ಜೇಸಿಐನ ಮಹತ್ವದ ಕಾರ್ಯಕ್ರಮಗಳಲ್ಲಿ ಒಂದಾದ Daan (ವಿಶೇಷ ಸಂದರ್ಭಗಳಲ್ಲಿ ಸಮಾಜದ ಬಡ ಜನರಿಗೆ ತಮ್ಮ ಕೈಲಾದ ಸಹಾಯ ಹಸ್ತವನ್ನು ಮಾಡುವ ಕಾರ್ಯಕ್ರಮ) ಅಡಿಯಲ್ಲಿ ಜೇಸಿಐ ಮೂಡಿಗೆರೆ, ಜೇಸಿ ಅಲ್ಯುಮಿನಿ ಕ್ಲಬ್ ಮತ್ತು ಜೇಸಿಐ ಯುವ ಮಾಣಿಕ್ಯ ಸಂಯುಕ್ತ ಆಶ್ರಯದಲ್ಲಿ ಮೂಡಿಗೆರೆ ಸಮೀಪದ ಹಾಂದಿ ಗ್ರಾಮದಲ್ಲಿರುವ ಸ್ವಾಮಿ ದಯಾನಂದ ಅಖಿಲ ಭಾರತ ಸೇವಾ ಬಾಲಕರ ಉಚಿತ ಛಾತ್ರಾಲಯ ಕ್ಕೆ ಅಗತ್ಯವಿರುವ ಅಡುಗೆ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಜೇಸಿ ಅಲ್ಯುಮಿನಿ ಕ್ಲಬ್ ವಲಯ ಉಪಾಧ್ಯಕ್ಷರಾದ ಎಚ್. ಕೆ. ಯೋಗೇಶ್ ಮಾತನಾಡಿ ಜೇಸಿಐ ಸಂಸ್ಥೆಯು ವಿಶ್ವದ ಅತಿದೊಡ್ಡ ಯುವ ಸಂಘಟನೆಯಾಗಿದ್ದು, ಯುವಜನರಲ್ಲಿ ವ್ಯಕ್ತಿತ್ವ ವಿಕಸನ ಜೊತೆಗೆ ಅನೇಕ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ. ಶೈಕ್ಷಣಿಕ ಚಟುವಟಿಕೆಗಳಿಗೆ ಜೇಸಿಐ ಹೆಚ್ಚಿನ ಉತ್ತೇಜನ ನೀಡುತ್ತಾ ಬರುತ್ತಿದೆ. ಹಾಂದಿ ಗ್ರಾಮದಲ್ಲಿ ಸೇವಾಶ್ರಮವೂ ಹಲವು ವರ್ಷಗಳಿಂದ ಎಲೆಮರೆಯ ಕಾಯಿಯಂತೆ ಬಡ ಮತ್ತು ಅನಾಥ ಮಕ್ಕಳ ಸೇವೆಯಲ್ಲಿ ನಿರತವಾಗಿದೆ. ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳು ಇಲ್ಲಿ ವಸತಿ ಸಹಿತ ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ. ಜೇಸಿಐ ಸಂಸ್ಥೆಯು ಸೇವಾಶ್ರಮದೊಂದಿಗೆ ನಿಕಟ ಸಂಪರ್ಕ ಇರಿಸಿಕೊಂಡು ಹಲವು ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮೂಡಿಗೆರೆ ಜೇಸಿಐ ಅಧ್ಯಕ್ಷ ಸುಪ್ರೀತ್ ಕಾರಬೈಲ್, ಕಾರ್ಯದರ್ಶಿ ದೀಕ್ಷಿತ್ ಕಣಚೂರು, ಜೇಸಿ ಅಲ್ಯುಮಿನಿ ಕ್ಲಬ್ ಸದಸ್ಯರಾದ ಎಂ.ಡಿ. ವಿಜಯ ಕುಮಾರ್, ನಾಗೇಶ್ ಗೌಡ, ಸಂದೇಶ್ ಹೆಚ್.ಎಸ್. ಸಚಿನ್ ಎಸ್, ಜೆಸಿಐ ಯುವ ಮಾಣಿಕ್ಯದ ಅಧ್ಯಕ್ಷ ಮಹಮ್ಮದ್ ಇರ್ಷಾದ್ ಹಾಗೂ ಲೇಡಿ ಜೇಸಿ ಅಧ್ಯಕ್ಷರಾದ ದಿವ್ಯ ಸುಪ್ರೀತ್, ಜೇಸಿಐ ಮೂಡಿಗೆರೆ ಉಪಾಧ್ಯಕ್ಷರಾದ ರಮ್ಯ ಸಂದೇಶ್ ಉಪಸ್ಥಿತರಿದ್ದರು.