ಕಾಡಾನೆ ದಾಳಿಯಿಂದ ಸಾವಿನ ಸರಣಿ ಮುಂದುವರಿದಿದೆ. ನಿನ್ನೆ ತಾನೆ ಚಿಕ್ಕಮಗಳೂರಿನಲ್ಲಿ ಕಾರ್ಮಿಕರೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದರೆ ಇಂದು ಕೊಡಗಿನಲ್ಲಿ ಕಾಫಿ ಪ್ಲಾಂಟರ್ ಒಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ.
ಶನಿವಾರ ಬೆಳಿಗ್ಗೆ ಮನೆ ಸಮೀಪದ ತಮ್ಮ ಕಾಫಿ ತೋಟಕ್ಕೆ ಹೋದಾಗ ಆನೆ ದಾಳಿ ನಡೆಸಿದ ಪರಿಣಾಮ ಕಾಫಿ ಬೆಳೆಗಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಡಿಕೇರಿ ತಾಲೂಕಿನ ನಾಪೊಕ್ಲು ಸಮೀಪದ ಕಕ್ಕಬ್ಬೆ ಗ್ರಾಮದಲ್ಲಿ ಘಟನೆ ನಡೆದಿದ್ದು ಮೃತಪಟ್ಟ ದುರ್ದೈವಿಯನ್ನು ಕಂಬೆಯಂಡ ರಾಜ ದೇವಯ್ಯ(59) ಎಂದು ಗುರುತಿಸಲಾಗಿದೆ.
ಆಟೋ ಚಾಲಕರು ಮತ್ತು ಕಾಫಿ ಬೆಳೆಗಾರರು ಆಗಿರುವ ದೇವಯ್ಯ ಇಂದು ಬೆಳಿಗ್ಗೆ ಎಂದಿನಂತೆ ತಮ್ಮ ತೋಟಕ್ಕೆ ಹೋಗಿದ್ದರು. ಈ ವೇಳೆ ಕಾಡಾನೆ ಅವರ ಮೇಲೆ ದಾಳಿ ನಡೆಸಿದೆ. ಅಲ್ಲಿ ಆನೆ ಇದೆ ಎಂಬ ಸುಳಿವೂ ಇಲ್ಲದೆ ಇದ್ದ ದೇವಯ್ಯ ಅವರು ತಮ್ಮ ಪಾಡಿಗೆ ಸಾಗುತ್ತಿದ್ದಾಗ ಆನೆ ಒಮ್ಮಿಂದೊಮ್ಮೆಗೇ ದಾಳಿ ಮಾಡಿ ಅವರನ್ನು ತುಳಿದು ಸಾಯಿಸಿದೆ. ನಾಯಿಯೊಂದೇ ಮನೆಗೆ ವಾಪಾಸ್ಸು ಬಂದಾಗ ಅನುಮಾನಗೊಂಡ ಮನೆಯವರು ತೋಟಕ್ಕೆ ತೆರಳಿ ನೋಡಿದಾಗ ದೇವಯ್ಯ ಅವರನ್ನು ಕಾಡಾನೆ ತುಳಿದು ಸಾಯಿಸಿರುವುದು ಕಂಡು ಬಂದಿತು. ಈ ಸಂದರ್ಭದಲ್ಲಿ ಮೂರು ಕಾಡಾನೆಗಳು ತೋಟದಲ್ಲಿ ಇದ್ದವೆಂದು ಹೇಳಲಾಗಿದೆ.
ಘಟನೆಯಿಂದ ಆ ಭಾಗದ ಜನರು ಭಾರಿ ಆತಂಕಗೊಂಡಿದ್ದು, ಮೃತರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಕುಟುಂಬದವರು, ಮನೆಯ ನಾಯಿ ಕೂಡಾ ಶವದ ಮುಂದೆ ರೋದಿಸುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ.