ರಾಜ್ಯ ಸರ್ಕಾರ ಗ್ಯಾರಂಟಿ ಹೆಸರಲ್ಲಿ ಗಂಡನ ಬಳಿ ಕಿತ್ತು ಹೆಂಡತಿಗೆ ಕೊಡುವ ಗಿಮಿಕ್ ಮಾಡುತ್ತಿದೆ. ದೇಶಕ್ಕೆ, ಅಭಿವೃದ್ಧಿಗೆ, ಬಡವರ ಕಲ್ಯಾಣಕ್ಕೆ ಮೋದಿ ಅವರೇ ರಾಷ್ಟ್ರಕ್ಕೆ ಗ್ಯಾರಂಟಿ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ಶುಕ್ರವಾರ ಚಿಕ್ಕಮಗಳೂರು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರೈತರು ತೆಗೆದುಕೊಳ್ಳುವ ಪಹಣಿ ಬೆಲೆ 15 ರೂ. ಇದ್ದದ್ದನ್ನ 50 ರೂ. ಮಾಡಿ ನಾನು ಕೊಟ್ಟೆ ಎಂದು ಹೇಳಿಕೊಳ್ಳುವುದು ದೊಡ್ಡತನವಲ್ಲ. 20 ರೂ. ಇದ್ದ ಛಾಪಾ ಕಾಗದದ ಬೆಲೆ 200 ರೂ. ಮಾಡಿ ನಾನು ಕೊಟ್ಟೆ ಎಂದು ಕೊಳ್ಳುವುದು ದೊಡ್ಡ ಸಂಗತಿಯಲ್ಲ. ಯಾವೆಲ್ಲಾ ಬೆಲೆ ಹೆಚ್ಚಿಸಿದ್ದಾರೆ ಎಂದು ಪಟ್ಟಿ ಮಾಡಿದರೆ ಜನರು ಇವರಿಗೆ ಮತ ಕೊಡುವುದಿರಲಿ ಬೇರೆ ಏನನ್ನಾದರೂ ಕೊಡುತ್ತಾರೆ ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ದ್ವೇಷದಿಂದ ನಮ್ಮನ್ನು ಸೋಲಿಸಿರಬಹುದು. ಆದರೆ ಜನರ ಪ್ರೀತಿಯನ್ನು ಇಂದಿಗೂ ಉಳಿಸಿಕೊಂಡಿದ್ದೇವೆ. ಅದನ್ನಾಧರಿಸಿಯೇ ಮತ ಕೇಳುತ್ತೇವೆ. ಅತೀ ಹೆಚ್ಚು ಅಂತರದಿಂದ ಲೋಕಸಭೆ ಚುನಾವಣೆ ಗೆಲ್ಲುತ್ತೇವೆ ಮಾಜಿ ಸಚಿವ ಸಿ.ಟಿ.ರವಿ ಎಂದರು
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯ ಜನರು 2023ರ ವಿಧಾನಸಭೆ ಚುನಾವಣೆ ಸಂದರ್ಭದ ಕಹಿಯನ್ನು ಮರೆಸಿ ಸಿಹಿಯನ್ನ ಉಣಿಸುವಂತಹ ಕೆಲಸವನ್ನು ಮಾಡಲಿದ್ದಾರೆ ವಿಶ್ವಾಸ ವ್ಯಕ್ತಪಡಿಸಿದರು.
ಅಭಿವೃದ್ಧಿ ಪ್ರಶ್ನೆಯನ್ನು ಯಾರಾದರೂ ಮುಂದಿಟ್ಟರೆ, ಇಲ್ಲಿಗೆ ಮೆಡಿಕಲ್ ಕಾಲೇಜು ತಂದಿದ್ದು, ಸೂಪರ್ಸ್ಪೆಷಾಲಿಟಿ ಆಸ್ಪತ್ರೆ ತಂದಿದ್ದು, ಬಯಲು ಭಾಗದ ಕೆರೆಗಳನ್ನು ತುಂಬಿಸುವ ಯೋಜನೆ ತಂದದ್ದು, ಮನೆ ಮನೆಗೆ ಜಲ್ ಜೀವನ್ ಮಿಷನ್ ಯೋಜನೆ ಮೂಲಕ ನೀರು ಕೊಡುತ್ತಿರುವುದು, ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿದ್ದು, ಗ್ರಾಮಗಳಲ್ಲಿ ಸಿಸಿ ರಸ್ತೆ ನಿರ್ಮಾಣ, ಜಾತಿ ಜಗಳವಿಲ್ಲದೆ ಎಲ್ಲರನ್ನೂ ಒಂದಾಗಿ ತೆಗೆದುಕೊಂಡು ಹೋಗಿರುವುದು ಎಲ್ಲ ಸಾಧನೆಗಳು ಜನರ ಮುಂದಿದೆ ಎಂದರು.
ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಜನ ಬಯಸುತ್ತಿದ್ದಾರೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ 1991 ನೇ ಸಾಲಿನಿಂದಲೂ ನಿರಂತರವಾಗಿ ಬಿಜಪಿಗೆ ಲೋಕಸಭೆಯಲ್ಲಿ ಮುನ್ನಡೆ ನೀಡುತ್ತಲೇ ಬಂದಿದೆ. ಈ ಬಾರಿಯೂ ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿಸಿ ಈ ಕ್ಷೇತ್ರ ಮತ್ತು ಈ ಜಿಲ್ಲೆ ಹೆಚ್ಚು ಮುನ್ನಡೆ ಕೊಡಲಿದೆ ಎಂದರು.
ಇದು ಪಂಚಾಯ್ತಿ ಚುನಾವಣೆ ಅಲ್ಲ. ದೇಶದ ಚುನಾವಣೆ. ದೇಶಕ್ಕೆ ನೇತೃತ್ವ ಯಾರದ್ದು ಬೇಕು ಎನ್ನುವುದು ಜನರಿಗೆ ಗೊತ್ತಿದೆ. ದೇಶ ಉಳಿಸಲು ತುಕ್ಡೆಗ್ಯಾಂಗ್ನಿಂದ ಆಗುವುದಿಲ್ಲ. ಬರೇ ವಿಧಾನ ಸೌಧದಲ್ಲಿ ಪಾಕಿಸ್ಥಾನ್ ಜಿಂದಾಬಾದ್ ಎಂದು ಕೂಗಿದವರಿಂದ ಸಂಸತ್ತಿನಲ್ಲೂ ಕೂಗಿಸಬೇಕಾ? ಶೇ.85 ಹಿಂದೂಗಳಿರುವ ದೇಶದಲ್ಲಿ ಹನುಮಾನ್ ಚಾಲಿಸಾ ಹೇಳಿದರೆ ಹಲ್ಲೆ ಮಾಡುತ್ತಾರೆ ಎಂದರೆ ನಾವು ಎಲ್ಲಿದ್ದೇವೆ. ಪಾಕಿಸ್ಥಾನ, ಆಫ್ಗಾನಿಸ್ಥಾನದಲ್ಲಿದ್ದೇವಾ? ಹೀಗಾಗಿ ದೇಶ ಉಳಿಯಲು ಮೋದಿ ಅವರೇ ಬರಬೇಕಿದೆ. ಜನ ಅವರನ್ನೇ ಗೆಲ್ಲಿಸುತ್ತಾರೆ ಎಂದರು