ಮೂಡಿಗೆರೆ ತಾಲೂಕಿನಲ್ಲಿ ಡೆಂಘೆ ಪ್ರಕರಣಗಳು ದಿನಂಪ್ರತಿ ಹೆಚ್ಚಾಗುತ್ತಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.
ಕಳೆದ ತಿಂಗಳು 88 ಪ್ರಕರಣ ಗಳಲ್ಲಿ 24 ಡೆಂಘೆ ಜ್ವರದ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ. ಈ ತಿಂಗಳ 12ರವರಿಗೆ 84 ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ. ಆದರಲ್ಲಿ 22 ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ. ಜೂ. 13 ರಂದು 13 ಮಂದಿಯ ರಕ್ತದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿತ್ತು. 7 ಮಂದಿಯಲ್ಲಿ ರೋಗ ದೃಢಪಟ್ಟಿದೆ. ಶುಕ್ರವಾರ 6 ಮಂದಿಯನ್ನು ತಪಾಸಣೆ ಮಾಡಲಾಗಿದೆ. ಯಾರೊಬ್ಬರಿಗೂ ರೋಗ ದೃಢಪಟ್ಟಿಲ್ಲ.
ತಾಲೂಕು ಆಸ್ಪತ್ರೆ ಹಾಗೂ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರತಿನಿತ್ಯ150ಕ್ಕೂ ಹೆಚ್ಚು ಮಂದಿ ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.ಗ್ರಾಮೀಣ ಭಾಗದ ರೋಗಿಗಳನ್ನು ತಾಲೂಕು ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಲಾರ್ವ ಸರ್ವೆ ನಡೆಸಲು ಸ್ವಯಂಸೇವಕರ ನೆರವು ನಿರೀಕ್ಷಿಸಲಾಗಿದೆ. ಸ್ಕೌಟ್ಸ್ ಅಂಡ್ ಗೈಡ್ಸ್ ಅಥವ ಸ್ವಯಂಸೇವಾ ಸಂಸ್ಥೆ ಸಹಕಾರ ನೀಡಿದರೆ ಲಾರ್ವ ಸರ್ವೆ ನಡೆಸಿ ಡೆಂಘೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಡೆಂಘೆ ರೋಗದ ಲಕ್ಷಣ ಕಂಡುಬಂದವರನ್ನು ತಾಲೂಕು ಆಸ್ಪತ್ರೆಯಲ್ಲಿ ಪಿಜಿಸಿಯನ್ ವೈದ್ಯಾಧಿಕಾರಿ ಡಾ.ಮಾನಸ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸೊಳ್ಳೆ ಹರಡದಂತೆ ಪ.ಪಂನಿಂದ ಹಲವು ರೀತಿಯಲ್ಲಿ ಕ್ರಮ ಕೈಗೊಂಡಿದ್ದು ಶುಕ್ರವಾರದಿಂದ ವಿವಿಧ ಬಡಾವಣೆಗಳಿಗೆ ರಾಸಾಯನಿಕ ಸಿಂಪಡಿಸುತ್ತಿದ್ದಾರೆ. ತೆರೆದ ಚರಂಡಿಯಲ್ಲಿ ಸೊಳ್ಳೆ ಉತ್ಪತ್ತಿಯಾಗುತ್ತಿದ್ದು ಡೆಂಘೆ ಹರಡಲು ಪ್ರಮುಖ ಕಾರಣವಾಗಿದೆ ಎಂದು ಚರಂಡಿಯನ್ನು ಸ್ವಚ್ಛಗೊಳಿಸಿ ಪಪಂ ಸದಸ್ಯ ಎಂ.ಎ.ಹಂಝ ಅವರು ಸ್ಥಳದಲ್ಲಿದ್ದು ಸಿಬ್ಬಂದಿಗಳ ಮೂಲಕ ಬ್ಲೀಚಿಂಗ್ ಪೌಡರ್ ಹಾಕಿಸಿದರು,
