ವಿಧಾನಪರಿಷತ್ ನೈರುತ್ಯ ಪದವೀಧರ ಕ್ಷೇತ್ರದ ಫಲಿತಾಂಶ ಪ್ರಕಟವಾಗಿದ್ದು, ಬಿ.ಜೆ.ಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಭರ್ಜರಿ ಅಂತರದಿಂದ ಗೆಲುವು ಪಡೆದಿದ್ದಾರೆ.
ನಿನ್ನೆ ತಡರಾತ್ರಿಯವರೆಗೆ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಅಂತಿಮವಾಗಿ ಬಿ.ಜೆ.ಪಿ.ಯ ಧನಂಜಯ ಸರ್ಜಿ ಯವರು 37627 ಮತಗಳನ್ನು ಗಳಿಸಿ ಗೆಲುವಿನ ನಗು ಬೀರಿದರು.
ಸಮೀಪದ ಪ್ರತಿಸ್ಪರ್ಧಿ ಕಾಂಗ್ರೇಸ್ ನ ಆಯನೂರು ಮಂಜುನಾಥ್ ಅವರು 13,516 ಮತಗಳನ್ನು ಗಳಿಸಿದರೆ ಬಿ.ಜೆ.ಪಿ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕ ರಘುಪತಿ ಭಟ್ ಅವರು 7039 ಮತಗಳನ್ನು ಗಳಿಸಿದರು. ಪಕ್ಷೇತರ ಅಭ್ಯರ್ಥಿ ಎಸ್.ಪಿ. ದಿನೇಶ್ 2518 ಮತಗಳನ್ನು ಗಳಿಸಿದರು.
ಒಟ್ಟು 66497 ಮತಗಳು ಚಲಾವಣೆಯಾಗಿದ್ದು, ಅವುಗಳಲ್ಲಿ 61382 ಮತಗಳು ಸಿಂಧುವಾಗಿದ್ದವು. ಈ ಮೂಲಕ ಕಳೆದ ಬಾರಿ ಕಾಂಗ್ರೇಸ್ ನ ಆಯನೂರು ಮಂಜುನಾಥ್ ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ತನ್ನ ಪ್ರಾಬಲ್ಯ ಸಾಧಿಸಿದೆ.