ಸಂಗೀತ ದೈವಿಕ ಕಲೆ. ಶಾಂತಿ ನೆಮ್ಮದಿಯನ್ನು ತಂದು ಕೊಡುತ್ತದೆ. ಇದೊಂದು ಗಂಧರ್ವ ವಿದ್ಯೆ ಎಂದು ಶ್ರೀದೇವಿ ಭಜನಾ ಮಂಡಳಿ ಸಂಸ್ಥಾಪಕ ವಿದ್ವಾನ್ ಡಾ.ದಯಾನಂದಮೂರ್ತಿಶಾಸ್ತ್ರಿ ನುಡಿದರು.
ಸುವರ್ಣ ಮಾಧ್ಯಮ ಭವನದ ಚಿಕ್ಕೊಳಲೆ ಸದಾಶಿವಶಾಸ್ತ್ರಿ ಸಭಾಂಗಣದಲ್ಲಿ ಮಾಧ್ಯಮ ಸಂಸ್ಕøತಿ ಪ್ರತಿಷ್ಠಾನ, ಶ್ರೀ ದೇವಿ ಗುರುಕುಲ, ಪಾರ್ವತಿ ಮಹಿಳಾಮಂಡಳಿ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಸಂಯುಕ್ತಾಶ್ರಯದಲ್ಲಿ ಚಿಕ್ಕಮಗಳೂರಿನಲ್ಲಿ ಆಯೋಜಿಸಿದ್ದ ವಿಶ್ವ ‘ಸಂಗೀತ ದಿನ’ವನ್ನು ಕಂಜರಿ ನುಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತಕ್ಕೆ ಬಹಳಷ್ಟು ಮಹತ್ವವಿದೆ. ಗಿಡ, ಮರ, ಪಶುಪಕ್ಷಿಗಳು ಸಂಗೀತಕ್ಕೆ ಸ್ಪಂದಿಸುತ್ತವೆ. ಚಿಕಿತ್ಸಾ ಪದ್ಧತಿಗಳಲ್ಲೂ ಸಂಗೀತ ಬಳಕೆಯಾಗುತ್ತಿದೆ. ಸಂಗೀತ ಮತ್ತು ಭಜನೆಯನ್ನು ಹಾಡುವುದರಿಂದ ಅಥವಾ ಕೇಳುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ. ರಾಗ ತಾಳಕ್ಕಿಂತ ಆಸಕ್ತಿ ಮತ್ತು ಭಾವ ಮುಖ್ಯ ಎಂದ ಅವರು, ಜಗತ್ತಿನಾದ್ಯಂತ ಸಂಗೀತ ದಿನವನ್ನು ಇಂದು ಸಂಭ್ರಮಿಸುತ್ತಿರುವುದು ಇದಕ್ಕಿರುವ ಮಹತ್ವ ಹಾಗೂ ವ್ಯಾಪಕತೆಯನ್ನು ಸಾರುತ್ತದೆ ಎಂದರು.
ನಮ್ಮಲ್ಲಿ ಬಹಳಷ್ಟು ಜನ ಸಂಗೀತ ಸಾಧಕರು ದೇಶ ವಿದೇಶಗಳಲ್ಲಿ ಪ್ರತಿಭೆಯನ್ನು ಮೆರೆದಿದ್ದಾರೆ. ಸಂಗೀತಕ್ಕೆ ಮನಸೋಲದವರು ಯಾರೂ ಇಲ್ಲ. ಅಬಾಲ-ವೃದ್ಧರಾದಿಯಾಗಿ ಎಲ್ಲರೂ ಒಂದಿಲ್ಲೊಂದು ರೀತಿಯ ಸಂಗೀತವನ್ನು ಗುನುಗುತ್ತಾರೆ ಎಂದ ಡಾ.ದಯಾನಂದಮೂರ್ತಿಶಾಸ್ತ್ರಿ, ಸಮಾಜವನ್ನು ಬೆಸೆಯಲು ಭಜನೆ ಮುಖ್ಯ ಸಾಧನವಾಗುತ್ತದೆ. ಸಂಸ್ಕøತಿ ಮತ್ತು ಪರಂಪರೆಯನ್ನು ಮುಂದುವರೆಸಲು ಭಜನಾ ಮಂಡಳಿಗಳು ಸಹಕಾರಿಯಾಗಿವೆ ಎಂದರು.
