ಕಾಂಗ್ರೆಸ್ ಸೇರಿರುವ ಮೂಡಿಗೆರೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಬಿಜೆಪಿಯಿಂದ ಒಕ್ಕಲಿಗರಿಗೆ ಅನ್ಯಾಯವಾಗಿದೆ ಎಂಬ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಸುಳ್ಳು. ಅವರು ಶಾಸಕರಾಗಿದ್ದ ಅವಧಿಯಲ್ಲಿ ಒಕ್ಕಲಿಗ ಹಾಗೂ ದಲಿತ ಸಮುದಾಯಕ್ಕೆ ಯಾವುದೆ ಕೊಡುಗೆ ನೀಡಿಲ್ಲ. ಮೂಲೆಯಲ್ಲಿದ್ದ ಅವರನ್ನು ಕರೆತಂದು ಸಾರ್ವಜನಿಕರಿಗೆ ಪರಿಚಯಿಸಿ ಮೂರು ಬಾರಿ ಶಾಸಕ ಒಮ್ಮೆ ಜಿಪಂ ಸದಸ್ಯರನ್ನಾಗಿ ಮಾಡಿದ್ದು ಬಿಜೆಪಿ ಎಂಬುದನ್ನು ಅವರು ಮರೆತುಬಿಟ್ಟಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕೆ ಬೇರೆ ಪಕ್ಷಕ್ಕೆ ಹೋಗಿ ಬಿಜೆಪಿಯ ವಿರುದ್ಧ ಮಾತನಾಡುತ್ತಿದ್ದಾರೆ. ಅವರಿಗೆ ಇದು ಶೋಭೆ ತರುವುದಿಲ್ಲ ಎಂದು ಮೂಡಿಗೆರೆ ಮಂಡಲ ಬಿ.ಜೆ.ಪಿ. ಅಧ್ಯಕ್ಷ ಟಿ.ಎಂ. ಗಜೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಮೂಡಿಗೆರೆ ಪತ್ರಿಕಾ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ; ಕುಮಾರಸ್ವಾಮಿ ಒಕ್ಕಲಿಗರಿಂದ ಎಲ್ಲಾ ರೀತಿಯ ಅನುಕೂಲ ಪಡೆದು ಇದೀಗ ಒಕ್ಕಲಿಗರ ವಿರುದ್ಧವೇ ಮಾತನಾಡುತ್ತಿದ್ದಾರೆ. ಅವರು ತಮ್ಮ ಅಧಿಕಾರ ಅವಧಿಯಲ್ಲಿ ಒಕ್ಕಲಿಗರಾಗಲಿ, ದಲಿತರಾಗಲಿ ಅಥವಾ ಯಾವುದೇ ಇತರೆ ಸಮುದಾಯದ ನಾಯಕರನ್ನು ಬೆಳೆಸಲಿಲ್ಲ. ಎಲ್ಲಿ ಮುಂದೆ ನಮಗೆ ಪ್ರತಿಸ್ಪರ್ಧಿಯಾಗುತ್ತಾರೋ ಎಂದು ಮೀಸಲು ಕ್ಷೇತ್ರದಲ್ಲಿ ಜಿ.ಪಂ. ಚುನಾವಣೆಗೆ ನಿಂತಿದ್ದ ಬಿ.ಜೆ.ಪಿ.ಯ ದಲಿತ ಅಭ್ಯರ್ಥಿಗಳನ್ನೆಲ್ಲ ಸೋಲಿಸಲು ಪ್ರಯತ್ನಿಸಿದರು ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ ಮಾತನಾಡಿ ; ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಎರಡೇ ದಿನದಲ್ಲಿ ರಾಜ್ಯದಲ್ಲಿ 8 ಕೊಲೆ ನಡೆದಿದೆ. ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆಯಲ್ಲಿ ತೊಡಗಿದ್ದ ಕಾರ್ಯಕರ್ತರ ಮೇಲೆ ಅನ್ಯಕೋಮಿನ ವ್ಯಕ್ತಿ ಕಾರು ಹರಿಸಿ ರಾಮಣ್ಣ ಎಂಬವರನ್ನು ಹಾಗೂ ಹುಬ್ಬಳ್ಳಿಯಲ್ಲಿ ನೇಹ ಎಂಬ ವಿದ್ಯಾರ್ಥಿನಿ ಸೇರಿದಂತೆ 8 ಮಂದಿಯ ಕೊಲೆ ನಡೆದಿದೆ. ಇತ್ತೀಚೆಗೆ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿದೆ. ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಕೂಗಿದ್ದಾರೆ. ಜೈ ಶ್ರೀರಾಮ್ ಎಂದವರಿಗೆ ಅನ್ಯಕೋಮಿನವರು ಹಲ್ಲೆ ನಡೆಸಿದ್ದಾರೆ. ಸರ್ಕಾರದ ಆಡಳಿತ ಚುಕ್ಕಾಣಿ ಹಿಡಿದಿರುವವರು ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಸಂಪೂರ್ಣವಾಗಿ ವಿಫಲರಾಗಿದ್ದಾರೆ.
ಸಿಇಟಿ ಪರೀಕ್ಷೆಯಲ್ಲಿ ಪಠ್ಯಕ್ಕೆ ಸಂಬಂಧಪಡದ 46 ಪ್ರಶ್ನೆಗಳನ್ನು ನೀಡಲಾಗಿದೆ. ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳು ಹೊಸ ಸ್ವರೂಪದ ಪ್ರಶ್ನೆ ನೋಡಿ ತಬ್ಬಿಬಾಗಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಸರ್ಕಾರ ಸವಾರಿ ನಡೆಸುತ್ತಿದೆ. ಕಾಂಗ್ರೆಸ್ಸಿನ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು ಬಿಟ್ಟರೆ ಜಾರಿಗೊಳಿಸಿರಲಿಲ್ಲ. ಮಹಿಳೆಯರು ಬಸ್ ಹತ್ತಿದಾಗ ಟಿಕೆಟಿಗೆ ಬಸ್ ನಿರ್ವಾಹಕ ಹಣ ಕೇಳುತ್ತಿದ್ದರು. ಈ ವಿಚಾರವಾಗಿ ಸರ್ಕಾರದ ಮೇಲೆ ಬಿಜೆಪಿ ಶಾಸಕರು ಒತ್ತಡ ಹೇರಿದ ಬಳಿಕ ಗ್ಯಾರಂಟಿ ಯೋಜನೆ ಜಾರಿಗೊಳಿಸಲಾಗಿದೆ. ಗ್ಯಾರಂಟಿ ಯೋಜನೆಗೂ ಕಾಂಗ್ರೆಸ್ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗೋಷ್ಠಿಯಲ್ಲಿ ಸುಜಿತ್, ಸಚಿನ್, ವಿನಯ್ ಹಳೆಕೋಟೆ, ಕೊಣಗೆರೆ ಸುಂದರೇಶ್, ನಯನ ತಳವಾರ, ಧನಿಕ್ ಕೆ.ಆರ್, ಪ್ರಕಾಶ್ ಇತರರಿದ್ದರು.