ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪಶ್ಚಿಮ ಬಂಗಾಳದಲ್ಲಿ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರರು ಪೊಲೀಸರು ಮತ್ತು ಎನ್.ಐ.ಎ ತನಿಖಾ ತಂಡದ ಕಣ್ತಪ್ಪಿಸಲು ನಾನಾ ತಂತ್ರಗಳನ್ನು ರೂಪಿಸಿದ್ದರು. ಪಶ್ಚಿಮ ಬಂಗಾಳದ 4 ಹೋಟೆಲ್ಗಳಲ್ಲಿ ಒಂದೊಂದು ಹೆಸರು, ಕಾರಣ ನೀಡಿ ವಾಸ್ತವ್ಯ ಹೂಡಿದ್ದರು.
ಹೋಟೆಲ್ನಲ್ಲಿ ಉಳಿದುಕೊಳ್ಳಲು ಬೇರೆ ಬೇರೆ ಹೆಸರುಗಳನ್ನು ಬಳಸಿಕೊಂಡಿದ್ದರು. ಬೇರೆಯವರ ಹೆಸರಿನ ಆಧಾರ್ ಕಾರ್ಡ್ ಗಳಲ್ಲಿ ಬಳಸಿಕೊಂಡಿದ್ದರು. ಅದರಲ್ಲಿ ಕಲಬುರಗಿಯ ವ್ಯಕ್ತಿಯೊಬ್ಬರ ಆಧಾರ್ ಕಾರ್ಡ್ ಕೂಡ ಇದೆ. ಹಾಗಾದ್ರೆ, ಎಲ್ಲೆಲ್ಲಿ, ಏನೇನು ಹೆಸರು ನೀಡಿ ಉಳಿದುಕೊಳ್ಳುತ್ತಿದ್ದರು? ಎನ್ಐಎ ಅಧಿಕಾರಿಗಳ ಬಲೆಗೆ ಬಿದ್ದದ್ದು ಹೇಗೆ ಎಂಬ ಕುತೂಹಲಕಾರಿ ವಿವರ ಇಲ್ಲಿದೆ.
ಮಾರ್ಚ್ ಒಂದರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇರಿಸಿದ್ದ ವ್ಯಕ್ತಿ ನಂತರ ಬಳ್ಳಾರಿ, ತುಮಕೂರು ಮುಂತಾದ ಕಡೆ ಸಿ.ಸಿ. ಕ್ಯಾಮರದಲ್ಲಿ ಸೆರೆಯಾಗಿದ್ದ ಎಂಬ ಶಂಕೆಯ ಮೇಲೆ ಅಲ್ಲೆಲ್ಲ ತನಿಖಾ ತಂಡ ತೀವ್ರ ಶೋಧ ನಡೆಸಿತ್ತು. ಜೈಲಿನಲ್ಲಿದ್ದ ಕೆಲವು ಶಂಕಿತರ ವಿಚಾರಣೆಯಿಂದ ಇದು ಉಗ್ರ ಅಬ್ದುಲ್ ಮತೀನ್ ತಾಹ ನ ಕೈವಾಡದಿಂದ ನಡೆದಿರುವ ಸ್ಪೋಟ ಎಂಬುದು ಬಯಲಾಗಿತ್ತು. ಬಾಂಬರ್ ತಲೆಗೆ ಧರಿಸಿದ್ದ ಟೋಪಿಯೂ ಕೆಲವೊಂದು ಸುಳಿವು ನೀಡಿತ್ತು. ಸಿಕ್ಕ ಸಣ್ಣ ಸುಳಿವಿನ ಬೆನ್ನತ್ತಿ ಹೊರಟ ತನಿಖಾ ತಂಡ ಬಾಂಬ್ ತಯಾರಿಕೆಗೆ ಕಚ್ಚಾ ವಸ್ತು ಸರಬರಾಜು ಮಾಡಿದ್ದ ಎಂಬ ಆರೋಪದ ಮೇಲೆ ಚಿಕ್ಕಮಗಳೂರು ನಗರ ವಾಸಿ ಕಳಸ ಮೂಲದ ಮುಜಾಮಿಲ್ ಎಂಬುವವನನ್ನು ವಶಕ್ಕೆ ಪಡೆಯಲಾಗಿತ್ತು.
ಇದೀಗ ತನಿಖಾ ತಂಡ ನೀಡಿರುವ ಮಾಹಿತಿಯಂತೆ ಕೆಫೆಯಲ್ಲಿ ಬಾಂಬ್ ಇರಿಸಿದ್ದ ಮತ್ತು ಇದಕ್ಕೆ ಮಾಸ್ಟರ್ ಮೈಂಡ್ ಆಗಿದ್ದ ಇಬ್ಬರು ಶಂಕಿತ ಉಗ್ರರಾದ ಮುಸ್ಸಾವೀರ್ ಹುಸೈನ್ ಶಾಜೀಬ್ ಹಾಗೂ ಅಬ್ದುಲ್ ಮತೀನ್ ಅಹ್ಮದ್ ತಾಹ ಇವರುಗಳು ಬಾಂಬ್ ಸ್ಫೋಟದ ನಂತರ ಪಶ್ಚಿಮ ಬಂಗಾಳ ಕಡೆಗೆ ಕಾಲ್ಕಿತ್ತಿದ್ದಾರೆ. ಅವರು ಕಲ್ಕತ್ತದ ವಿವಿಧ ಲಾಡ್ಜ್ ಗಳಲ್ಲಿ ತಲೆಮರೆಸಿಕೊಂಡಿದ್ದ ವಿವರವನ್ನು ತನಿಖಾ ತಂಡ ಬಹಿರಂಗಪಡಿಸಿದ್ದಾರೆ.
