ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ಮೂರನೇ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಶಸ್ತಿಯನ್ನು ಗೆದ್ದು ಬೀಗಿದೆ.
ಶ್ರೇಯಸ್ ಅಯ್ಯರ್ ನಾಯಕತ್ವದ ಕೆಕೆಆರ್ ತಂಡ ಭಾನುವಾರ ನಡೆದ ಫೈನಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ (ಎಸ್ಆರ್ಹೆಚ್) ಅನ್ನು 8 ವಿಕೆಟ್ಗಳಿಂದ ಸೋಲಿಸಿ ಟ್ರೋಫಿಯನ್ನು ಗೆದ್ದುಕೊಂಡಿದೆ.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬೌಲಿಂಗ್ ಮಾಡಿದ ಕೋಲ್ಕತ್ತಾ, ಐಪಿಎಲ್ ಫೈನಲ್ನಲ್ಲಿ ಹೈದರಾಬಾದ್ ತಂಡವನ್ನು 18.3 ಓವರ್ಗಳಲ್ಲಿ 113 ರನ್ಗಳ ಕನಿಷ್ಠ ಸ್ಕೋರ್ಗೆ ಆಲೌಟ್ ಮಾಡಿತು. ನಂತರ 10.3 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 114 ರನ್ ಗುರಿ ಸುಲಭವಾಗಿ ಬೆನ್ನಟ್ಟಿ ಪ್ರಶಸ್ತಿ ಗೆದ್ದುಕೊಂಡಿತು.
114 ರನ್ಗಳ ಅಲ್ಪ ಮೊತ್ತದ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ಗೆ ಉತ್ತಮ ಆರಂಭ ಸಿಗಲಿಲ್ಲ. ಸುನಿಲ್ ನರೈನ್ ತಮ್ಮ ಇನ್ನಿಂಗ್ಸ್ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿ ಎರಡನೇ ಎಸೆತದಲ್ಲಿ ಔಟಾದರು. ಆ ನಂತರ ರಹಮಾನುಲ್ಲಾ ಗುರ್ಬಾಜ್ ಒಂದು ತುದಿಯಿಂದ ದೃಢವಾಗಿ ನಿಂತರು. ಇನ್ನೊಂದು ತುದಿಯಲ್ಲಿ ವೆಂಕಟೇಶ್ ಅಯ್ಯರ್ ಅಜೇಯ 52 ರನ್ ಬಿರುಸಿನ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದರು.
ಗುರ್ಬಾಜ್ ಮತ್ತು ಅಯ್ಯರ್ ಜೋಡಿಯು ಪವರ್ಪ್ಲೇ ಓವರ್ಗಳಲ್ಲಿ ತಂಡದ ಸ್ಕೋರ್ ಅನ್ನು ಒಂದು ವಿಕೆಟ್ಗೆ 72 ರನ್ಗಳಿಗೆ ಕೊಂಡೊಯ್ದರು. 32 ಎಸೆತಗಳಲ್ಲಿ 39 ರನ್ ಗಳಿಸಿದ ಗುರ್ಬಾಜ್ 9ನೇ ಓವರ್ನಲ್ಲಿ ಔಟಾದರು.
ಅಂತಿಮವಾಗಿ, 11ನೇ ಓವರ್ನಲ್ಲಿ ಮೂರು ಸಿಂಗಲ್ಸ್ಗಳನ್ನು ತೆಗೆದುಕೊಳ್ಳುವ ಮೂಲಕ, KKR ಬ್ಯಾಟ್ಸ್ಮನ್ಗಳು 8 ವಿಕೆಟ್ಗಳಿಂದ ತಮ್ಮ ಗೆಲುವನ್ನು ಖಚಿತಪಡಿಸಿದರು.
ಇದರೊಂದಿಗೆ ಕೆ.ಕೆ.ಆರ್. ಮೂರನೇ ಬಾರಿಗೇ ಐಪಿಎಲ್ ಟ್ರೋಪಿ ಎತ್ತಿಹಿಡಿದಿದ್ದು, ಸುಮಾರು ಒಂದೂವರೆ ತಿಂಗಳ ಚುಟುಕು ಕ್ರಿಕೆಟ್ ಹಬ್ಬಕ್ಕೆ ತೆರೆಬಿದ್ದಿದೆ.
ಎಸ್.ಆರ್.ಹೆಚ್. ಇನ್ನಿಂಗ್ಸ್ ಮೊಟಕುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವೇಗದ ಬೌಲರ್ ಮಿಚಲ್ ಸ್ಟಾರ್ಕ್ ಪಂದ್ಯ ಪುರುಷ ಪ್ರಶಸ್ತಿ ಗಳಿಸಿದರು.
ಟೂರ್ನಿಯಲ್ಲಿ 488 ರನ್ ಮತ್ತು 17 ವಿಕೆಟ್ ಕಬಳಿಸಿದ ಸವ್ಯಸಾಚಿ ಸುನಿಲ್ ನರೈನ್ ಸರಣಿ ಪುರುಷ ಪ್ರಶಸ್ತಿ ಗಳಿಸಿಕೊಂಡರು.
ಟೂರ್ನಿಯಲ್ಲಿ 15 ಇನ್ನಿಂಗ್ಸ್ ಗಳಿಂದ 741 ರನ್ ಗಳಿಸಿದ ಆರ್ ಸಿ ಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ಪಡೆದುಕೊಂಡರೆ, ಒಟ್ಟು 24 ವಿಕೆಟ್ ಗಳಿಸಿ ಮಿಂಚಿದ ಪಂಜಾಬ್ ಕಿಂಗ್ಸ್ ಬೌಲರ್ ಹರ್ಷಲ್ ಪಟೇಲ್ ಪರ್ಪಲ್ ಕ್ಯಾಪ್ ಪ್ರಶಸ್ತಿ ಪಡೆದುಕೊಂಡರು.