ಚಿಕ್ಕಮಗಳೂರು ತಾಲೂಕಿನ ಮಾಗಡಿ ಚೆಕ್ ಪೋಸ್ಟ್ ನಲ್ಲಿ ಸರ್ಕಾರಿ ಬಸ್ ನಲ್ಲಿ ಸಾಗಿಸುತ್ತಿದ್ದ ದಾಖಲೆಗಳಿಲ್ಲದ 13.20 ಲಕ್ಷ ಮೌಲ್ಯದ 220 ಗ್ರಾಂ. ಚಿನ್ನಾಭರಣಗಳನ್ನು ಸೀಜ್ ಮಾಡಲಾಗಿದೆ.
ಮಾಗಡಿ ಚೆಕ್ ಪೋಸ್ಟ್ ನಲ್ಲಿ ಗುರುವಾರ ಬೆಂಗಳೂರಿನಿಂದ-ಚಿಕ್ಕಮಗಳೂರಿಗೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 220 ಗ್ರಾಂ ಚಿನ್ನದ ತಾಳಿ, ನೆಕ್ಲೇಸ್, ಬ್ರಾಸ್ಲೈಟ್, ಬಳೆ, ಸರ, ಉಂಗುರಗಳನ್ನು ಪೊಲೀಸರು ಹಾಗೂ ಚುನಾವಣಾಧಿಕಾರಿಗಳ ತಂಡ ಸೀಜ್ ಮಾಡಿದ್ದಾರೆ.
ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬರುತ್ತಿದ್ದ ಬಸ್ ನಲ್ಲಿ ವ್ಯಕ್ತಿಯೊಬ್ಬರು ಡ್ರೈವರ್ ಬಳಿಯಲ್ಲಿ ಬಾಕ್ಸ್ ಒಂದನ್ನು ಕೊಟ್ಟು ಇದನ್ನು ಚಿಕ್ಕಮಗಳೂರಿನ ವ್ಯಕ್ತಿಯೊಬ್ಬರಿಗೆ ತಲುಪಿಸುವಂತೆ ಹೇಳಿದ್ದರು. ಡ್ರೈವರ್ ಗೆ ಅದರಲ್ಲಿ ಏನಿದೆ ಎಂಬುದು ತಿಳಿದಿರಲಿಲ್ಲ ಎನ್ನಲಾಗಿದೆ.
ಮಾಗಡಿ ಚೆಕ್ ಪೋಸ್ಟ್ ಬಳಿ ತಪಾಸಣೆ ನಡೆಸುವಾಗ ಬಾಕ್ಸ್ ಬಿಚ್ಚಿ ನೋಡಿದಾಗ ಅದರಲ್ಲಿ ತರಹೇವಾರಿ ಚಿನ್ನಾಭರಣಗಳು ಇರುವುದು ಪತ್ತೆಯಾಗಿತ್ತು. ಈ ಚಿನ್ನಾಭರಣಗಳಿಗೆ ಸಂಬಂಧಿಸಿದ ಯಾವುದೇ ದಾಖಲೆ ನೀಡದ ಹಿನ್ನೆಲೆಯಲ್ಲಿ ಆಭರಣಗಳನ್ನು ಸೀಜ್ ಮಾಡಲಾಗಿದೆ.
ಈ ಚಿನ್ನಾಭರಣಗಳ ಒಟ್ಟು ಮೌಲ್ಯ 13.20 ಲಕ್ಷ ಎಂದು ಅಧಿಕಾರಿಗಳ ತಂಡ ಅಂದಾಜಿಸಿದ್ದಾರೆ. ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಭರಣಗಳ ಮೂಲದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಇದು ವಿವಾಹಕ್ಕೆ ಸಂಬಂಧಿಸಿದ ವಧುವಿನ ಆಭರಣವಾಗಿದ್ದು, ಮದುವೆ ಮನೆಗೆ ಹೋಗಬೇಕಾದ ಆಭರಣ ಈಗ ಪೊಲೀಸ್ ಠಾಣೆಯ ವಶವಾಗಿದ್ದು, ಸೂಕ್ತ ದಾಖಲೆಗಳನ್ನು ತೋರಿಸಿ ಆಭರವಣವನ್ನು ಮರಳಿ ಪಡೆಯಬೇಕಾದ ಅನಿವಾರ್ಯತೆಯನ್ನು ಎದುರಿಸುವಂತಾಗಿದೆ.
ಇದಲ್ಲದೇ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಕಸ್ಕೆಬೈಲ್ ಚೆಕ್ ಪೋಸ್ಟ್ ನಲ್ಲಿ ವಾಹನದಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 3,62,750 ರೂ. ನಗದನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದರೆ ಹಾಗೆಯೇ ಗುರುವಾರ ಬೆಳಿಗ್ಗೆ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ 1ಲಕ್ಷ ರೂ. ನಗದು ಹಾಗೂ ಅಜ್ಜಂಪುರ ಬಳಿ ಚೆಕ್ ಪೋಸ್ಟ್ ನಲ್ಲಿ 1.30ಲಕ್ಷ ರೂ. ನಗದನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.