ತಾಯಿ ಮಗುವಿನ ನಡುವಿನ ಬಾಂಧವ್ಯ ಸಾರುವ ಕಥಾ ಹಂದರವುಳ್ಳ ಚಿತ್ರ ನಿಂಬಿಯ ಬನಾದ ಮ್ಯಾಗೆ ಎಂದು ನಿರ್ದೇಶಕ ಅಶೋಕ್ ಕಡಬ ಹೇಳಿದರು.
ನಿಂಬಿಯ ಬನಾದ ಮ್ಯಾಗೆ ಚಿತ್ರತಂಡದವರು ಚಿಕ್ಕಮಗಳೂರು ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಚಿಕ್ಕಮಗಳೂರು-ಉಡುಪಿ ಬೆಂಗಳೂರಿನಲ್ಲಿ ಶೇ.90ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು ಸೆಪ್ಟೆಂಬರ್ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆಗಳಿದೆ ಎಂದು ಹೇಳಿದರು.
4 ಹಾಡು ಸೇರಿದಂತೆ ಮಲೆನಾಡಿನ ಪ್ರಕೃತಿ ಸೌಂದರ್ಯವನ್ನು ಸೆರೆಹಿಡಿದಿರುವ ಸಂಪೂರ್ಣ ಕಲಾತ್ಮಕ ಚಿತ್ರವಾಗಿದ್ದು, ಈ ಚಿತ್ರದ ಟೀಜರ್ ಬಿಡುಗಡೆಗೊಂಡಿದ್ದು ಕನ್ನಡದ ಜನತೆ ವೀಕ್ಷಿಸಿ ಪ್ರೋತ್ಸಾಹಿಸುವಂತೆ ಮನವಿ ಮಾಡಿಕೊಂಡರು. ಈ ಚಿತ್ರದ ಕಥೆ ನಿರ್ದೇಶನ ಜವಾಬ್ದಾರಿಯನ್ನು ತಾವೇ ಹೊತ್ತಿರುವುದಾಗಿ ಹೇಳಿದರು.
ನಾಯಕ ನಟ ಡಾ.ರಾಜಕುಮಾರ್ರವರ ವಂಶದ ಕುಡಿ ಷಣ್ಮುಗಂ ಗೋವಿಂದರಾಜ್ ಮಾತನಾಡಿ ಈ ಕಥೆಯಲ್ಲಿ ಬರುವ ತಾಯಿ ಮಗನ ಬಾಂಧವ್ಯದ ಚಿತ್ರೀಕರಣಕ್ಕೆ ಚಿಕ್ಕಮಗಳೂರಿನ ಪರಿಸರವೇ ಸೂಕ್ತ ಎನಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಚಿತ್ರೀಕರಣ ಮಾಡಲಾಗಿದೆ ಎಂದರು. ಅದರೊಂದಿಗೆ ಸ್ಥಳೀಯ ಕಲಾವಿದರಿಗೂ ಅವಕಾಶ ಕಲ್ಪಿಸಲಾಗಿದೆ ಎಂದರು.
ಈ ಗೋಷ್ಠಿಯಲ್ಲಿ ನಿರ್ಮಾಪಕ ಮಾದೇಶ್, ಛಾಯಾಗ್ರಾಹಕ ಸಿದ್ದೇಶ್, ವಕೀಲ ಸದಾನಂದ, ಸ್ಥಳೀಯ ನಟರಾದ ನಟ, ವಕೀಲ ವಿ.ಕೆ. ರಘು, ಛಾಯಾಗ್ರಾಹಕ ಮೂರ್ತಿ ಇದ್ದರು.