ಪತ್ನಿಯ ಅನೈತಿಕ ಸಂಬಂಧಕ್ಕೆ ಪತಿ ಬಲಿಯಾಗಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ದೊಡ್ಡಬೀರನಹಳ್ಳಿ ಗ್ರಾಮದಲ್ಲಿ ನಡೆದಲ್ಲಿ ನಡೆದಿದೆ.
ಸಂಬಂಧದಲ್ಲಿ ಮಗನಾಗಬೇಕಿದ್ದವನ ಜೊತೆ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಳು. ಇದನ್ನು ಗಂಡ ಪ್ರಶ್ನಿಸಿದಕ್ಕೆ ಗಂಡನಿಗೆ ವಿಷ ಹಾಕಿ ಕೊಂದು, ನಂತರ ಈ ಸಾವಿಗೆ ಸಹಜ ಸಾವಿನ ಕಥೆ ಕಟ್ಟಿದ್ದಾಳೆ.
ದೊಡ್ಡಬೀರನಹಳ್ಳಿಯ ಜಯಣ್ಣ(42) ತನ್ನ ಪತ್ನಿಯ ಅನೈತಿಕ ಸಂಬಂಧಕ್ಕೆ ಬಲಿಯಾಗಿದ್ದು, ಈ ಮರ್ಡರ್ ಸಂಚು ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದೆ. ಈ ಮೊದಲು ಹೊಟ್ಟೆ ನೋವಿನಿಂದ ಪತಿ ಸಾವನ್ನಪ್ಪಿದ್ದಾನೆ ಎಂದು ಪತ್ನಿ ಶೃತಿ ಕತೆ ಕಟ್ಟಿದ್ದಳು. ನಂತರ ಸಂಬಂಧಿಕರಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶವ ಸಂಸ್ಕಾರದ ವೇಳೆ ಪೊಲೀಸ್ ಹಾಜರಾಗಿದ್ದು, ಅಲ್ಲಿಯೇ ಪತ್ನಿ ಶೃತಿ ಜೊತೆ ಪ್ರಿಯಕರ ಕಿರಣ್ (27) ನನ್ನೂ ಬಂಧಿಸಿದ್ದಾರೆ.
ಏನಿದು ಘಟನೆ: ಮೃತ ಜಯಣ್ಣ ಟೈಲ್ಸ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಪತ್ನಿ ಶೃತಿ ಮೃತ ಜಯಣ್ಣನ ಅಣ್ಣನ ಮಗ ಕಿರಣ್ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಷಯ ಪತಿಗೆ ತಿಳಿದಿರುವುದೇ ಸಾವಿಗೆ ಪ್ರಮುಖ ಕಾರಣವಾಗಿದೆ.
ಜೂನ್ 15ರಂದು ಪ್ರಿಯಕರನ ಜೊತೆ ಸೇರಿ ಮದ್ಯದಲ್ಲಿ ವಿಷ ಹಾಕಿ ಕುಡಿಸಲಾಗಿದೆ. ಇದರಿಂದ ಹೊಟ್ಟೆ ನೋವು ಎಂದು ನರಳಾಡುತ್ತಿದ್ದ ಜಯಣ್ಣನನ್ನು ಪ್ರಿಯಕರ ಕಿರಣ್ ನ ಕಾರಿನಲ್ಲಿ ಅರಸಿಕೆರೆ ಆಸ್ಪತ್ರೆಗೆಂದು ಕರೆದೊಯ್ದಿದ್ದಾರೆ. ತಮ್ಮ ಸಂಚಿನಂತೆ ದಾರಿ ಮಧ್ಯೆ ಶೃತಿ ಹಾಗೂ ಕಿರಣ್ಕುಮಾರ್ ಟವೆಲ್ನಿಂದ ಅಸ್ವಸ್ಥನಾಗಿದ್ದ ಜಯಣ್ಣನ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ. ನಂತರ ಮೃತದೇಹವನ್ನು ಊರಿಗೆ ತಂದು ಚಿಕಿತ್ಸೆ ಫಲಕಾರಿಯಾಗದೇ ಜಯಣ್ಣ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಜಯಣ್ಣನ ಹೊಟ್ಟೆಯಲ್ಲಿ ಗೆಡ್ಡೆಯಾಗಿತ್ತು ಎಂದು ಸಂಬಂಧಿಕರಿಗೆ ಸುಳ್ಳು ಹೇಳಿ ಹತ್ಯೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ.
ಮಗಳಿಂದಲೇ ಬಯಲಾದ ಸತ್ಯ : ಇತ್ತ ಜಯಣ್ಣನ ಅಂತ್ಯಸಂಸ್ಕಾರಕ್ಕೆ ಪತಿ ತರಾತುರಿಯಲ್ಲಿ ತಯಾರಿ ನಡೆಸಿರುತ್ತಾಳೆ. ಇದರಿಂದ ಸಂಬಂಧಿಕರು ಅನುಮಾನಗೊಂಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖೆ ನಡೆಸಿದ ಪೊಲೀಸರಿಗೆ ಕೊಲೆಯ ಸಂಚಿನ ವಿಷಯ ಅವಳ ಸ್ವಂತ ಮಗಳಿಂದಲೇ ತಿಳಿದಿದ್ದು, ಅಸ್ಪತ್ರೆಗೆ ಅಪ್ಪನನ್ನ ಕರೆದುಕೊಂಡು ಹೋಗಿಲ್ಲ ಎಂದು ಮಗಳು ಸತ್ಯ ಹೇಳಿದ್ದಾಳೆ. ಇದರಿಂದ ಪ್ರಕರಣ ದಾಖಲಿಸಿಕೊಂಡು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವಿಷಸೇವಿಸಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.