ಬಿಜೆಪಿ ಪರ ಸಂದೇಶ ಹಂಚಿಕೊಂಡ ಆರೋಪದಲ್ಲಿ ಹಾಸನ ಡಿಡಿಪಿಐ ಕಚೇರಿಯ ಪ್ರಥಮ ದರ್ಜೆ ಸಹಾಯಕನನ್ನು (ಎಫ್ಡಿಎ) ಅಮಾನತು ಮಾಡಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರು ಆದೇಶ ಹೊರಡಿಸಿದ್ದಾರೆ.
ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಬಿಜೆಪಿ ಪರ ಹಂಚಿಕೊಂಡು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರಿಂದ ಎಫ್ಡಿಎ ವಿರುದ್ಧ ಇಲಾಖಾ ತನಿಖೆ ಕಾಯ್ದಿರಿಸಿ ಅಮಾನತು ಮಾಡಲಾಗಿದೆ.
ಡಿಡಿಪಿಐ ಕಚೇರಿಯ ಎಫ್ಡಿಎ ಬಿ.ಎಚ್. ಮಂಜುನಾಥ್ ಅಮಾನತುಗೊಂಡ ಸಿಬ್ಬಂದಿ. ಸರ್ಕಾರಿ ನೌಕರರಾಗಿರುವ ಮಂಜುನಾಥ್ ಅವರು ʼಹಾಸನ ಪ್ರೀತಂ ಜೆ ಗೌಡ ಎಂಎಲ್ಎʼ ಎಂಬ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಬಿಜೆಪಿ ಪರ ಪ್ರಚಾರದ ಸಂದೇಶ ಹಂಚಿಕೊಂಡು ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಾಗೇಂದ್ರ ಎಂಬುವವರು ದೂರು ನೀಡಿದ್ದರು. ಪ್ರಕರಣದ ಬಗ್ಗೆ ಮಂಜುನಾಥ್ರ ವಿವರಣೆ ಹಾಗೂ ಡಿಡಿಪಿಐ ವರದಿ ಆಧರಿಸಿ ಜಿಲ್ಲಾಧಿಕಾರಿ ಶಿಸ್ತು ಕ್ರಮ ಕೈಗೊಂಡಿದ್ದಾರೆ.
ಪತ್ನಿಯ ವಿರುದ್ಧವೂ ದೂರು
ಇದೀಗ ಅಮಾನತಾಗಿರುವ ಡಿಡಿಪಿಐ ಕಚೇರಿ ಎಫ್ಡಿಎ ಮಂಜುನಾಥ್ ಅವರ ಪತ್ನಿಯ ವಿರುದ್ಧವೂ ಬಿ.ಜೆ.ಪಿ. ಪರವಾಗಿ ಚುನಾವಣಾ ಪ್ರಚಾರ ನಡೆಸಿದ ಆರೋಪ ಕೇಳಿಬಂದಿದೆ. ಮಂಜುನಾಥ್ ಅವರ ಪತ್ನಿ ಹಾಗೂ ಹಾಸನ ಬಿಇಒ ಮಂಜುಳಾ ವಿರುದ್ಧ ಚುನಾವಣಾ ಪ್ರಚಾರ ನಡೆಸಿದ ಆರೋಪ ಕೇಳಿಬಂದಿತ್ತು. ಹಾಸನ ಪ್ರೀತಂ ಜೆ ಗೌಡ ಎಂಎಲ್ಎ ಎಂಬ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಚುನಾವಣೆ ಸಂದೇಶ ಕಳುಹಿಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಈ ಬಗ್ಗೆ ಪರಿಶೀಲಿಸಿ ವರದಿ ನೀಡಲು ಡಿಡಿಪಿಐಗೆ ಎಡಿಸಿ ಸೂಚಿಸಿದ್ದರು. ಹೀಗಾಗಿ ಇಬ್ಬರಿಗೂ ಡಿಡಿಪಿಐ ಜವರೇಗೌಡ ನೋಟಿಸ್ ಜಾರಿ ಮಾಡಿದ್ದರು. ಇದೀಗ ಎಫ್ಡಿಎ ಮಂಜುನಾಥ್ ಅಮಾನತಾಗಿದ್ದಾರೆ.