ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ -1 ಫಲಿತಾಂಶದಲ್ಲಿ ಮೂರೂ ವಿಭಾಗಗಳಲ್ಲಿ ಬಾಲಕಿಯರೇ ಪ್ರಥಮ ಸ್ಥಾನಗಳನ್ನು ಗಳಿಸಿದ್ದಾರೆ. ಕಲಾ ವಿಭಾಗದಲ್ಲಿ ಮೂವರು ಪ್ರಥಮ ಸ್ಥಾನ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ಬೆಂಗಳೂರು ಜಯನಗರದ NMKRVಯ ಮೇಧಾ, ವಿಜಯಪುರದ SS ಪಿಯು ಕಾಲೇಜಿನ ವೇದಾಂತ್ ಹಾಗೂ ಬಳ್ಳಾರಿ ಇಂದು ಪಿಯು ಕಾಲೇಜಿನ ಕವಿತಾ ಬಿ.ವಿ ತಲಾ 596 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಧಾರವಾಡ ಕೆಇಬಿ ಪಿಯು ಕಾಲೇಜಿನ ರವೀನಾ ಸೋಮಪ್ಪ ಲಮಾಣಿ 595 ಅಂಕ ಪಡೆದು ದ್ವಿತೀಯರಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ತುಮಕೂರು ಕುವೆಂಪುನಗರದ ವಿದ್ಯಾನಿಧಿ ಕಾಲೇಜಿನ ಗಾನವಿ 597 ಅಂಕಗಳೊಂದಿಗೆ ಪ್ರಥಮ, ಶಿವಮೊಗ್ಗ ಕುಮದ್ವತಿ ಪಿಯು ಕಾಲೇಜಿನ ಪವನ್ ಹಾಗೂ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಹರ್ಷಿತ್ 596 ಅಂಕಗಳೊಂದಿಗೆ ದ್ವಿತೀಯರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಧಾರವಾಡd ಬೈರಿದೇವರಕೊಪ್ಪ ವಿದ್ಯಾನಿಕೇತನ ಪಿಯು ಕಾಲೇಜಿನ ವಿದ್ಯಾಲಕ್ಷ್ಮಿ 598 ಅಂಕಗಳೊಂದಿಗೆ ಪ್ರಥಮ ಸ್ಥಾನ, ಮೈಸೂರು ಮೂಲದ ಉರ್ವಿಶ್ ಪ್ರಶಾಂತ್ ಹಾಗೂ ಉಡುಪಿ ಮೂಲದ ವೈಭವಿ ಆಚಾರ್ಯ ತಲಾ 597 ಅಂಕಗಳೊಂದಿಗೆ ದ್ವಿತೀಯ ಸ್ಥಾನಗಳಲ್ಲಿದ್ದಾರೆ.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ -1 ಫಲಿತಾಂಶದಲ್ಲಿ ಈ ಬಾರಿಯೂ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. 3.59 ಲಕ್ಷ ವಿದ್ಯಾರ್ಥಿನಿಯರ ಪೈಕಿ 3.05 ಲಕ್ಷ ಮಂದಿ ಪಾಸ್, ಶೇಕಡಾವಾರು 84.87 ಮಂದಿ ಪಾಸ್ ಆಗಿದ್ದಾರೆ. ಕಳೆದ ವರ್ಷ ಇವರ ಪ್ರಮಾಣ ಶೇಕಡಾ 80.25 ಇತ್ತು. 3.21 ಲಕ್ಷ ಬಾಲಕರ ಪೈಕಿ 2.47 ಮಂದಿ ಪಾಸ್ ಆಗಿದ್ದು, ಶೇಕಡಾವಾರು 79.98 ಮಂದಿ ಪಾಸ್ ಆಗಿದ್ದಾರೆ. ಕಳೆದ ವರ್ಷದ ಪ್ರಮಾಣ ಶೇ.69.05.