ಕೆಂಪೇಗೌಡ ಒಕ್ಕಲಿಗರ ವೇದಿಕೆ ಮತ್ತು ವಿವಿಧ ಒಕ್ಕಲಿಗರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಜೂನ್ 29ರಂದು ಶನಿವಾರ ರೈತ ಭವನದಲ್ಲಿ ಅದ್ದೂರಿಯಾಗಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸಲಾಗುವುದು ಎಂದು ಕೆಂಪೇಗೌಡ ಒಕ್ಕಲಿಗರ ವೆದಿಕೆ ಅಧ್ಯಕ್ಷ ಬ್ರಿಜೇಶ್ಗೌಡ ಕಡಿದಾಳು ಹೇಳಿದರು.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೂನ್ 27 ರಂದು ರಾಜ್ಯಾಧ್ಯಂತ ಸರಕಾರ ಕೆಂಪೇಗೌಡರ ಜಯಂತಿ ಆಚರಿಸಿದೆ. ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿರುವ ಒಕ್ಕಲಿಗರ ಸಮಾಜದವರನ್ನು ಒಟ್ಟುಗೂಡಿಸಿ ಜೂನ್ 29ರಂದು ಅದ್ದೂರಿಯಾಗಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸಲಾಗುವುದು. ಬೆಳಗ್ಗೆ 10 ಗಂಟೆಗೆ ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಮುಖ ರಸ್ತೆಯಲ್ಲಿ ಕೆಂಪೇಗೌಡರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಗುವುದು. 11 ಗಂಟೆಗೆ ರೈತಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ವಿಧಾನಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಉದ್ಘಾಟಿಸಲಿದ್ದಾರೆ. ಸಾಹಿತಿ ಡಾ.ಆಗುಂಬೆ ಗಣೇಶ್ ಹೆಗ್ಗಡೆ ಅವರು ಕೆಂಪೇಗೌಡರ ಜೀವನ ಚರಿತ್ರೆ ಬಗ್ಗೆ ತಿಳಿಸಲಿದ್ದಾರೆ. ಅಲ್ಲದೇ ಸಮಾಜದ ಹಿರಿಯರು, ಎಲ್ಲಾ ರಾಜಕೀಯ ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆಂದು ಹೇಳಿದರು.
ವೇದಿಕೆ ಗೌರವಾಧ್ಯಕ್ಷ ಜಿ.ಎಚ್.ಹಾಲಪ್ಪಗೌಡ ಮಾತನಾಡಿ, ಮೂಡಿಗೆರೆಯಲ್ಲಿ ಒಕ್ಕಲಿಗರ ಸಂಖ್ಯೆ ಅಧಿಕವಾಗಿದೆ. ಕಳೆದ ವರ್ಷದಿಂದ ಕೆಂಪೇಗೌಡ ಜಯಂತಿಯನ್ನು ಅದ್ದೂರಿಯಾಗಿ ಒಕ್ಕಲಿಗರ ಯುವಕರ ತಂಡ ಆಚರಿಸುತ್ತಿದೆ. ಇದಕ್ಕೆ ಕಾಫಿ ನಾಡು ಮಹಿಳಾ ಒಕ್ಕಲಿಗರ ಸಂಘ, ಒಕ್ಕಲಿಗರ ಹಿತರಕ್ಷಣ ವೇದಿಕೆ ಸೇರಿದಂತೆ ಜಿಲ್ಲೆಯ ಎಲ್ಲಾ ಒಕ್ಕಲಿಗರ ಸಂಘದ ಸಹಕಾರ ನೀಡುತಿವೆ. ಶನಿವಾರ ನಡೆಯುವ ಕೆಂಪೇಗೌಡ ಜಯಂತಿ ಕಾರ್ಯಕ್ರಮಲ್ಲಿ ಸಮುದಾಯದ ಹಿರಿಯರು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು, ಪ್ರತಿಭಾನ್ವತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು. ಹಾಗಾಗಿ ಜಿಲ್ಲೆಯ ಒಕ್ಕಲಿಗರ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ವೇದಿಕೆಯ ಗೌರವಾಧ್ಯಕ್ಷ ಡಿ.ಕೆ.ಲಕ್ಷ್ಮಣ ಗೌಡ, ಸಹ ಕಾರ್ಯದರ್ಶಿ ಪ್ರೀತಮ್ಗೌಡ, ಖಜಾಂಚಿ ವೆಂಕಟೇಶ್ ಹಾರ್ಲಗದ್ದೆ ಉಪಸ್ಥಿತರಿದ್ದರು.