ದೇಶದಲ್ಲಿ ತಂಬಾಕು ಮದ್ಯಪಾನ, ಧೂಮಪಾನ ಹಾಗೂ ಮಾದಕ ವಸ್ತುಗಳಿಗೆ ಜನಾಂಗ ಬಲಿಯಾಗುತ್ತಿದ್ದಾರೆ. ಇಂತಹ ದುಶ್ಚಟಗಳಿಂದ ಮಾನವ ಸಂಪನ್ಮೂಲ ನಶಿಸಿ ಹೋಗುತ್ತಿದ್ದರೂ ಮಾನವ ಸಂಪನ್ಮೂಲ ಇಲಾಖೆ ಸಂಪೂರ್ಣ ನಿದ್ದೆಯಲ್ಲಿ ಮುಳುಗಿದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಟ್ರಸ್ಟಿ ಪ್ರಶಾಂತ್ ಚಿಪ್ರಗುತ್ತಿ ದೂರಿದರು.
ಅವರು ಗುರುವಾರ ಮೂಡಿಗೆರೆ ಪಟ್ಟಣದ ಬಿಜಿಎಸ್ ಕಾಲೇಜಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆ ವತಿಯಿಂದ ಏರ್ಪಡಿಸಿದ್ದ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತ ದೇಶವು ಸುಮಾರು 140 ಕೋಟಿ ಜನಸಂಖ್ಯೆ ಇರುವ ಮಾನವೀಯ ಸಂಪನ್ಮೂಲವಿದೆ. ಇದರಲ್ಲಿ ಸುಮಾರು ಶೇ.67 ಯುವಕರಿದ್ದು, ಬಹುತೇಕ ಯುವಕರು ಮಾದಕ ವಸ್ತುಗಳಿಗೆ ಮಾರುಹೋಗಿದ್ದರಿಂದ ಮಾನವ ಸಂಪನ್ಮೂಲಕ್ಕೆ ಅಪಾಯ ಎದುರಾಗಿದೆ ಎಂದು ಹೇಳಿದರು.
ಭಾರತದ ಮೇಲೆ ಪಾಕಿಸ್ತಾನ, ಚೈನಾ ಅಥವಾ ಶತ್ರು ದೇಶಗಳು ನೇರವಾಗಿ ಯುದ್ಧ ಮಾಡುತ್ತಿಲ್ಲ. ಬದಲಾಗಿ ನಮ್ಮ ದೇಶದೊಳಗೆ ಮಾದಕ ವಸ್ತುಗಳನ್ನು ನೇಪಾಳ, ಬಾಂಗ್ಲಾ ಗಡಿಯ ಮುಖಾಂತರ ಸಾಗಿಸಿ ಇಲ್ಲಿಯ ಯುವಜನತೆಯ ದೈಹಿಕ ಮಾನಸಿಕ ಸಾಮರ್ಥ್ಯವನ್ನು ಕುಗ್ಗಿಸುವ ಮೂಲಕ ಮಾನವ ಸಂಪನ್ಮೂಲವನ್ನು ಹಾಳು ಮಾಡಲಾಗುತ್ತಿದೆ. ಈ ಬಗ್ಗೆ ಮಾನವ ಸಂಪನ್ಮೂಲ ಇಲಾಖೆ ಯಾವುದೇ ರೀತಿಯ ಪರಿಣಾಮಕಾರಿಯಾದ ಕೆಲಸ ಮಾಡುತ್ತಿಲ್ಲವೆಂದು ದೂರಿದರು.
ಮೂಡಿಗೆರೆ ಪಿಎಸ್ಐ ಶ್ರೀನಾಥ್ ರೆಡ್ಡಿ ಮಾತನಾಡಿ, ಮಾದಕ ವಸ್ತುಗಳನ್ನು ಸೇವಿಸುವುದು ಕಾನೂನು ಬಾಹೀರವಾಗಿದೆ. ಆರೋಗ್ಯ ಹಾಗೂ ಸಮಾಜದ ಹಿತ ದೃಷ್ಟಿಯಿಂದ ಕೂಡ ಮಾದಕ ವಸ್ತು ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ಮಾದಕ ವಸ್ತುಗಳಿಂದ ಯುವ ಜನತೆ ದೂರವಿರಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆಯ ಜಿಲ್ಲಾ ಸದಸ್ಯರಾದ ಕೊಲ್ಲಿಬೈಲು ವೆಂಕಟೇಶ್ ಮಾತನಾಡಿ ಯುವಕರು ಮುಂದಿನ ದಿನಗಳಲ್ಲಿ ಒಳ್ಳೆಯ ಸಂಸ್ಕಾರವನ್ನು ರೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಶಿವಾನಂದ್ ಯೋಜನೆಯ ದಾಮೋದರ್ , ರವಿ ಪೂಜಾರಿ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಎಂ.ಆರ್.ಸಂದೇಶ್ ಇದ್ದರು.