ಗ್ಯಾರಂಟಿ ಯೋಜನೆ ಹೆಸರಲ್ಲಿ ಜನರನ್ನು ದಾರಿತಪ್ಪಿಸುತ್ತಿದ್ದ, ರಾಜ್ಯ ಸರಕಾರ ಅಭಿವೃದ್ಧಿ ಬಗ್ಗೆ ಗಮನಹರಿಸದ ಕಾರಣ ರಾಜ್ಯದ ಯಾವ ಕ್ಷೇತ್ರವೂ ಅಭಿವದ್ಧಿಯಾಗಿಲ್ಲ ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಸಿ.ದಯಾಕರ್ ಹೇಳಿದರು.
ಚಿಕ್ಕಮಗಳೂರು ಜಿಲ್ಲೆ ದೇಶದಲ್ಲಿಯೇ ಅತ್ಯುತ್ತಮ ಪ್ರವಾಸಿ ತಾಣವಾಗಿದ್ದರಿಂದ ನಾನಾ ಭಾಗಗಳಿಂದ ವರ್ಷಕ್ಕೆ 1 ಕೋಟಿಗೂ ಅಧಿಕ ಪ್ರವಾಸಿಗರು ಭೇಟಿನೀಡುತ್ತಾರೆ. ಇದರಿಂದ ವಾಹನ ದಟ್ಟಣೆ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿವೆ. ಹಾಗಾಗಿ ಎಲ್ಲಾ ಪ್ರವಾಸಿ ತಾಣಗಳ ರಸ್ತೆ ಅಭಿವೃದ್ಧಿಪಡಿಸುವ ಜತೆಗೆ ಚಿಕ್ಕಮಗಳೂರಿನಿಂದ ಮೂಡಿಗೆರೆ ಸಮೀಪದ ಹ್ಯಾಂಡ್ ಪೋಸ್ಟ್ ವರೆಗೆ ಹಾಗೂ ಬೇಲೂರುವರೆಗೆ ರಸ್ತೆ ಅಗಲೀಕರಣ ಶೀಘ್ರದಲ್ಲಿಯೇ ಮಾಡಬೇಕು ಎಂದು ಒತ್ತಾಯಿಸಿದರು.
ಕೊಲೆ, ಅತ್ಯಾಚಾರ, ಭ್ರೂಣ ಹತ್ಯೆ, ರೇವು ಪಾರ್ಟಿ ಹೆಸರಿನಲ್ಲಿ ಗಾಂಜಾದಂತಹ ಮಾದಕ ವಸ್ತು ಬಳಕೆಯಿಂದಾಗಿ ಹೆಣ್ಣು ಮಕ್ಕಳ ಶೋಷಣೆಯಾಗುತ್ತಿದೆ. ಇತ್ತೀಚೆಗೆ ಪಟ್ಟಣದ ಶಾಲೆಯೊಂದರ ಬಳಿ ನಡೆದಿರುವ ಬಿಕ್ಷುಕಿ ಮಹಿಳೆಯ ಹತ್ಯೆ ಪ್ರಕರಣ ಸಾಕ್ಷಿಯಾಗಿದೆ. ಈ ಪ್ರಕರಣವನ್ನು ಇದೂವರೆಗೂ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿಲ್ಲ ಇಂತಹ ಪ್ರಕರಣಗಳು ಮುಂದುವರಿಯುವ ಸಾಧ್ಯತೆ ಇರುವುದರಿಂದ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಬೇಕೆಂದು ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಆಗ್ರಹಿಸಿದರು.
ರೈತ ಸಂಘದ ಚಿಕ್ಕಮಗಳೂರು ತಾಲೂಕು ಅಧ್ಯಕ್ಷ ತುಳಸೇಗೌಡ ಮಾತನಾಡಿ, ರೈತರಿಗೆ ಮಾರಕವಾದ ಸರ್ಫೇಸಿ ಕಾಯಿದೆಯನ್ನು ರದ್ದುಪಡಿಸಬೇಕು, ಇಲ್ಲವಾದರೆ ಬ್ಯಾಂಕುಗಳು ಆಸ್ತಿ ಹರಾಜು ಮಾಡುತ್ತೇವೆ ಎಂದು ಪದೇ ಪದೇ ರೈತರಿಗೆ ಕಿರುಕುಳ ನೀಡುತ್ತವೆ. ಇದನ್ನು ತಪ್ಪಿಸಲು ಕಾಫಿ ಕೃಷಿಯಿಂದ ಸರ್ಫೇಸಿ ಕಾಯ್ದೆಯಿಂದ ಹೊರಗಿಡಬೇಕು. ಕಳಸ ತಾಲೂಕು ರಚನೆಯಾಗಿ ಐದು ವರ್ಷ ಕಳೆದರೂ ಪೂರ್ಣ ತಾಲ್ಲೂಕಿನ ಸ್ಥಾನಮಾನ ದೊರಕಿಲ್ಲ. ತಾಲ್ಲೂಕು ಕೇಂದ್ರಕ್ಕೆ ಮೂಲಭೂತ ಸೌಲಭ್ಯ ಒದಗಿಸಬೇಕು. ಗೋಹತ್ಯೆ ನಿಷೇಧ ಕಾಯ್ದೆ ಪರಿಣಾಮಕಾರಿಯಾಗಿ ಜಾರಿ ಮಾಡಬೇಕು. ಕಾಡು ಪ್ರಾಣಿಗಳು ನಾಡಿಗೆ ಆಗಾಗ ಪ್ರವೇಶಿಸಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.
ಜಿಲ್ಲಾ ಸಂಚಾಲಕ ಡಿ.ಎಸ್.ರಮೇಶ್ ಮಾತನಾಡಿ; ಪ್ರತಿ ವರ್ಷ ಭತ್ತ ಬೆಳೆಯುವ ರೈತರಿಗೆ 1 ಎಕರೆಗೆ 20 ಸಾವಿರ ರೂ ಹಾಗೂ ಹಾಲು ಉತ್ಪಾದನೆ ಹೆಚ್ಚಿಸಲು 1 ಜಾನುವಾರಿಗೆ 15 ಸಾವಿರ ರೂ ಪ್ರೋತ್ಸಾಹ ಧನ ಕೊಡಬೇಕು. ಬ್ಯಾಂಕ್ಗಳಲ್ಲಿ ಪ್ರತಿ ಎಕರೆಗೆ ಕನಿಷ್ಟ 3 ಲಕ್ಷ ಸಾಲ ಸಿಗುವಂತಾಗಬೇಕು. ಕೇಂದ್ರ ಸರ್ಕಾರದ ಗ್ರಾಮಸಡಕ್, ಪಿಎಂ ಅವಾಸ್, ಜಲಜೀವನ್ ಮಿಷನ್ ಯೋಜನೆ ಕಟ್ಟು ನಿಟ್ಟಾಗಿ ಜಾರಿ ಮಾಡಬೇಕು. ಅರಣ್ಯ ಮತ್ತು ಕಂದಾಯ ಭೂಮಿ ಸಮಸ್ಯೆ ಬಗೆಹರಿಸಿ 94ಸಿ ಹಾಗೂ ಫಾರಂ ನಂ.50, 53, 57ರ ಅಡಿಯ ಅರ್ಜಿಗಳನ್ನು ವಿಲೇ ಮಾಡಿ ಹಕ್ಕು ಪತ್ರ ನೀಡಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಎಲ್ಲಾ ಸಂಘಟನೆಗಳೊಂದಿಗೆ ಸಮಾಲೋಚಿಸಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.