ಹವಾಮಾನ ಆಧಾರಿತ ಬೆಳೆವಿಮೆ ಕಂತು ಪಾವತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ತೋಟಗಾರಿಕಾ ಬೆಳೆಗಳಾದ ಅಡಿಕೆ ಮತ್ತು ಕಾಳು ಮೆಣಸು ಬೆಳೆಗಳಿಗೆ ವಿಮೆಯನ್ನು ಪಾವತಿಸಲು ಅವಕಾಶ ನೀಡಲಾಗಿದೆ. ಮಲೆನಾಡಿನ ಬೆಳೆಗಾರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಮನವಿ ಮಾಡಿದ್ದಾರೆ.
ಈ ಸಂಬಂಧ ಹೇಳಿಕೆ ನೀಡಿರುವ ಅವರು ಕಳೆದ ಕೆಲ ವರ್ಷಗಳಿಂದ ಮಲೆನಾಡಿನಲ್ಲಿ ಅತಿಹೆಚ್ಚು ರೈತರು ಬೆಳೆಯುವ ಅಡಿಕೆ ಮತ್ತು ಕಾಳು ಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ವಿಮಾ ಯೋಜನೆಯಡಿ ವಿಮಾ ರಕ್ಷಣೆ ಒದಗಿಸಲಾಗುತ್ತಿದೆ. ಅಲ್ಲದೇ ಮಾವು, ಹಸಿಮೆಣಸಿನ ಕಾಯಿ ಮತ್ತು ದಾಳಿಂಬೆ ಬೆಳೆಗಳಿಗೂ ಸಹ ವಿಮಾ ಸೌಲಭ್ಯ ಒದಗಿಸಲಾಗುತ್ತಿದೆ.
ಹವಾಮಾನ ವೈಪರೀತ್ಯದಿಂದ ಬೆಳೆನಾಶವಾದ ಸಂದರ್ಭದಲ್ಲಿ ಈ ವಿಮಾ ಯೋಜನೆ ರೈತರ ನೆರವಿಗೆ ಬರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಹಂಗಾಮಿನಲ್ಲಿ ವಿಮಾ ಮೊತ್ತ ರೈತರ ಖಾತೆಗಳಿಗೆ ಜಮೆ ಆಗಿದೆ.
ವಿಮಾ ಕಂತಿನಲ್ಲಿ ಹೆಚ್ಚಿನ ಪಾಲನ್ನು ಸರ್ಕಾರವೇ ಪಾವತಿ ಮಾಡುತ್ತಿದ್ದು, ರೈತರು ತಮ್ಮ ಪಾಲಿನ ಕಂತನ್ನು ಕಟ್ಟಿದರೆ ಉಳಿದ ಮೊತ್ತವನ್ನು ಸರ್ಕಾರ ಪಾವತಿಸುತ್ತದೆ. ಒಂದು ವೇಳೆ ವಿಮೆ ಕ್ಲೇಮ್ ಆದಾಗ ಒಳ್ಳೆಯ ಮೊತ್ತ ರೈತರಿಗೆ ದೊರೆಯುತ್ತದೆ. ಈ ಹಣ ರೈತರಿಗೆ ಆಪತ್ಕಾಲದಲ್ಲಿ ನೆರವಿಗೆ ಬರುತ್ತದೆ.
ಬ್ಯಾಂಕುಗಳಲ್ಲಿ ಸಾಲ ಮಾಡಿರುವ ರೈತರು ಆಯಾ ಬ್ಯಾಂಕುಗಳಲ್ಲಿ, ಸಹಕಾರ ಸಂಘದ ಸದಸ್ಯರಾಗಿರುವ ರೈತರು ಆಯಾ ಸಹಕಾರ ಸಂಘಗಳಲ್ಲಿ ವಿಮಾ ಕಂತು ಪಾವತಿಸಲು ಅವಕಾಶವಿದೆ. ಚಿಕ್ಕಮಗಳೂರು ಜಿಲ್ಲೆಯ ರೈತರಿಗೆ ಜುಲೈ 31 ರವರೆಗೆ ವಿಮಾ ಕಂತು ಪಾವತಿಸಲು ಅವಕಾಶ ನೀಡಲಾಗಿದೆ. ರೈತರು ಬೆಳೆವಿಮೆಯ ಬಗ್ಗೆ ಅಸಡ್ಡೆ ತೋರದೇ ಆಸಕ್ತಿಯಿಂದ ಇದರ ಸದ್ಭಳಕೆ ಮಾಡಿಕೊಳ್ಳಬೇಕೆಂದು ಕೋರಿದ್ದಾರೆ.
ಕಾಫಿ ಬೆಳೆಯನ್ನು ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ತರಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕಾಫಿ ಬೆಳೆಗೂ ವಿಮೇ ಸೌಲಭ್ಯ ದೊರೆಯುವ ಭರವಸೆ ಹೊಂದಲಾಗಿದೆ ಎಂದಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಮೀಪದ ತೋಟಗಾರಿಕಾ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.