1) ಮಾರ್ಚ್ 13: ಶಂಕಿತ ಉಗ್ರರು ಲೆನಿನ್ ಸರಾನಿ ಬಳಿಯ ಹೋಟೆಲ್ ಪ್ಯಾರಡೈಸ್ನಲ್ಲಿ ಮೊದಲು ಉಳಿದುಕೊಂಡಿದ್ದರು. 700 ರೂ. ರೂಮ್ ಬಾಡಿಗೆಯಾಗಿ ಪಾವತಿಸಿದ್ದರು. ಡಾರ್ಜಿಲಿಂಗ್ನಿಂದ ಚೆನ್ನೈಗೆ ಹೊರಟಿರುವ ಪ್ರವಾಸಿಗರು ಎಂದು ಹೋಟೆಲ್ ದಾಖಲೆಗಳಲ್ಲಿ ನಮೂದಿಸಿದ್ದಾರೆ. ವಿಘ್ನೇಶ್ ಎಂದು ಹೆಸರು ಬರೆದು ನಂತರ ಅಳಿಸಿ ಅನ್ಮೋಲ್ ಕುಲಕರ್ಣಿ ಎಂದು ನಮೂದು ಮಾಡಿದ್ದಾರೆ. ಮಹಾರಾಷ್ಟ್ರದ ಥಾಣೆಯ ಯುಶಾ ಶಾನವಾಜ್ ಪಟೇಲ್ ಹಾಗೂ ಕರ್ನಾಟಕ ಕಲಬುರಗಿಯ ಅನ್ಮೋಲ್ ಕುಲಕರ್ಣಿ ಎಂಬ ದಾಖಲೆ ಇರುವ ಆಧಾರ್ ಸಲ್ಲಿಕೆ ಮಾಡಿದ್ದರು.
2) ನಂತರ ಡೈಮಂಡ್ ಹಾರ್ಬರ್ ರಸ್ತೆ ಬಳಿಕ ಗಾರ್ಡನ್ ಗೆಸ್ಟ್ ಹೌಸ್ನಲ್ಲಿ ಸಂಜು ಅಗರ್ವಾಲ್ (36) ಎಂದು ಹೆಸರು ನಮೂದಿಸಿದ್ದರು. ಸ್ನೇಹಿತನ ಜೊತೆ ಜಮ್ಮು-ಕಾಶ್ಮೀರದಿಂದ ಚಿಕಿತ್ಸೆಗೆ ಬಂದಿದ್ದೇವೆ. ಇಲ್ಲಿಂದ ನಾವು ಮತ್ತೆ ಜಾರ್ಖಂಡ್ಗೆ ಹೋಗಬೇಕು. ಈ ಗೆಸ್ಟ್ಹೌಸ್ನಲ್ಲಿದ್ದ ವೇಳೆ ಲೋಕಲ್ ಮಾರ್ಕೆಟ್ಗೆ ತೆರಳಿದ್ದರು. ಲಿಫ್ಟ್ ಇದ್ದರೂ ಪ್ರತಿ ಬಾರಿ ಸ್ಟೇರ್ಕೇಸ್ ಮೂಲಕವೇ ಓಡಾಡುತ್ತಿದ್ದರು.
3) ಇಕ್ಬಾಲ್ಪುರದ ಡ್ರೀಮ್ ಗೆಸ್ಟ್ ಹೌಸ್ಗೆ ಮಾರ್ಚ್ 25 ರಂದು ಬಂದಿದ್ದರು. 1000 ರೂ. ಬಾಡಿಗೆ ನೀಡಿ ಉಳಿದುಕೊಂಡಿದ್ದರು. ನಂತರ ಮಾ.28 ರಂದು ಹೋಟೆಲ್ ರೂಂ ಖಾಲಿ ಮಾಡಿದ್ದರು. ಪ್ರವಾಸಿಗರ ಸೋಗಿನಲ್ಲಿ ರೂಂ ಬುಕ್ ಮಾಡಿದ್ದ ಇವರು ಬಾಡಿಗೆಯನ್ನು ನಗದು ಮೂಕಲವೇ ಪಾವತಿಸಿದ್ದರು.
4) ದಿಘಾ ಎಂಬ ಸ್ಥಳದ ಆಯುಷ್ ಇಂಟರ್ನ್ಯಾಷನಲ್ ಹೋಟೆಲ್ಗೆ ಏ.10 ರಂದು ಶಂಕಿತರು ಎಂಟ್ರಿ ಕೊಟ್ಟಿದ್ದರು. ಇಲ್ಲಿ 3ನೇ ಮಹಡಿಯ ರೂಂ ನಂಬರ್ 404 ರಲ್ಲಿ ವಾಸ್ತವ್ಯ ಹೂಡಿದ್ದರು.
ಖಚಿತ ಸುಳಿವಿನ ಮೇರೆಗೆ ಎನ್ಐಎ ಅಧಿಕಾರಿಗಳು ಹೋಟೆಲ್ಗೆ ಎಂಟ್ರಿ ಕೊಟ್ಟರು. ಅಧಿಕಾರಿಗಳು ರೂಂ ನಂಬರ್ 404ರ ಎದುರಿನ ರೂಂ ಬುಕ್ ಮಾಡಿದ್ದರು. ತಡರಾತ್ರಿ ಪಶ್ಚಿಮ ಬಂಗಾಳ ಪೊಲೀಸರ ಜೊತೆ ಸೇರಿ ಎನ್ಐಎ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ.