ಕೆರೆಯಲ್ಲಿ ಈಜಲು ಹೋದ ಓರ್ವ ಬಾಲಕ ಹಾಗೂ ಮುಳುಗುತ್ತಿದ್ದ ಆತನನ್ನು ರಕ್ಷಿಸಲು ಹೋದ ರೈತನು ನೀರುಪಾಲಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನಲ್ಲಿ ಮಂಗಳವಾರ ಈ ದುರ್ಘಟನೆ ನಡೆದಿದೆ.
ಕಡೂರು ತಾಲ್ಲೂಕಿನ ಚಿಕ್ಕಂಗಳ ಗ್ರಾಮದ ಕೆರೆಯಲ್ಲಿ ಇಬ್ಬರು ನೀರುಪಾಲಾಗಿದ್ದಾರೆ. ಮೃತರನ್ನು ಗ್ರಾಮದ ಕೃಷಿಕ ಕೃಷ್ಣನಾಯ್ಕ (65 ವರ್ಷ) ಹಾಗೂ ಆದರ್ಶ(14 ವರ್ಷ) ಎಂದು ಗುರುತಿಸಲಾಗಿದೆ.
ಕೆರೆಯಲ್ಲಿ ಕುರಿಗಳಿಗೆ ನೀರು ಕುಡಿಸಲೆಂದು ಸಾರ್ವಜನಿಕ ಕೆರೆಗೆ ಕೃಷ್ಣನಾಯ್ಕ ತನ್ನ ಕುರಿಗಳನ್ನು ಹೊಡೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಕೆರೆಯ ಗುಂಡಿಯೊಂದರಲ್ಲಿ ಇಬ್ಬರು ಬಾಲಕರು ಈಜಲು ಹೋಗಿ ನೀರಿನಲ್ಲಿ ಮುಳುಗುತ್ತಿದ್ದುದನ್ನು ಗಮನಿಸಿದ್ದಾರೆ. ತಕ್ಷಣ ಬಾಲಕರ ರಕ್ಷಣೆಗೆ ಧಾವಿಸಿದ ಕೃಷ್ಣನಾಯ್ಕ ಓರ್ವ ಬಾಲಕನನ್ನು ರಕ್ಷಿಸಿ ಮತ್ತೋರ್ವ ಬಾಲಕನನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಕೆರೆಯ ಕೆಸರಿನಲ್ಲಿ ಸಿಲುಕಿ ಇಬ್ಬರೂ ಮೇಲೆ ಬರಲಾಗದೇ ಪ್ರಾಣ ಕಳೆದುಕೊಂಡಿದ್ದಾರೆ.
ಬೇಸಿಗೆ ಕಾಲದಲ್ಲಿ ಮಕ್ಕಳು ನೀರಿನ ಮೂಲಗಳಲ್ಲಿ ಈಜಾಡಲು ತೆರಳಿದ ಸಂದರ್ಭದಲ್ಲಿ ಅಪಾಯಕ್ಕೆ ಸಿಲುಕುವುದು, ಪ್ರಾಣ ಕಳೆದುಕೊಳ್ಳುವುದು ಸಾಮಾನ್ಯವಾಗುತ್ತಿದೆ. ಎರಡು ದಿನದ ಹಿಂದಷ್ಟೇ ತೀರ್ಥಹಳ್ಳಿ ಸಮೀಪ ತುಂಗಾ ನದಿಯಲ್ಲಿ ಈಜಲು ಹೋದ ಮೂವರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಕಡೂರಿನಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಕಾವೇರಿ ನದಿಯಲ್ಲಿ ಮುಳುಗಿ ಪ್ರತ್ಯೇಕ ಪ್ರಕರಣಗಳಲ್ಲಿ 7 ಯುವಕರು ನೀರು ಪಾಲಾಗಿದ್ದರು.
ಪೋಷಕರು ತಮ್ಮ ಮಕ್ಕಳನ್ನು ನೀರಿನ ಮೂಲಗಳಿಗೆ ಕಳುಹಿಸುವಾಗ ಆದಷ್ಟು ಎಚ್ಚರಿಕೆ ನೀಡುವುದು, ಅಪಾಯಕ್ಕೆ ಸಿಲುಕದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.