ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿರುವ ಎಲ್ಲಾ ಜಿಲ್ಲಾ, ತಾಲೂಕು, ಹೋಬಳಿ ಮಟ್ಟದ ಸಮ್ಮೇಳನಗಳು ಕನ್ನಡ ಭಾಷೆ, ನೆಲ, ಸಾಹಿತ್ಯ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿಯೇ ನಡೆದಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.
ಅವರು ಶನಿವಾರ ಮೂಡಿಗೆರೆ ಪಟ್ಟಣದಲ್ಲಿ ಏರ್ಪಡಿಸಿದ್ದ 19 ನೇ ಜಿಲ್ಲಾ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು.
ಕಳೆದ ಬಾರಿ ಕಳಸದಲ್ಲಿ ನಡೆದ ಜಿಲ್ಲಾ ಸಮ್ಮೇಳನ, ಸಾಣೆಹಳ್ಳಿಯಲ್ಲಿ ನಡೆದ ಅಂತರ ಜಿಲ್ಲಾ ಸಮ್ಮೇಳನದ ಲೆಕ್ಕಪತ್ರ ಸದ್ಯದಲ್ಲಿಯೇ ಮಂಡನೆ ಮಾಡಲಿದ್ದೇವೆ. ಉಳಿದಂತೆ ಎಲ್ಲಾ ಸಮ್ಮೇಳನದ ಲೆಕ್ಕಪತ್ರ ಮಂಡಣೆಯಾಗಿದ್ದು, ಎಲ್ಲಾ ಸಮ್ಮೇಳನ ಪಾರದರ್ಶಕವಾಗಿಯೇ ನಡೆದಿದೆ. ಜಿಲ್ಲೆಯಲ್ಲಿ ಕಸಾಪ ಸದಸ್ಯರು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಎಲ್ಲರಿಗೂ ಆಹ್ವಾನ ಪತ್ರಿಕೆ ಕಳುಹಿಸಲು ಲಕ್ಷಾಂತರ ರೂ ವೆಚ್ಚವಾಗುವುದರಿಂದ ಪತ್ರಿಕಾ ಪ್ರಕಟಣೆ ಮೂಲಕ ಆಹ್ವಾನಿಸಲಾಗುವುದು. ಇದು ಕೇವಲ ಸರಕಾರದ ಹಾಗೂ ಪರಿಷತ್ತಿನ ಸಮ್ಮೇಳನವಲ್ಲ. ಇದು ಕನ್ನಡಿಗರೆಲ್ಲರೂ ಒಟ್ಟಾಗಿ ಬೆಸೆಯುವ ಹಬ್ಬವೆಂದು ಹೇಳಿದರು.
ಸಮ್ಮೇಳನದ ಲಾಂಛನ ಅದ್ಭುತವಾಗಿ ಮೂಡಿ ಬಂದಿದೆ. ಇದರಲ್ಲಿ ತಾಯಿ ಭುವನೇಶ್ವರಿ, ಕಾಫಿನಾಡಿನ ಕಾಫಿ, ಕಾಳು ಮೆಣಸು, ಅಡಕೆ, ಟಿ.ತೋಟ, ಪ್ರೇಕ್ಷಣೀಯ ಸ್ಥಳಗಳು, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಮನೆ ಸೇರಿದಂತೆ ಕಾಫಿ ನಾಡಿನ ಸೊಗಡನ್ನು ಬಿಂಬಿಸುತ್ತಿದೆ. ಈ ಸಮ್ಮೇಳನವನ್ನು ನೀತಿ ಸಂಹಿತೆ ಉಲ್ಲಂಘನೆಯಾಗದ ರೀತಿಯಲ್ಲಿ ಅಚ್ಚುಕಟ್ಟಾಗಿ ನಡೆಸಲು ಎಲ್ಲರೂ ಶ್ರಮಿಸಬೇಕೆಂದು ಮನವಿ ಮಾಡಿದರು.
ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಬಿ.ಎಸ್.ಜಯರಾಮ್, ಕೋಶಾಧ್ಯಕ್ಷ ಜೆ.ಎಸ್.ರಘು, ಉಪಾಧ್ಯಕ್ಷ ಬಿ.ಆರ್. ಬಾಲಕೃಷ್ಣ, ಕೆ. ಮಂಚೇಗೌಡ,ಪ್ರಧಾನ ಸಂಚಾಲಕ ಮಗ್ಗಲಮಕ್ಕಿ ಗಣೇಶ್, ಕಸಾಪ ತಾಲೂಕು ಅಧ್ಯಕ್ಷ ಶಾಂತಕುಮಾರ್, ಪ.ಪಂ. ಸದಸ್ಯ ಹೊಸಕೆರೆ ರಮೇಶ್, ಕ.ಸಾ.ಪ. ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಜಗದೀಪ್, ಕಮಲಾಕ್ಷ್ಮಮ್ಮ, ಎಂ.ಎಸ್. ಅನಂತು, ಪ್ರಕಾಶ್, ನಾರಾಯಣ ಮತ್ತಿತರರಿದ್ದರು.