ಮಾಜಿ ಪೊಲೀಸ್ ಅಧಿಕಾರಿ, ಸದ್ಯ ತಮಿಳುನಾಡು ಬಿ.ಜೆ.ಪಿ. ರಾಜ್ಯಾಧ್ಯಕ್ಷರಾಗಿರುವ ಕೆ. ಅಣ್ಣಾಮಲೈ ಅವರು ಲೋಕಸಭಾ ಚುನಾವಣಾ ಅಖಾಡಕ್ಕೆ ದುಮುಕಿದ್ದಾರೆ.
ತಮಿಳುನಾಡಿನ ಪ್ರತಿಷ್ಠಿತ ಕೊಯಮತ್ತೂರು ಕ್ಷೇತ್ರದಿಂದ ಬಿ.ಜೆ.ಪಿ. ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಯಲಿದ್ದಾರೆ.
ಇಂದು ಬಿ.ಜೆ.ಪಿ. ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕೇವಲ ತಮಿಳುನಾಡಿಗೆ ಸಂಬಂಧಿಸಿದ 9 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಇದರಲ್ಲಿ ಕೆ. ಅಣ್ಣಾಮಲೈ ಅವರನ್ನು ಕೊಯಮತ್ತೂರು ಕ್ಷೇತ್ರದಿಂದ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ.
ತೆಲಂಗಾಣ ರಾಜ್ಯಪಾಲ ಹುದ್ದೆಯಿಂದ ರಾಜೀನಾಮೆ ನೀಡಿದ್ದ ತಮಿಲಿಸೈ ಸೌಂದರರಾಜನ್ ಚೆನ್ನೈ ದಕ್ಷಿಣದಿಂದ ಬಿಜೆಪಿ ಪರ ಕಣಕ್ಕೆ ಇಳಿದಿದ್ದಾರೆ. ವಿನೋಜ್ ಪಿ ಸೆಲ್ವನ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚೆನ್ನೈ ಸೆಂಟ್ರಲ್ ನಿಂದ ಸ್ಪರ್ಧಿಸಲಿದ್ದಾರೆ. ಕನ್ಯಾಕುಮಾರಿಯಿಂದ ಪೊನ್ನು ರಾಧಾಕೃಷ್ಣನ್ ಸ್ಪರ್ಧೆ ಮಾಡಲಿದ್ದಾರೆ. ವೆಲ್ಲೂರಿನಿಂದ ಎ ಸಿ ಷಣ್ಮುಗಂ, ಕೃಷ್ಣಗಿರಿಯಿಂದ ಸಿ ನರಸಿಂಹನ್, ಪೆರಂಬಲೂರಿನಿಂದ ಟಿ. ಆರ್ ಪಾರಿವೆಂದಾರ್, ತೂತುಕುಡಿಯಿಂದ ನೈನಾರ್ ನಾಗೇಂದ್ರನ್ ಅವರ ಹೆಸರನ್ನು ಬಿಜೆಪಿ ಹೈಕಮಾಂಡ್ ಅಂತಿಮಗೊಳಿಸಿದೆ.
ಕೆ. ಅಣ್ಣಾಮಲೈ ಅವರು ಐ.ಪಿ.ಎಸ್. ಅಧಿಕಾರಿಯಾಗಿ ಕರ್ನಾಟಕದ ಚಿಕ್ಕಮಗಳೂರು, ಉಡುಪಿ ಸೇರಿದಂತೆ ವಿವಿಧೆಡೆ ಕಾರ್ಯನರ್ವಹಿಸಿದ್ದರು.
ಚಿಕ್ಕಮಗಳೂರು ಎಸ್ಪಿಯಾಗಿ ಅವರು ಕಾರ್ಯನಿರ್ವಹಿಸಿ ಜನಪ್ರಿಯತೆ ಗಳಿಸಿದ್ದರು. ದಕ್ಷ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ಜೊತೆಗೆ ಉತ್ತಮ ವಾಗ್ಮಿಯಾಗಿ ಯುವಜನರನ್ನು ಮತ್ತು ವಿದ್ಯಾರ್ಥಿಗಳನ್ನು ತಮ್ಮ ಮಾತುಗಳಿಂದ ಪ್ರೇರೇಪಿಸುತ್ತಿದ್ದರು.
ಅಣ್ಣಾಮಲೈಯವರ ಸಂಘಟನಾ ಚಾತುರ್ಯವನ್ನು ಕಂಡು ಅವರನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಬಿ.ಜೆ.ಪಿ. ಆಹ್ವಾನಿಸಿದ್ದರು. ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದ ಕೆ. ಅಣ್ಣಾಮಲೈ ಬಿ.ಜೆ.ಪಿ. ಸೇರಿ ತಮಿಳುನಾಡಿನಲ್ಲಿ ಬಿ.ಜೆ.ಪಿ. ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕೆ.ಅಣ್ಣಾಮಲೈ ತಮಿಳುನಾಡು ಬಿ.ಜೆ.ಪಿ. ಸಾರಥ್ಯ ವಹಿಸಿದ ನಂತರ ರಾಜ್ಯದಲ್ಲಿ ಬಿ.ಜೆ.ಪಿ. ಸಂಘಟನೆ ದಿನದಿಂದ ದಿನಕ್ಕೆ ಪ್ರಬಲವಾಗುತ್ತಿದೆ. ಇದೀಗ ಲೋಕಸಭಾ ಚುನಾವಣೆಯಲ್ಲಿ ತನ್ನ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಕ್ಷೇತ್ರದ ಜನ ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆ ಕಾದು ನೋಡಬೇಕು.