ಮಾಧ್ಯಮ ಸಂಸ್ಕøತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ನಿರಂತರವಾದ ಸಾಧನೆ ಮತ್ತು ಪರಿಶ್ರಮಕ್ಕೆ ಸಂಗೀತ ಒಲಿಯುತ್ತದೆಯಾದರೂ ಒಂದಷ್ಟು ಪ್ರತಿಭೆಯೂ ಅಗತ್ಯ. ಏಳು ಸ್ವರಗಳು ಸೇರಿ ಸಂಗೀತವಾಗಿದೆ. ಸಂಗೀತದಲ್ಲಿ ಹಲವಾರು ಪ್ರಕಾರಗಳಿದ್ದು ಕರ್ನಾಟಕ ಸಂಗೀತ, ಭಾರತೀಯ ಸಂಗೀತ, ಹಿಂದೂಸ್ತಾನಿ ಸಂಗೀತ, ಜಾನಪದ ಪ್ರಮುಖವಾದವು. ಇತ್ತೀಚಿನ ದಿನಗಳಲ್ಲಿ ಇವೆಲ್ಲಕ್ಕೂ ಜನಮನ್ನಣೆ ಸಿಗುತ್ತಿದೆ ಎಂದರು.
ಕಳೆದ 15ವರ್ಷಗಳಿಂದ ಪ್ರತಿಷ್ಠಾನದ ವತಿಯಿಂದ ವಿಶ್ವಸಂಗೀತ ದಿನವನ್ನು ಸಂಗೀತ ವಿದ್ವಾಂಸರನ್ನು ಗೌರವಿಸುವ ಮೂಲಕ ಆಚರಿಸಿಕೊಂಡು ಬರಲಾಗುತ್ತಿದೆ. ನಂತರದ ವರ್ಷಗಳಲ್ಲಿ ಶ್ರೀ ದೇವಿ ಗುರುಕುಲ ಮತ್ತಿತರ ಸಂಸ್ಥೆಗಳು ಜೊತೆಗೂಡಿ ಇದಕ್ಕೆ ಮೆರಗು ನೀಡಿದೆ. ಜಗತ್ತಿಗೆ ಭಾರತದ ಕೊಡುಗೆಗಳಲ್ಲಿ ಸಂಗೀತವೂ ಪ್ರಮುಖವಾದದ್ದು ಎಂದರು.
ಶ್ರೀಪಾರ್ವತಿ ಮಹಿಳಾ ಮಂಡಳಿ ಅಧ್ಯಕ್ಷೆ ಸುಮಿತ್ರಾಶಾಸ್ತ್ರಿ ಸ್ವಾಗತಿಸಿ ನಿರೂಪಿಸಿದರು. ಪುಷ್ಪಾಕುಮಾರಸ್ವಾಮಿ ಪ್ರಾರ್ಥಿಸಿ, ದೇವಿ ಗುರುಕುಲದ ಶಿಕ್ಷಣಾರ್ಥಿ ಶೈಲಜಾಬಸವರಾಜು ವಂದಿಸಿದರು. ಸಮೂಹಗಾಯನ ನಡೆಯಿತು.
ಭಜನೆ ಹಾಗೂ ಸಂಗೀತಕ್ಷೇತ್ರದ ಸೇವೆಯನ್ನು ಪರಿಗಣಿಸಿ ವೇದಬ್ರಹ್ಮ ವಿದ್ವಾನ್ ಡಾ.ದಯಾನಂದಮೂರ್ತಿಶಾಸ್ತ್ರಿಗಳವನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶಿವಣ್ಣ, ನಂದಿನಿಶಾಸ್ತ್ರಿ, ವಿಶಾಲಾಕ್ಷಮ್ಮ, ಶಶಿಕಲಾವಿಜಯಕುಮಾರ್, ಸುಮಾ, ರೂಪಾ, ಮಹೇಶ್ವರಿ, ಪ್ರಮೀಳಾಕಲ್ಲೇಶ್, ಸುಧಾಕಿಶನ್, ಲತಾಮಹಾಂತೇಶ್, ದೈಹಿಕಶಿಕ್ಷಕಿ ರುಕ್ಮಿಣಿ ಮತ್ತಿತರರು ಪಾಲ್ಗೊಂಡಿದ್ದರು.