ ಹರಿದು ಬರಲು ಬ್ಯಾರಿ ಸಮುದಾಯ ಕಾರಣವಾಗಿದೆ. ಬ್ಯಾರಿ ಸಮುದಾಯದಲ್ಲಿ ರೈತಾಪಿ ವರ್ಗ, ವ್ಯಾಪಾರಿಗಳು, ಮೀನುಗಾರಿಕೆ, ಹೈನುಗಾರಿಕೆ, ಕೂಲಿ ಕಾರ್ಮಿಕರು ಹೆಚ್ಚಾಗಿದ್ದಾರೆ. ಇವರ ವ್ಯಾಪಾರಕ್ಕೆ ಬಂಡವಾಳ ಕ್ರೂಢೀಕರಣಕ್ಕೆ ಸಾಧ್ಯವಾಗದೆ ವ್ಯವಹಾರ ನಡೆಸಲು ತೀರಾ ಸಂಕಷ್ಟ ಅನುಭವಿಸಿದ್ದಾರೆ. ತಮ್ಮ ಸ್ವಂತ ದುಡಿಮೆಯಿಂದ ಮಾತ್ರ ಬಂಡವಾಳ ಹೊಂದಿಸಿಕೊಳ್ಳಬೇಕಾಗಿದೆ. ಸರ್ಕಾರದಿಂದ ಬ್ಯಾರಿ ಸಮುದಾಯಕ್ಕೆ ಆರ್ಥಿಕವಾಗಿ ಅಥವಾ ಸಾಮಾಜಿಕವಾಗಿ ಯಾವುದೇ ಭದ್ರತೆಯನ್ನು ಇದುವರೆಗೂ ಒದಗಿಸಿಲ್ಲ. ರಾಜ್ಯದಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮವಿದ್ದರೂ ಅದು ಯಾವುದೆ ಪ್ರಯೋಜನಕ್ಕೂ ಇಲ್ಲ. ಆ ನಿಗಮ ಇತರರಿಗೂ ಇರುವುದರಿಂದ ಬ್ಯಾರಿ ಸಮುದಾಯಕ್ಕೆ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಯಾವ ಪ್ರಯೋಜನವಿಲ್ಲ. ಬ್ಯಾರಿ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಪ್ರತ್ಯೇಕ ನಿಗಮವೊಂದನ್ನು ಸ್ಥಾಪಿಸಬೇಕೆಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಬ್ಯಾರಿ ಭಾಷೆಯನ್ನು ಸಾಹಿತ್ಯಾತ್ಮಕವಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ 2007ರಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿದ್ದರೂ ಅದು ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತವಾಗಿದೆ. ಇತರ ಜಿಲ್ಲೆಯಲ್ಲಿರುವ ಬ್ಯಾರಿಗಳ ಅಕಾಡೆಮಿ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಚಿಕ್ಕಮಗಳೂರಿನ ಕೆ.ಮಹಮ್ಮದ್ ಅವರಿಗೆ ಒಂದುವರೆ ವರ್ಷ ಅಕಾಡೆಮಿ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಇತರೆ ಯಾವ ಜಿಲ್ಲೆಯ ಬ್ಯಾರಿಗಳನ್ನು ಸರ್ಕಾರ ಇದುವರೆಗೂ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಿಸಿಲ್ಲ. ಮಂಗಳೂರಿಗರು ಸರ್ಕಾರದ ಮಟ್ಟದಲ್ಲಿ ಲಾಭಿ ನಡೆಸಿ ಅಧ್ಯಕ್ಷ ಸ್ಥಾನವನ್ನು ಕಬಳಿಸಿಕೊಳ್ಳುತ್ತಿದ್ದಾರೆ. ಅಕಾಡೆಮಿಯಲ್ಲಿ 13 ಮಂದಿ ಸದಸ್ಯರಿದ್ದಾರೆ. ಚಿಕ್ಕಮಗಳೂರು ಮತ್ತು ಬೆಂಗಳೂರಿಗೆ ತಲಾ ಒಂದೊಂದು ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಇತರೆ ಯಾವ ಜಿಲ್ಲೆಗೂ ಪ್ರಾತಿನಿಧ್ಯ ನೀಡದೆ ಮಂಗಳೂರಿನ ಒಂದೆ ಜಿಲ್ಲೆಯವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ದ.ಕ ಜಿಲ್ಲೆಯಲ್ಲಿ ಬ್ಯಾರಿ ಭಾಷೆಯನ್ನು ಅಭಿವೃದ್ಧಿ ಮಾಡಬೇಕೆಂದೇನಿಲ್ಲ. ಅಲ್ಲಿ ಭಾಷೆಗೆ ಯಾವುದೇ ಅಡ್ಡಿ ಆತಂಕಗಳಿಲ್ಲದಿದ್ದರೂ ಒಂದು ಜಿಲ್ಲೆಗೆ ಮಾತ್ರ ಅಕಾಡೆಮಿಯನ್ನು ಸೀಮಿತಗೊಳಿಸಿರುವುದು ಸರಿಯಲ್ಲ. ರಾಜ್ಯದ ಇತರ ಜಿಲ್ಲೆಯಲ್ಲಿರುವ ಬ್ಯಾರಿಗಳನ್ನು ಅಕಾಡೆಮಿಗೆ ಅಧ್ಯಕ್ಷ-ಸದಸ್ಯರನ್ನಾಗಿ ಸರ್ಕಾರ ನೇಮಕಗೊಳಿಸಬೇಕು. ಅಕಾಡೆಮಿಯಿಂದ ಕಲೆ, ಸಾಹಿತ್ಯ, ಸಂಸ್ಕೃತಿ ವಿಭಾಗಕ್ಕೆ ಪ್ರತಿವರ್ಷ ನೀಡುವ ಗೌರವ ಮತ್ತು ಪುರಸ್ಕಾರ ಪ್ರಶಸ್ತಿಗೆ ದ.ಕ ಜಿಲ್ಲೆಗೆ ಸೇರಿದವರನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಇದು ಸರಿಯಲ್ಲ. ಚಿಕ್ಕಮಗಳೂರು ಸೇರಿದಂತೆ ಬ್ಯಾರಿಗಳು ಹೆಚ್ಚಾಗಿರುವ ಜಿಲ್ಲೆಗಳಿಗಳಿಂದಲೂ ಪ್ರಶಸ್ತಿಗೆ ಆಯ್ಕೆ ಮಾಡಬೇಕೆಂದು ಒತ್ತಾಯಿಸಿದರು.