ಕುಸಿಯುವ ಹಂತಕ್ಕೆ ತಲುಪಿರುವ ಎಲ್ಲಾ ಶಾಲೆಗಳ ನೂತನ ಕಟ್ಟಡ ನಿರ್ಮಾಣಕ್ಕೆ ಸರಕಾರ ಆದ್ಯತೆ ನೀಡಿದೆ. ಶಿಥಿಲಗೊಂಡಿರುವ ಶಾಲಾ ಕಟ್ಟಡಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಹೇಳಿದರು.
ಅವರು ಗುರುವಾರ ಗೋಣಿಬೀಡಿನಲ್ಲಿ 41 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಉಧ್ಘಾಟಿಸಿ ಮಾತನಾಡಿದರು. ಸರಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನಿಗಾವಹಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳು ಕಾರ್ಯಪವೃತ್ತರಾಗಬೇಕೆಂದು ಸರಕಾರ ಈಗಾಗಲೇ ಸುತ್ತೋಲೆ ಹೊರಡಿಸಿದೆ. ಪ್ರತಿ ಶಾಲೆಗಳಲ್ಲಿ ಉತ್ತಮ ಕಟ್ಟಡ, ಶೌಚಾಲಯ, ಅಡುಗೆಮನೆ, ಕುಡಿಯುವ ನೀರು, ವಿದ್ಯುತ್, ಆಟದ ಮೈದಾನ, ಆಟಿಕೆಗಳು, ರಂಗಮಂದಿರ ಮತ್ತು ಕಾಂಪೌಂಡ್ ನಿರ್ಮಾಣ ಸೇರಿದಂತೆ ಸಕಲ ವ್ಯವಸ್ಥೆ ಇರುವಂತೆ ಹಂತಹಂತವಾಗಿ ಕ್ರಿಯಾ ಯೋಜನೆ ತಯಾರಿಸಲಾಗುವುದು. ಮಕ್ಕಳಿಗೆ ಸಮವಸ್ತ್ರ, ಶೂ ಮತ್ತು ಸಾಕ್ಸ್, ಪಠ್ಯಪುಸ್ತಕ, ಹಾಲು, ಬಿಸಿಯೂಟ, ಶೈಕ್ಷಣಿಕ ಸ್ಕಾಲರ್ಶಿಪ್, ಬಸ್ ಪಾಸ್ ಸೇರಿದಂತೆ ಸರಕಾರ ಎಲ್ಲ ಸೌಲಭ್ಯ ನೀಡುತ್ತಿದೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ಗ್ರಾ.ಪಂ.ಅಧ್ಯಕ್ಷ ಜಿ.ಎಸ್.ದಿನೇಶ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದೆ ವಿದ್ಯಾವಂತರಾಗಿ ಸಮಾಜದ ಆಗುಹೋಗುಗಳ ಕುರಿತು ಆಡಳಿತ ವ್ಯವಸ್ಥೆಯೊಂದಿಗೆ ಚರ್ಚೆ ನಡೆಸಲು ಸಹಾಯವಾಗುತ್ತದೆ. .ಪ್ರತಿ ಗ್ರಾಮಗಳಿಗೆ ಸರಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಯಾಗಿ ಅಭಿವೃದ್ದಿಗೆ ಒತ್ತು ಸಿಗುತ್ತದೆ. ಅಭಿವೃದ್ದಿಯ ಬಗ್ಗೆ ಜನ ಪ್ರಶ್ನೆ ಮಾಡಲು ಹಿಂದೇಟು ಹಾಕಿದರೆ ಅಭಿವೃದ್ದಿ ಕುಂಠಿತಗೊಳ್ಳಲು ಕಾರಣವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಉತ್ತಮ ಶಿಕ್ಷಣಹೊಂದಿ, ಜ್ಞಾನ ಸಂಪಾಧಿಸಿ ಪ್ರಶ್ನಿಸುವ ಮನೋಭಾವವನ್ನು ಹೊಂದಬೇಕೆಂದು ಹೇಳಿದರು.
ಎಸ್ಡಿಎಂಸಿ ಅಧ್ಯಕ್ಷ ಆನಂದ್ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯರಾದ ಸುಪ್ರಿತಾ ನಯನ, ಜಿ.ಎನ್.ಪ್ರಹ್ಲಾದ, ಗೋಣಿಬೀಡು ಹೋಬಳಿ ಅಧ್ಯಕ್ಷ ಸುಬ್ರಾಯಗೌಡ, ಯೂತ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಉಗ್ಗೇಹಳ್ಳಿ, ಮನು ಮರೆಬೈಲ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯು.ಆರ್.ಶಿವಕುಮಾರ್, ಮುಖ್ಯ ಶಿಕ್ಷಕಿ ಶಕುಂತಲಾ ಮತ್ತಿತರರಿದ್ದರು.