ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ಬರುವಾಗ ಜೀಪ್ ಅಪಘಾತ ಸಂಭವಿಸಿ ಪತ್ನಿ ಸಾವನ್ನಪ್ಪಿ, ಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ತಾಲ್ಲೂಕಿನ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಚಿಕ್ಕಮಗಳೂರು ತಾಲ್ಲೂಕಿನ ಕಳವಾಸೆ ಗ್ರಾಮದ ಮೀನಾಕ್ಷಿ (62 ವರ್ಷ) ಸಾವನ್ನಪ್ಪಿದ್ದು, ಅವರ ಪತಿ ಅಪ್ಪುಸ್ವಾಮಿಗೌಡ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಂಗಳವಾರ ರಾತ್ರಿ 7 ಗಂಟೆ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ಕಾಫಿ ಬೆಳೆಗಾರರಾದ ಅಪ್ಪುಸ್ವಾಮಿಗೌಡ ಅವರು ಜ್ವರದಿಂದ ಬಳಲುತ್ತಿದ್ದರಿಂದ ಆಸ್ಪತ್ರೆಗೆ ಹೋಗಲೆಂದು ಚಿಕ್ಕಮಗಳೂರು ಕಡೆಗೆ ಜೀಪಿನಲ್ಲಿ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅಪ್ಪುಸ್ವಾಮಿಗೌಡ ಅವರೇ ಜೀಪು ಚಲಾಯಿಸುತ್ತಿದ್ದರು. ಸಿರವಾಸೆ ಗ್ರಾಮದ ಸಮೀಪ ಬರುವಾಗ ಜೀಪು ನಿಯಂತ್ರಣ ಕಳೆದುಕೊಂಡು ಮರವೊಂದಕ್ಕೆ ಗುದ್ದಿ ಉರುಳಿ ಬಿದ್ದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ದಂಪತಿಗಳನ್ನು ಚಿಕ್ಕಮಗಳೂರು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಪತ್ನಿ ಮೀನಾಕ್ಷಿಯವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಜೀಪು ಚಲಾಯಿಸುತ್ತಿದ್ದ ಪತಿ ಅಪ್ಪುಸ್ವಾಮಿಗೌಡ ಅವರ ತಲೆ ಮತ್ತು ಕಾಲಿನ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೀನಾಕ್ಷಿಯವರ ಸಾವಿನ ಸುದ್ದಿ ಕೇಳಿ ಅವರ ಬಂಧುಗಳು, ಕುಟುಂಬದವರು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಬಂಧುಗಳ ರೋಧನ ಮುಗಿಲು ಮುಟ್ಟಿತ್ತು. ಮೃತ ಮೀನಾಕ್ಷಿಯವರು ಪತಿ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.