ಭಯಪಡುವ ಅಗತ್ಯವಿಲ್ಲ ರೋಗದ ಲಕ್ಷಣ ಕಂಡು ಬಂದಲ್ಲಿ ಆಸ್ಪತ್ರೆಗೆ ಭೇಟಿ ನೀಡಿ : ಡಾ.ಪ್ರಿಯಾಂಕ, ಆಡಳಿತ ವೈದ್ಯಾಧಿಕಾರಿ
ಡೆಂಘೆ ರೋಗ ಕಾಣಿಸಿಕೊಂಡ ನಂತರ ಚಿಕಿತ್ಸೆಗೆ ದಾಖಲಾಗುವುದಕ್ಕಿಂತ ರೋಗ ಬಾರದಂತೆ ಹಾಗೂ ಹರಡದಂತೆ ಮುಂಜಾಗ್ರತೆ ವಹಿಸಬೇಕು. ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಸೋಂಕಿನ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷ ವಹಿಸದೆ ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು. ಇದ್ದಕ್ಕಿದ್ದಂತೆ ವಿಪರೀತ ಜ್ವರ, ತಲೆನೋವು, ವಾಂತಿ, ಮೈಕೈ ನೋವು, ಮೈಮೇಲೆ ಗುಳ್ಳೆ ಏಳುವುದು, ಕಣ್ಣಿನ ರೆಪ್ಪೆಯ ಸುತ್ತ ನೋವು, ಬಾಯಿ, ಮೂಗು, ಒಸಡುಗಳಿಂದ ಹಾಗೂ ಮೂತ್ರ ವಿಸರ್ಜನೆ ವೇಳೆ ರಕ್ತಸ್ರಾವ ಉಂಟಾಗುವುದು. ಡೆಂಗೆ ಜ್ವರದ ಸಾಮಾನ್ಯ ಲಕ್ಷಣಗಳು. ಸೊಳ್ಳೆಗಳ ನಿಯಂತ್ರಣದಿಂದ ಈ ರೋಗದ ಹತೋಟಿ ಸಾಧ್ಯವಿದೆ. ಮನೆಗಳಲ್ಲಿ ರಾತ್ರಿ ಸೊಳ್ಳೆ ಪರದೆ ಬಳಸಬೇಕು. ಸಿಮೆಂಟ್ ತೊಟ್ಟಿ, ಡ್ರಮ್ ಗಳಲ್ಲಿ ದೀರ್ಘಕಾಲ ನೀರು ಶೇಖರಿಸಿರಬಾರದು, ಮನೆ ಸುತ್ತ ಎಳನೀರು ಚಿಪ್ಪು, ಒಡೆದ ಬಾಟಲಿ, ತ್ಯಾಜ್ಯ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು. ಇತ್ತೀಚೆಗೆ ಬಿಳಿ ಸೊಳ್ಳೆ ಉತ್ಪತ್ತಿಯಾಗುತ್ತಿದೆ. ಅದು ಕಚ್ಚಿದಾಗ ಡೆಂಘೆ ರೋಗ ಕಾಣಿಸಿಕೊಳ್ಳುತ್ತದೆ. ಈ ಸೊಳ್ಳೆ ಹಗಲು ಹೊತ್ತಿನಲ್ಲಿ ಹೆಚ್ಚಾಗಿ ಕಚ್ಚುತ್ತದೆ. ಮಕ್ಕಳು ಹಾಗೂ ಹಾಸಿಗೆ ಹಿಡಿದಿರುವ ವೃದ್ಧರೂ, ರೋಗಿಗಳು ಸೊಳ್ಳೆ ಪರದೆ ಬಳಸಬೇಕು. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ರೋಗದ ಲಕ್ಷಣ ಕಂಡು ಬಂದಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ ಎಂದು ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಪ್ರಿಯಾಂಕ ತಿಳಿಸಿದ್ದಾರೆ.