ಟಿಂಬರ್ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಮರದ ಕೊಂಬೆ ಮೈಮೇಲೆ ಬಿದ್ದು ಕಾರ್ಮಿಕರೋರ್ವರು ಮೃತಪಟ್ಟಿರುವ ಘಟನೆ ನಡೆದಿದೆ.
ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿಯಲ್ಲಿ ಈ ದುರ್ಘಟನೆ ನಡೆದಿದೆ. ಬಣಕಲ್ ಸಮೀಪದ ಹೆಗ್ಗುಡ್ಲು ಗ್ರಾಮದಲ್ಲಿ ಮರದ ಕೊಂಬೆ ಮೈಮೇಲೆ ಬಿದ್ದು ಕಾರ್ಮಿಕ ಮೃತಪಟ್ಟಿದ್ದಾರೆ.
ಪುತ್ತೂರು ಮೂಲದ ಕಾರ್ಮಿಕ ಅಬ್ದುಲ್ ಅಜೀಜ್ (21 ವರ್ಷ) ಮೃತಪಟ್ಟ ಯುವಕ. ಹೆಗ್ಗಡ್ಲು ಗ್ರಾಮದ ಇಸ್ಮಾಯಿಲ್ ಎಂಬುವವರ ತೋಟದಲ್ಲಿ ಶನಿವಾರ ಬೆಳಿಗ್ಗೆ ಈ ದುರ್ಘಟನೆ ನಡೆದಿದೆ.
ತನ್ನ ತಂದೆಯೊಂದಿಗೆ ಟಿಂಬರ್ ಕಡಿಯುವ ಕೆಲಸ ಮಾಡುತ್ತಿದ್ದಾಗ ಸ್ವತಃ ತನ್ನ ತಂದೆಯೇ ಕಡಿದ ಮರವೊಂದು ಪಕ್ಕದ ಮರವೊಂದಕ್ಕೆ ತಾಗಿ ಮಗುಚಿ ಬಿದ್ದಾಗ ಮರದ ಕೊಂಬೆ ಅಬ್ದುಲ್ ಅಜೀಜ್ ಮೈಮೇಲೆ ಬಿದ್ದಿದ್ದು, ಇದರಿಂದ ಕೈ ಮತ್ತು ಕುತ್ತಿಗೆ ಭಾಗಕ್ಕೆ ತೀವ್ರವಾಗಿ ಪೆಟ್ಟಾಗಿತ್ತು ಎನ್ನಲಾಗಿದೆ.
ತೀವ್ರವಾಗಿ ಗಾಯಗೊಂಡಿದ್ದ ಅಜೀಜ್ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ಪ್ರಾಣಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತದೇಹವನ್ನು ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆಗೆ ಸಾಗಿಸಲಾಗಿದೆ.