ರೈತರೊಬ್ಬರು ತಾವೇ ವಿದ್ಯುತ್ ಸರಿಪಡಿಸಲು ಹೋಗಿ ದುರಂತ ಅಂತ್ಯ ಕಂಡಿದ್ದಾರೆ. ಕಂಬ ಏರಿದ್ದಾಗ ಏಕಾಏಕಿ ವಿದ್ಯುತ್ ಪ್ರವಹಿಸಿ ರೈತ ಸುಟ್ಟು ಕರಕಲಾಗಿದ್ದಾರೆ. ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ನಡೆದಿದೆ.
ತರೀಕೆರೆ ತಾಲ್ಲೂಕಿನ ಮಲ್ಲಿಗೆನಹಳ್ಳಿ ಗ್ರಾಮದಲ್ಲಿ ಭಾನುವಾರ ಈ ದುರ್ಘಟನೆ ನಡೆದಿದೆ.
ಮಲ್ಲಿಗೆಹಳ್ಳಿ ಗ್ರಾಮದ ರೈತ ಮಂಜುನಾಥ್ (35) ಮೃತ ದುರ್ದೈವಿ. ಗಂಟೆ ಕಾಲ ವಿದ್ಯುತ್ ಇಲ್ಲದಿರುವುದನ್ನು ಕಂಡು ಸರಿಪಡಿಸಲು ಹೋಗಿದ್ದಾರೆ. ಮೆಸ್ಕಾಂ ಸಿಬ್ಬಂದಿಗೆ ಮಾಹಿತಿ ನೀಡದೇ ಮಂಜುನಾಥ್ ತಾವೇ ವಿದ್ಯುತ್ ಸಮಸ್ಯೆ ಸರಿಪಡಿಸಲು ಹೋಗಿದ್ದಾರೆ. ವಿದ್ಯುತ್ ಕಂಬಕ್ಕೆ ಏರಿ ಸರಿಪಡಿಸುವಾಗ ತಂತಿಯಲ್ಲಿ ವಿದ್ಯುತ್ ಪ್ರವಹಿಸಿದೆ.
ಕ್ಷಣಾರ್ಧದಲ್ಲೇ ಕರೆಂಟ್ ಶಾಕ್ ಹೊಡೆದು, ಮಂಜುನಾಥ್ ಸುಟ್ಟು ಕರಕಲಾಗಿದ್ದಾರೆ. ವಿದ್ಯುತ್ ಕಂಬದಲ್ಲೇ ಮೃತದೇಹವು ಸಿಲುಕಿದೆ. ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದರು. ಮೃತರ ಕುಟುಂಬಸ್ಥರು ಹಾಗೂ ಸ್ಥಳೀಯರ ರೋದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿದ್ದಾರೆ. ಕಂಬದಲ್ಲಿ ಸಿಲುಕಿರುವ ಮೃತದೇಹವನ್ನು ಕೆಳಗಿಳಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.