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಇಂದು ಫಲಿತಾಂಶ ಪ್ರಕಟಿಸಿದೆ. ಪರೀಕ್ಷೆ ಬರೆದವರಲ್ಲಿ ಒಟ್ಟಾರೆ ಶೇಕಡ 81.15 ಮಂದಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಹೊಸದಾಗಿ ಪರೀಕ್ಷೆ ಬರೆದವರು ಶೇ.84.59 ಫಲಿತಾಂಶ ದಾಖಲಿಸಿದ್ದಾರೆ. ಮರಳಿ ಕಟ್ಟಿದವರಲ್ಲಿ ಶೇ.41.98 ಮಂದಿ ಹಾಗೂ ಖಾಸಗಿಯಾಗಿ ಪರೀಕ್ಷೆ ಬರೆದವರಲ್ಲಿ ಶೇ.48.16 ಮಂದಿ ಉತ್ತೀರ್ಣರಾಗಿದ್ದಾರೆ. ರಾಜ್ಯಾದ್ಯಂತ 2024ರ ದ್ವಿತೀಯ ಪಿಯುಸಿಗೆ 6,98,378 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 3,30,644 ಬಾಲಕರು, 3,67,980 ಬಾಲಕಿಯರು ಪರೀಕ್ಷೆಯನ್ನು ಬರೆದಿದ್ದಾರೆ. ಇವರಲ್ಲಿ 6,81,079 ಮಂದಿ ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಲ್ಲಿ 1,87,891 ಮಂದಿ ಪರೀಕ್ಷೆ ಬರೆದು 1,28,448 ಮಂದಿ ಉತ್ತೀರ್ಣರಾಗಿ ಶೇ.68.96, ವಾಣಿಜ್ಯ ವಿಭಾಗದಲ್ಲಿ 2,15,357 ವಿದ್ಯಾರ್ಥಿಗಳು ಪರೀಕ್ಷೆ ಬರೆದು 1,74,315 ಮಂದಿ ಉತ್ತೀರ್ಣರಾಗಿ ಶೇ.80.94 ಹಾಗೂ ವಿಜ್ಞಾನ ವಿಭಾಗದಲ್ಲಿ 2,77,831 ಮಂದಿ ಪರೀಕ್ಷೆ ಬರೆದು 2,49,927 ಉತ್ತೀರ್ಣರಾಗಿ ಶೇ.89.96 ಫಲಿತಾಂಶ ದಾಖಲಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಎಂದಿನಂತೆ ಮೊದಲ ಸ್ಥಾನದಲ್ಲಿದ್ದು, ಶೇ.97.37 ಫಲಿತಾಂಶ ಪಡೆದುಕೊಂಡಿದೆ. ನಂತರದ ಸ್ಥಾನದಲ್ಲಿ ಉಡುಪಿ ಇದ್ದು, ಶೇ.96.80 ಫಲಿತಾಂಶ ಗಳಿಸಿದೆ. ಮೂರನೇ ಹಾಗೂ ನಾಲ್ಕನೇ ಸ್ಥಾನಗಳಲ್ಲಿ ವಿಜಯಪುರ (ಶೇ.94.89) ಹಾಗೂ ಉತ್ತರ ಕನ್ನಡ (ಶೇ.92.51) ಇವೆ. ಕೊನೆಯ ಸ್ಥಾನದಲ್ಲಿ ಗದಗ (ಶೇ.72.86) ಪಡೆದಿದೆ. ಬೆಂಗಳೂರು ಉತ್ತರ ಶೇ.88.67 ಹಾಗೂ ಬೆಂಗಳೂರು ದಕ್ಷಿಣ ಶೇ.89.57 ಫಲಿತಾಂಶ ದಾಖಲಿಸಿವೆ. ಚಿಕ್ಕಮಗಳೂರು ಜಿಲ್ಲೆ ಶೇ 88.20 ಫಲಿತಾಂಶದೊಂದಿಗೆ 9ನೇ ಸ್ಥಾನ ಗಳಿಸಿಸಕೊಂಡಿದೆ.
ಗಣಿತದಲ್ಲಿ 6960 ಮಂದಿ, ಜೀವಶಾಸ್ತ್ರದಲ್ಲಿ 5925 ಮಂದಿ, 2570 ಮಂದಿ ಕನ್ನಡದಲ್ಲಿ , 1499 ಮಂದಿ ಸಂಸ್ಕೃತದಲ್ಲಿ , ಅರ್ಥಶಾಸ್ತ್ರದಲ್ಲಿ 1403 ಮಂದಿ, ಗಣಕ ವಿಜ್ಞಾನದಲ್ಲಿ 2661 ಮಂದಿ ನೂರಕ್ಕೆ ನೂರು ಅಂಕಗಳನ್ನು ಗಳಿಸಿದ್ದಾರೆ.
ರಾಜ್ಯಾದ್ಯಂತ ಪಿಯುಸಿ ಪರೀಕ್ಷೆಯು 1,124 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. 80+20 ಮಾದರಿಯಂತೆ (80 ಅಂಕಗಳಿಗೆ ಲಿಖಿತ ಪರೀಕ್ಷೆ ಮತ್ತು 20 ಅಂಕಗಳಿಗೆ ಆಂತರಿಕ ಮೌಲ್ಯಮಾಪನ) ಅಂಕಗಳನ್ನು ನೀಡಲಾಗಿತ್ತು. ಮಾ.25ರಿಂದಲೇ ಮೌಲ್ಯಮಾಪನ ಪ್ರಕ್ರಿಯೆ ಆರಂಭಿಸಲಾಗಿತ್ತು. ಮೌಲ್ಯಮಾಪನ ಕಾರ್ಯ ಮುಗಿದ ಬಳಿಕ ಅಂಕಗಳನ್ನು ಕಂಪ್ಯೂಟರೀಕರಣಗೊಳಿಸಲಾಗಿದೆ.