ದೇವಸ್ಥಾನಗಳು ಸಂಸ್ಕಾರವನ್ನು ಕೊಡುವಂತ ತಾಣಗಳು ಆಗಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಬಹುತೇಕ ದೇವಸ್ಥಾನಗಳಲ್ಲಿ ರಾಜಕೀಯ ದ್ವೇಷ ಅಸೂಯೆ ಗುಂಪುಗಾರಿಕೆ ಸ್ವಾರ್ಥದ ಚಿಂತನೆಯಿಂದ ಭಾರತೀಯ ಸಂಸ್ಕೃತಿಗೆ ಪೆಟ್ಟು ಬೀಳುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ದೇವಸ್ಥಾನಗಳಲ್ಲಿ ಆಧ್ಯಾತ್ಮಿಕ ಚಟುವಟಿಕೆಗಳು ಹೆಚ್ಚಾಗಿ ನಡೆಯಬೇಕಿದೆ ಹೊರತು ದೇವಸ್ಥಾನಕ್ಕೆ ಬಂದು ರಾಜಕೀಯ ಊರು ಮನೆ ಸಮಾಚಾರ ಪಕ್ಕದ ಮನೆಯ ಸಮಾಚಾರ ಇನ್ನೊಬ್ಬರ ವಿಷಯವನ್ನು ಮಾತಾಡುವಂತ ಪ್ರವೃತ್ತಿಯನ್ನು ಜನ ನಿಲ್ಲಿಸಬೇಕು. ಡಾ ಡಿ ವೀರೇಂದ್ರ ಹೆಗ್ಗಡೆ ಅವರ ಅಭಿಲಾಷೆಯಂತೆ ದೇವಸ್ಥಾನಗಳು ಆಧ್ಯಾತ್ಮಿಕ ಚಿಂತನೆಯ ಮುಖಾಂತರ ಸುಂದರ ಸ್ವಾಸ್ಥ್ಯ ಸಮಾಜಕ್ಕಾಗಿ ಒಳ್ಳೆಯ ಸಂಸ್ಕಾರ ಕೊಡುವಂಥ ಕೇಂದ್ರಗಳಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ತಾನ ಟ್ರಸ್ಟಿನ, ಟ್ರಸ್ಟಿ ಎ.ಜೆ ಪ್ರಶಾಂತ್ ಚಿಪ್ರಗುತ್ತಿ ಹೇಳಿದರು.
ಅವರು ಚಿಕ್ಕಮಗಳೂರು ತಾಲೂಕು ಆಣೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ಅಮೃತೇಶ್ವರ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪೂಜ್ಯ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು 2,50,000 (ಎರಡು ಲಕ್ಷದ ಐವತ್ತು ಸಾವಿರ) ರೂಪಾಯಿಯ ಡಿ.ಡಿ ಯನ್ನು ಮಂಜೂರು ಮಾಡಿದ್ದು. ಇದನ್ನು ದೇವಸ್ಥಾನದ ಸಮಿತಿಯವರಿಗೆ ಹಸ್ತಾಂತರ ಮಾಡಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಗ್ರಾಮ ಅಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಸದಾನಂದ ಬಂಗೇರ ಮಾತನಾಡಿ ಪೂಜ್ಯರು ಮಾಡುತ್ತಿರುವ ಸತ್ಕಾರ್ಯಗಳು ಸಮಾಜವನ್ನು ಮುಟ್ಟಲಿ ಎಂದು ಹೇಳಿದರು. ತಾಲೂಕು ಯೋಜನಾಧಿಕಾರಿ ಕೊರಗಪ್ಪ ಪೂಜಾರಿ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಮಂಜುನಾಥಗೌಡ, ರಕ್ಷಣಾ ವೇದಿಕೆಯ ಶಶಿ, ಮಹೇಶ್ .ಹೆಚ್.ಎನ್., ರಮೇಶ್ ಜಿ.ಎನ್ ಹಾಗೂ ಇತರರು ಉಪಸ್ಥಿತರಿದ್ದರು.