ಮಲೆನಾಡಿನಾದ್ಯಂತ ಗಾಳಿ ಮಳೆ ಅಬ್ಬರ ಜೋರಾಗಿದ್ದು, ಕಳೆದ ಕೆಲ ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದಾಗಿ ಮಲೆನಾಡಿನ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಅನೇಕ ಕಡೆ ಭೂಕುಸಿತ ಸಂಭವಿಸಿದ್ದು, ಗಾಳಿ ಮಳೆಯಿಂದ ಮರಗಳು ರಸ್ತೆಗೆ ಉರುಳಿ ಸಂಚಾರಕ್ಕೆ ತೊಡಕು ಉಂಟಾಗುತ್ತಿದೆ.
ಶನಿವಾರ ಬೆಳಿಗ್ಗೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಮಾಗುಂಡಿ ರಸ್ತೆಗೆ ಬೃಹತ್ ಗಾತ್ರದ ಮರ ಉರುಳಿ ಬಿದ್ದಿದ್ದು, ಸಂಚಾರಕ್ಕೆ ತೊಡಕು ಉಂಟಾಗಿದೆ.
ಎನ್.ಆರ್.ಪುರ ತಾಲೂಕಿನಿಂದ ಕಳಸ ತಾಲೂಕಿಗೆ ಸಂಪರ್ಕ ಕಲ್ಪಿಸುವ ಮಾಗುಂಡಿ ಸಮೀಪ ಬೆಳ್ಳಂಬೆಳಗ್ಗೆಯೇ ಮರ ಬಿದ್ದಿದ್ದು ಬಾಳೆಹೊನ್ನೂರು-ಕಳಸ, ಕೊಟ್ಟಿಗೆಹಾರ ರಸ್ತೆ ಬಂದ್ ಆಗಿತ್ತು
ಇದರಿಂದ ಸುಮಾರು ಒಂದು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗಿತ್ತು. ಕೂಡಲೇ ಕಾರ್ಯಪ್ರವೃತರಾಗಿ ಸ್ಥಳಿಯರು ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಮಳೆಯಿಂದಾಗಿ ತುಂಗಾ ಮತ್ತು ಭದ್ರ ನದಿಗಳು ತುಂಬಿ ಹರಿಯುತ್ತಿವೆ. ಶೃಂಗೇರಿ ಸಮೀಪ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕಳಸ ಹೊರನಾಡು ನಡುವೆ ಭದ್ರ ನದಿಗೆ ಅಡ್ಡಲಾಗಿರುವ ಹೆಬ್ಬೊಳೆ ಸೇತುವೆ ಮುಳುಗಡೆಯ ಹಂತಕ್ಕೆ ತಲುಪಿದೆ.
ಇನ್ನೂ ಕೆಲ ದಿನಗಳು ಮಳೆ ಮುಂದುವರಿಯುವ ಮುನ್ಸೂಚನೆ ನೀಡಲಾಗಿದೆ.