ತಂತ್ರಜ್ಞಾನದ ಯುಗದಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದು ಮೂಡಬಿದ್ರೆ ತನ್ಮಯಿ ಟೆಕ್ನೋಲಜಿ ಮುಖ್ಯಸ್ಥ ಪ್ರದೀಪ್ ಹೇಳಿದರು.
ಅವರು ಇತ್ತೀಚೆಗೆ ಮೂಡಿಗೆರೆ ಪಟ್ಟಣದ ಸರಕಾರಿ ಐಟಿಐ ಕಾಲೇಜಿನಲ್ಲಿ ಜೆಸಿಐ ಸಂಸ್ಥೆ ಹಾಗೂ ತನ್ಮಯ್ ಟೆಕ್ನಾಲಜಿ ಮೂಡಬಿದ್ರಿ ಇದರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸ್ಕಿಲ್ ಇಂಡಿಯಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಲ ಮುಂದುವರೆದಂತೆ ತಂತ್ರಜ್ಞಾನವೂ ಮುಂದುವರೆಯುತ್ತಿದೆ. ಪ್ರಸಕ್ತ ಕಾಲದಲ್ಲಿ ಪಠ್ಯ ಪುಸ್ತಕಗಳನ್ನು ಓದುವ ಜತೆಗೆ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವ ಬಗ್ಗೆ ಅರಿಯಬೇಕಿದೆ. ಹಾಗಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಜೇಸಿ ಸಂಸ್ಥೆಯ ಹಮಿದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೆಸಿಐ ಸಂಸ್ಥೆ ಸಾಮಾಜಿಕ ಕಳಕಳಿಯೊಂದಿಗೆ ಸಮಾಜಕ್ಕೆ ಪೂರಕವಾಗಿ ನೂರಾರು ಜನಪರ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದೆ. ವಿದ್ಯಾರ್ಥಿಗಳು ದೇಶದ ಸಂಪತ್ತು. ಹಾಗಾಗಿ ಶಿಕ್ಷಣದ ಜೊತೆಗೆ ಈ ತರಬೇತಿಯ ಲಾಭವನ್ನು ಪಡೆದುಕೊಂಡಲ್ಲಿ ಭವಿಷ್ಯದಲ್ಲಿ ಯಶಸ್ಸು ಕಾಣಲು ಅನುಕೂಲವಾಗುತ್ತದೆ ಎಂದು ಹೇಳಿದರು.
ತನ್ಮಯಿ ಟೆಕ್ನೋಲಜಿ ಸಂಸ್ಥೆ ಮುಖ್ಯಸ್ಥ ಪ್ರದೀಪ್, ರಾಜು ಭಂಡಾರಿ, ಜೇಸಿ ಕಾರ್ಯದರ್ಶಿ ದೀಕ್ಷಿತ್ ಕಣಚೂರು, ಐಟಿಐ ಕಾಲೇಜು ಪ್ರಾಂಶುಪಾಲ ಸುದೀಪ್, ವಿಶ್ವಕುಮಾರ್, ಅಕ್ಷತ್ ಪಟ್ಟದೂರು, ರೇಖಾ ರವಿರಾಜ್, ಶೃತಿ ದೀಕ್ಷಿತ್, ಸುದೀಪ್ ಮಾಡ್ಕಲ್ ಮತ್ತಿತರರಿದ್ದರು.
ಈ ಸಂಧರ್ಭದಲ್ಲಿ ತರಬೇತುದಾರರನ್ನು ಜೆಸಿಐ ಸಂಸ್ಥೆ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಮಂಗಳವಾರ ಮೂಡಿಗೆರೆ ಜೆಸಿಐ ಹಾಗೂ ತನ್ಮಯ್ ಟೆಕ್ನಾಲಜಿ ಮೂಡಬಿದ್ರಿ ಇವರ ಸಹಭಾಗಿತ್ವದಲ್ಲಿ ಡಿಟಿಎಚ್ ಇನ್ಸ್ಟಾಲೇಶನ್ ಹಾಗೂ ಡಿಟಿಎಚ್ ರಿಪೇರಿ ಮತ್ತು ಟಿವಿ ಮದರ್ ಬೋರ್ಡ್ ರಿಪೇರಿ ಬಗ್ಗೆ ಪ್ರಾಯೋಗಿಕ ಹಾಗೂ ವೃತ್ತಿ ಸಿದ್ದಾಂತದ ಬಗ್ಗೆ ತರಬೇತಿಯನ್ನು ಐಟಿಐ ಮಕ್ಕಳಿಗೆ ತರಬೇತುದಾರರಾದ ಪ್ರದೀಪ್ ಹಾಗೂ ರಾಜು ಭಂಡಾರಿಯವರು ಸಂಕ್ಷಿಪ್ತವಾಗಿ ನೀಡಿದರು.